ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಸುತ್ತಿನ ತರಬೇತಿ

ದಾವಣಗೆರೆ; ಏ.12; ರಾಜ್ಯ ಸಾರ್ವತ್ರಿಕ ವಿಧಾನಸಭಾ  ಚುನಾವಣೆಯು  ಮೇ.10 ರಂದು ನಡೆಯಲಿದ್ದು ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ  ಸೂಚಿಸಿದರು.ಮಂಗಳವಾರ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಜರುಗಿದ ಮತಗಟ್ಟೆ ಪಿ.ಆರ್.ಒ ಹಾಗೂ ಎ. ಪಿ.ಆರ್.ಒ ಅಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.ಸಾರ್ವತ್ರಿಕ ವಿಧಾನಸಭಾ  ಚುನಾವಣೆ ಸಂಬಂಧ ಈಗಾಗಲೇ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತರಬೇತಿ ನಂತರ ಯಾವುದೇ ಲೋಪದೋಷಗಳಿಲ್ಲದಂತೆ, ಅಹಿತಕರ ಘಟನೆಗೆ ಅಸ್ಪದ ಮಾಡಿಕೊಡದಂತೆ ನಿಷ್ಪಕ್ಷಪಾತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಆದ್ಯತೆ ನೀಡಬೇಕು ಎಂದರು.ಸೆಕ್ಟರ್ ಅಧಿಕಾರಿ ಕರಿಬಸಪ್ಪ ಮಾತನಾಡಿ, ಮತಗಟ್ಟೆ ಅಧಿಕಾರಿಗಳಿಗೆ ಮಸ್ಟರಿಂಗ್, ಮತದಾನ ಮತ್ತು ಡಿಮಾಸ್ಟರಿಂಗ್ ಸಂದಂರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದರು. ಈಗಾಗಲೇ ಮತದಾನ ದಿನಾಂಕವನ್ನು ಚುನಾವಣಾ ಆಯೋಗ ನಿಗಧಿಪಡಿಸಿದ್ದು ಮತಗಟ್ಟೆ ಕೇಂದ್ರಗಳಲ್ಲಿ  ಅಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿವರಿಸಿದರು.