
ಬ್ಯಾಡಗಿ,ಏ29: ಪ್ರತಿಯೊಬ್ಬರೂ ತಮ್ಮ ನಾಗರೀಕ ಕರ್ತವ್ಯವನ್ನು ಚಲಾಯಿಸಲು ಮತ್ತು ಸಮಾಜದ ಸಕ್ರಿಯ ಸದಸ್ಯರಾಗಲು ಮತದಾನವು ಒಂದು ಪ್ರಮುಖ ಮಾರ್ಗವಾಗಿದೆ ಎಂದು ಗ್ರಾಪಂ ಅಭಿವೃಧ್ದಿ ಅಧಿಕಾರಿ ಮಲ್ಲೇಶ ಮೋಟೆನವರ ಹೇಳಿದರು.
ತಾಲೂಕಿನ ಕಲ್ಲೇದೇವರು ಗ್ರಾಮ ಪಂಚಾಯತ ವ್ಯಾಪ್ತಿಯ ಕೆಂಗೊಂಡ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಕೆರೆ ಸುಧಾರಣೆ ಕಾಮಗಾರಿ ಸ್ಥಳದಲ್ಲಿ ತಾಲೂಕಾ ಸ್ವೀಪ್ ಸಮೀತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನವು ಮೂಲಭೂತ ಹಕ್ಕುಗಳ ಜೊತೆಗೆ ನಮ್ಮ ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗಿದೆ ಎಂದು ಹೇಳಿದರು.
ತಾಲೂಕಾ ನರೇಗಾ ಯೋಜನೆಯ ಸಂಯೋಜಕ ಶಾನವಾಜ್ ಚಿಣಗಿ ಮಾತನಾಡಿ, ಚುನಾವಣೆಯಲ್ಲಿ ನಿಮ್ಮ ಮತವು ತುಂಬಾ ಮುಖ್ಯವಾಗಿದೆ ಎಂದು ತಿಳಿಸಿದರಲ್ಲದೇ, ಕೂಲಿ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಎಲ್ಲರೂ ತಪ್ಪದೇ ತಮ್ಮ ಮತವನ್ನು ಚಲಾಯಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಹಾಗೂ ನರೇಗಾ ಸಿಬ್ಬಂದಿಗಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.