ಮಣಿಪುರ,ಆಪ್ಘಾನ್‌ನಲ್ಲಿ ಭೂಕಂಪನ

ನವದೆಹಲಿ, ಫೆ.೨೮- ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಟರ್ಕಿ ಮತ್ತು ಸಿರಿಯಾದಲ್ಲಿ ೪೫ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಭಾರತದ ಮಣಿಪುರ, ಅಪ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಇಂದು ನಸುಕಿನ ಜಾವವೇ ಭೂಮಿ ನಡುಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂದು ಮುಂಜಾನೆ ೩.೧ ರಿಂದ ೪.೩ ಪ್ರಮಾಣದಲ್ಲಿ ಭೂಕಂಪನ ಉಂಟಾಗಿದೆ. ಈವರೆಗೂ ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಮಣಿಪುರದ ನೋನಿ ಜಿಲ್ಲೆಯಲ್ಲಿ ೩.೨ ತೀವ್ರತೆಯ ಭೂಕಂಪ ಸಂಭವಿಸಿದೆ. ನಸುಕಿನ ಜಾವ ೨.೪೬ ರ ಸುಮಾರಿಗೆ ೨೫ ಕಿ.ಮೀ ಆಳದಲ್ಲಿ ಭೂಕಂಪ ಅಲೆಗಳು ಎದ್ದಿವೆ. ಇದು ೯೩ ಕಿಮೀ ವ್ಯಾಪ್ತಿಯಲ್ಲಿ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಫೆಬ್ರವರಿ ೧೯ ರಂದು ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ನಂದಿಗ್ರಾಮ ಪಟ್ಟಣದಲ್ಲಿ ಭೂಕಂಪ ಸಂಭವಿಸಿತ್ತು. ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ. ಭಾನುವಾರ ಬೆಳಗ್ಗೆ ೭.೧೩ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ೩.೪ ಸೆಕೆಂಡ್‌ಗಳ ಕಾಲ ಭೂಕಂಪನ ಸಂಭವಿಸಿದೆ.
ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಅದೇ ದಿನ ಮಧ್ಯಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ ೩.೦ ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪವು ಇಂದೋರ್‌ನಿಂದ ಸುಮಾರು ೧೫೧ ಕಿ. ಮೀ. ನೈಋತ್ಯಕ್ಕೆ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಧಾರ್‌ಗೆ ಅಪ್ಪಳಿಸಿತು. ಭೂಕಂಪದ ಕೇಂದ್ರಬಿಂದುವು ಭೂಮಿಯ ಮೇಲ್ಮೈಯಿಂದ ೧೦ ಕಿಮೀ ಆಳದಲ್ಲಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರದ ತಿಳಿಸಿದೆ.
ಇನ್ನೂ, ಅಫ್ಘಾನಿಸ್ತಾನದಲ್ಲಿ ಇಂದು ಬೆಳಗ್ಗೆ ೪.೧ ತೀವ್ರತೆಯ ಭೂಕಂಪ ಸಂಭವಿಸಿದೆ. ೦೪:೦೫ ನಿಮಿಷದ ವೇಳೆ ದೇಶದ ವಿವಿಧೆಡೆ ೧೦ ಕಿಮೀ ಆಳದಲ್ಲಿ ಕಂಪನದ ಅಲೆಗಳು ಕೇಂದ್ರಿಕೃತವಾಗಿವೆ. ೩೬.೩೮ ಅಕ್ಷಾಂಶ ಮತ್ತು ೭೦.೯೪ ರೇಖಾಂಶದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಹಾಗೇ, ಭೂಕಂಪವು ಇಂದೋರ್‌ನಿಂದ ಸುಮಾರು ೧೫೧ ಕಿ. ಮೀ. ನೈಋತ್ಯಕ್ಕೆ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಧಾರ್‌ಗೆ ಅಪ್ಪಳಿಸಿತು. ಭೂಕಂಪದ ಕೇಂದ್ರಬಿಂದುವು ಭೂಮಿಯ ಮೇಲ್ಮೈಯಿಂದ ೧೦ ಕಿಮೀ ಆಳದಲ್ಲಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.