ಮಣಿಪುರ ಸರ್ಕಾರ ವಜಾಕ್ಕೆ ಆಗ್ರಹಿಸಿ ಜು. 28ರಂದು ಬೃಹತ್ ಪ್ರತಿಭಟನಾ ಮೆರವಣಿಗೆ

ಕಲಬುರಗಿ:ಜು.24: ಮಣಿಪುರ ಗಲಭೆ ಹಾಗೂ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಜುಲೈ 28ರಂದು ಬೆಳಿಗ್ಗೆ 11-30 ಗಂಟೆಗೆ ನಗರದ ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿಯ ಅರ್ಜುನ್ ಭದ್ರೆ ಅವರು ಇಲ್ಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪುರ ಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ, ಅಲ್ಲಿಯ ಕುಕಿ ಮತ್ತು ನಾಗ ಬುಡಕಟ್ಟು ಸಮುದಾಯದವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ, ಕುಕಿ ಸಮುದಾಯದ ಮಹಿಳೆಯರಿಗೆ ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರಿಗಳನ್ನು ಬಂಧಿಸಿ ಅವರ ಮೇಲೆ ಉಗ್ರ ಕ್ರಮ ಜರುಗಿಸುವಂತೆ, ಮಣಿಪುರದಲ್ಲಿ ಶಾಂತಿ, ನೆಮ್ಮದಿ ಇರುವ ಕಾನೂನಾತ್ಮಕ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ, ಎಲ್ಲ ಘಟನಾವಳಿಗಳಿಗೆ ಕಾರಣವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸುವಂತೆ ಒತ್ತಾಯಿಸಿದರು.
ಮೈತೇಯ ಸಮುದಾಯಕ್ಕೆ ಗುಡ್ಡಗಾಡು ಬುಡಕಟ್ಟು ಸಮುದಾಯದ ಸ್ಥಾನಮಾನ ಕೈಗೊಳ್ಳಬೇಕು ಎಂದು ಮಣಿಪುರ ಉಚ್ಛ ನ್ಯಾಯಾಲಯದ ಆದೇಶವೇ ಸಂಘರ್ಷಕ್ಕೆ ಮೂಲ ಕಾರಣವಾಗಿದೆ. ಮಣಿಪುರ ಉಚ್ಛ ನ್ಯಾಯಾಲಯದ ಆದೇಶಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದರೂ ಕುಕಿ ಸಮುದಾಯ ತನ್ನ ಹಕ್ಕುಗಳಿಗೆ ಧಕ್ಕೆ ಬರಬಹುದು ಎಂಬ ಆತಂಕದಿಂದ ಸರ್ಕಾರದ ವಿರುದ್ಧ ಹೋರಾಟ ಪ್ರಾರಂಭಿಸಿದರು. ಇದರಿಂದ ಎರಡೂ ಸಮುದಾಯದ ಮಧ್ಯೆ ದೊಡ್ಡ ಪ್ರಮಾಣದ ಸಂಘರ್ಷ ಉಂಟಾಯಿತು. ಅಲ್ಲದೇ ಇಡೀ ದೇಶ ತಲೆ ತಗ್ಗಿಸುವ ಮನುಕುಲ ಕಳಕಂದಿಂದ ನಾಚಿಕೆಪಡುವ ಅಮಾನವೀಯ ಘಟನೆ ನಡೆಯಿತು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕುಕಿ ಸಮುದಾಯದ ಮಹಿಳೆಯರಿಗೆ ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ತನ್ನ ಸೋದರಿಗೆ ಕಾಪಾಡಲು ಬಂದ 19 ವರ್ಷದ ಯುವಕನಿಗೆ ಬರ್ಬರವಾಗಿ ಕೊಲೆ ಮಾಡಲಾಯಿತು. ಮೇ 3ರಂದು ಆರಂಭವಾದ ಗಲಭೆ ಹಾಗೂ ಹಿಂಸಾಚಾರ 77 ದಿನಗಳು ಕಳೆದರೂ ಇನ್ನೂ ನಿಂತಿಲ್ಲ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಳ್ಳುವುದು, ಹೊರ ದೇಶದ ಮಹಿಳೆಗೆ ವಜ್ರದುಂಗುರ ಉಡುಗೊರೆ ಕೊಟ್ಟು ಸಂತೋಷಪಡುತ್ತಿದ್ದಾರೆ. ಮಣಿಪುರದ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ನಿರ್ಭಯ ಪ್ರಕಣ, ಖೈರ್ಲಾಂಜಿ, ಕುನಾಂವ್ ಪೋಶ್ಪುರಾ, ಗುಜರಾತ್ ಬಿಲಿಸ್ ಬಾನು, ಹತ್ರಾಸ್, ಗುಲಾಬಿ ಗ್ಯಾಂಗ್, ರಾಜಸ್ತಾನದ ಬನವಾರಿದೇವಿ, ತಮಿಳ್ನಾಡಿನ ಬಾಮಾ ಸೇರಿದಂತೆ ಹೆಸರು ಗೊತ್ತಿಲ್ಲದ ಇನ್ನೂ ಅನೇಕ ಮಹಿಳೆಯರು ಕಣ್ಣೆದುರು ಬಂದು ನಿಲ್ಲುತ್ತಾರೆ. ದೇಶದಲ್ಲಿ ಕಣ್ಣಿಗೆ ರಾಚುವಂತಹ ಹತ್ತಾರು ಘಟನೆಗಳು ಸಂಭವಿಸುತ್ತಿವೆ. ಇಂತಹ ಘಟನೆಗಳು ಪ್ರಧಾನಿ ಮೋದಿ ಅವರ ಗಮನಕ್ಕೆ ಬರುತ್ತಿಲ್ಲ ಎಂದು ಅವರು ದೂರಿದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಿಂದೂ ರಾಷ್ಟ್ರದ ಲಾಂಛನಗಳನ್ನು ಹೇರುವ ಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಆರ್ಯ ತತ್ವ, ವೈದಿಕಶಾಹಿ ಮತ್ತು ಬ್ರಾಹ್ಮಣವಾದಿ ರೂಪದಲ್ಲಿ ಹಿಂದೂತ್ವದ ಸಿದ್ದಾಂತ ಹೇರಲು ಹೊರಟಿದೆ ಎಂದು ಆರೋಪಿಸಿದ ಅವರು, ಕೂಡಲೇ ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಆರ್. ಕೊಲ್ಲೂರ್, ಅರ್ಜುನ್ ಗೊಬ್ಬೂರ್, ಮಹಾದೇವ್ ಕೋಳಕೂರ್, ಮಹಾಂತೇಶ್ ಬಡದಾಳ್ ಮುಂತಾದವರು ಉಪಸ್ಥಿತರಿದ್ದರು.