ಮಣಿಪುರದ ಘಟನೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಜಗಳೂರು.ಜು.೨೫; ಮಣಿಪುರ ರಾಜ್ಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಪಟ್ಟಣದಲ್ಲಿ  ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಮಣಿಪುರದ ಪೈಶಾಚಿಕ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಮಹಿಳೆಯರ ಮೇಲಿನ ಕ್ರೌರ್ಯದಿಂದ ಮನುಕುಲವೇ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಕರಾಳ ಘಟನೆಗೆ ಕಾರಣರಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರದ ವೈಫಲ್ಯ ಎತ್ತಿಹಿಡಿದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಈ ಘಟನೆಯಿಂದ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ದೇಶವಾಸಿಗಳಿಗೆ ಸೂಕ್ತ ರಕ್ಷಣೆ ನಿಡುವಲ್ಲಿ ವಿಫಲವಾಗಿರುವ ಮಣಿಪುರ ರಾಜ್ಯದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು. ಸೇನೆಯನ್ನು ಬಳಸಿಕೊಂಡು ಮಣಿಪುರ ರಾಜ್ಯದಲ್ಲಿ ಹಿಂಸಾಚಾರ, ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ದೌರ್ಜನ್ಯದಂತಹ ಘಟನೆಗಳು ಮರುಕಳಿಸದಂತೆ ನಿಗ್ರಹಿಸಬೇಕು ಎಂದು ಆಗ್ರಹಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೇಜವಾಬ್ಧಾರಿ ಮತ್ತು ವಿಳಂಬ ಧೋರಣೆಯಿಂದ ಇಡೀ ಮಣಿಪುರ ರಾಜ್ಯವೇ ಹೊತ್ತಿ ಉರಿಯುತ್ತಿದ್ದು,  ಮಣಿಪುರ ಸೇರಿದಂತೆ ದೇಶಾದ್ಯಂತ ಶಾಂತಿ ಮತ್ತು ಕಾನೂನುಪಾಲನೆಯನ್ನು ಕಾಪಾಡಬೇಕು. ಇಲ್ಲವಾದಲ್ಲಿ ದೇಶದಲ್ಲಿ ಪ್ರತಿಭಟನೆ ಭುಗಿಲೇಳಲಿದೆ ಎಂದು ಎಚ್ಚರಿಕೆ ನೀಡಿದರು.ತಹಶೀಲ್ದಾರ್ ಗ್ರೇಡ್ -2 ಮಂಜಾನಂದ ಅವರು ಮನವಿ ಸ್ವೀಕರಿಸಿದರು.ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ  ಮಲೆಮಾಚಿಕೆರೆ ಸತೀಶ್,ವಕೀಲರಾದ ಆರ್ ಓಬಳೇಶ್ .ಕರುನಾಡ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ. ಹೊಳೆ, ಎಐವೈಫ್ ಮುಖಂಡ ಮಾದಿಹಳ್ಳಿ ಮಂಜುನಾಥ್ , ಮಾನವಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಧನ್ಯಕುಮಾರ್, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಅನಂತಕುಮಾರ್, ಎಐಎಸ್ಎಫ್ ದೇವಿಕೆರೆ ಮಧು ನೇತೃತ್ವದ ವಹಿಸಿದ್ದರು.