ಕಲಬುರಗಿ,ಜು.22:ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲೆ ನಡೆದ ಅಮಾನವೀಯ ಮತ್ತು ಘೋರ ಘಟನೆಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಒ) ಕರ್ನಾಟಕ ರಾಜ್ಯ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ ಎಂದು ಜಗನ್ನಾಥ ಎಸ್,ಹೆಚ್, ಜಿಲ್ಲಾ ಅಧ್ಯಕ್ಷರು ,ಎಐಡಿವೈಓ ಕಲಬುರಗಿ ತಿಳಿಸಿದ್ದಾರೆ.
ಮಣಿಪುರ ಎರಡು ತಿಂಗಳಿಗಿಂತ ಹೆಚ್ಚು ಕಾಲ ಹೊತ್ತಿ ಉರಿಯುತ್ತಿದೆ, ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ, ಮಕ್ಕಳು ಅನಾಥರಾಗುತ್ತಿದ್ದಾರೆ. ಆದರೆ ಶಾಂತಿ ಸ್ಥಾಪನೆಗಾಗಿ ಸರ್ಕಾರವು ಯಾವುದೇ ದಿಟ್ಟ ಕ್ರಮ ಕೈಗೊಂಡಿಲ್ಲ.
ಕೋಮುವಾದಿ ಉದ್ರಿಕ್ತ ಪುಂಡರ ಗುಂಪೆÇಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿದೆ. ಈ ವೀಡಿಯೋ ನೋಡಿ ಮಾನವೀಯತೆ ಉಳಿದಿರುವ ದೇಶದ ಪ್ರತಿಯೊಬ್ಬ ಪ್ರಜೆಗೂ ನಾಚಿಕೆಯಾಗುವುದರ ಜೊತೆಗೆ ಆಕ್ರೋಶ ಬರುತ್ತಿದೆ.
ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಈ ವಿಚಾರದಲ್ಲಿ ಎರಡೂ ಸರ್ಕಾರಗಳ ಮುಖ್ಯಸ್ಥರು ಮೌನವಾಗಿದ್ದಾರೆ. ಪ್ರಧಾನಿ ಯಾವುದೇ ಒಂದು ರಾಜ್ಯದವರಲ್ಲ, ಅವರು ಇಡೀ ದೇಶದವರು. ಇಡೀ ದೇಶದ ನಾಗರಿಕರ ಹಿತದೃಷ್ಟಿಯಿಂದ ಯೋಚಿಸುವುದು ಅವರ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಅವರು ಹಾಗೆ ಮಾಡದೆ ಬರೋಬ್ಬರಿ 79ದಿನಗಳ ನಂತರ ಮೌನ ಮುರಿದಾಗ ಇಂತಹ ಗಂಭೀರ ವಿಚಾರದಲ್ಲೂ ರಾಜಕೀಯ ಮಾಡತೊಡಗಿದರು. ಇದನ್ನು ಕೂಡ ಎಐಡಿವೈಓ ತೀವ್ರವಾಗಿ ಖಂಡಿಸುತ್ತದೆ. ಅದೇ ಸಮಯದಲ್ಲಿ, ಯುವಜನತೆ ಎಲ್ಲಿದ್ದರೂ, ಯಾವುದೇ ಪರಿಸ್ಥಿತಿಯಲ್ಲಿದ್ದರೂ, ಈ ಅಮಾನವೀಯ ಘಟನೆಯನ್ನು ವಿರೋಧಿಸಬೇಕು ಎಂದು ಇಡೀ ದೇಶದ ಯುವಜನತೆಗೆ ಕರೆನೀಡುತ್ತದೆ. ಮಣಿಪುರದ ಯುವಜನತೆ ಯಾವುದೇ ಕೋಮುವಾದಿ ವಿಚ್ಛಿದ್ರಕಾರಿ ಪ್ರಚೋದನೆಗೆ ಬಲಿಯಾಗದೆ ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂದು ಹಾಗೂ ಜನೈಕ್ಯತೆಯನ್ನು ಎತ್ತಿಹಿಡಿಯಬೇಕೆಂದು ಮನವಿ ಮಾಡುತ್ತದೆ.
ಅಲ್ಲದೇ, ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಅಪರಾಧಿಗಳಿಗೆ ಕಠಿಣ ಮತ್ತು ನಿದರ್ಶನೀಯ ಶಿಕ್ಷೆ ವಿಧಿಸಬೇಕೆಂದು ಎಐಡಿವೈಒ ಕರ್ನಾಟಕ ರಾಜ್ಯ ಸಮಿತಿಯು ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.