
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಏ.04: ರಾಜ್ಯ ವಿಧಾನ ಸಭಾ ಸಾರ್ವಜನಿಕ ಚುನಾವಣೆ ಹಿನ್ನೆಲೆ ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮತ್ತು ಕಚೇರಿ ಸಿಬ್ಬಂದಿ ಮೇಣದ ದೀಪ ವಿಡಿದು ಮತದಾನ ಜಾಗೃತಿ ಜಾಥ ಕೈಗೊಂಡರು.
ಜಾಥಾ ಚಾಲನೆಗೂ, ಮುನ್ನ ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ ಮಾತನಾಡಿ 18 ವರ್ಷ ಮೇಲ್ಪಟ್ಟ ಎಲ್ಲಾರು ಮತದಾನ ಮಾಡಬೇಕು,ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ, ತಮ್ಮ ಹಕ್ಕನ್ನು ಚಲಾಯಿಸುವ ಬಹುಮುಖ್ಯ ದಿನ ಹಾಗಾಗಿ ಮತದಾನದಿಂದ ಯಾರೊಬ್ಬರೂ ದೂರ ಉಳಿಯದೆ, ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸಿದರು.
ಜಾಥಾ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಿಂದ ಪ್ರಾರಂಭಗೊಂಡು,ಮುಖ್ಯರಸ್ತೆ ಮೂಲಕ ಸಾಗಿ, ಉಜ್ಜಿನಿ ರಸ್ತೆಯವರೆಗೆ, ಮತದಾನದ ಮಹತ್ವ ಕುರಿತು ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತ ಮೇಣದ ಬತ್ತಿಯೊಂದಿಗೆ ಜಾಥಾ ಸಾಗಿತು.
ಈ ವೇಳೆ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪೌರಕಾರ್ಮಿಕರು, ತಾಲೂಕು ಪಂಚಾಯಿತಿ ಸಿಬ್ಬಂದಿ ಹಾಗೂ ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಮೈದೂರು ಶಶಿಧರ್ ಇತರರು ಇದ್ದರು.