ಮಕ್ಕಳಿಗೆ ಶಿಕ್ಷಣ ಕೊಟ್ಟು ಶ್ರೀಮಂತರನ್ನಾಗಿಸಲು ಕರೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮಾ.10: ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಶ್ರೀ ಕೋಲಶಾಂತೇಶ್ವರ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗೂ ಮಠದ ದ್ವಾರ ಬಾಗಿಲಿನ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಮ.ನಿ.ಜಗದ್ಗುರು ತೊಂಟದ ಸಿದ್ದರಾಮ ಮಹಾಸ್ವಾಮಿಗಳು ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕೋಲಶಾಂತೇಶ್ವರ ಮಠದ ಗುರುಗಳಾದ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ಮಠದ ಅಭಿವೃದ್ಧಿ ಜೊತೆಗೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣವನ್ನು ಕೊಡುತ್ತಿದ್ದಾರೆ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ನೀಡುತ್ತಾ ಬಂದಿದ್ದಾರೆ.
 ಹಣ ಗಳಿಸುವುದು ಮುಖ್ಯವಲ್ಲ, ಮಕ್ಕಳಿಗೆ ಶಿಕ್ಷಣ ಕೊಡಿಸಿ ಶ್ರೀಮಂತರನ್ನಾಗಿಸುವುದು ಮುಖ್ಯ.
ಶ್ರೀ ಕೋಲಶಾಂತೇಶ್ವರ ಮಠದ ಸ್ವಾಮಿಗಳು ಸರಳ, ಕಾಯಕ,ಶ್ರಮ ಜೀವಿಗಳು.
ಭಕ್ತರ ಹಾಗೂ ಗುರುಗಳ ಮಧ್ಯ ಒಳ್ಳೆಯ ಸಂಬಂಧವಿದೆ, ಯಾವುದೇ ಜಾತಿ, ಪಂಥವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ನಡೆದು ಕೊಳ್ಳುತ್ತಿದ್ದಾರೆ, ಎಲ್ಲರ ಸಹಕಾರದಿಂದ ವಾಣಿಜ್ಯ ಮಳಿಗೆಗಳ ಕಟ್ಟಡಗಳು ನಿರ್ಮಾಣವಾಗಿವೆ.
 ಕರ್ನಾಟಕ ರಾಜ್ಯದಲ್ಲಿ ಮಠದ ಜೊತೆಗೆ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿದ್ದಾರೆ,ಇಂತಹ ಸ್ವಾಮೀಜಿ ಎಲ್ಲೂ ಸಿಗುವುದಿಲ್ಲ, ಇವರು ಒಬ್ಬ ಆದರ್ಶ ಸ್ವಾಮಿಗಳಾಗಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣಮೂರ್ತಿ ವಕೀಲರು ಈ ಮಠಕ್ಕೆ ಊರಿನ ಎಲ್ಲಾ ಸಮುದಾಯದವರ ಸಹಕಾರದಿಂದ ಕಟ್ಟಡ ನಿರ್ಮಾಣವಾಗಿವೆ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಶಿಕ್ಷಣ, ದಾಸೋಹ, ಸಮಾಜ ಸೇವೆಗಳನ್ನು ಶ್ರೀಗಳು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಯುವ ಮುಖಂಡ ವೈ. ಡಿ. ಅಣ್ಣಪ್ಪ ಮಾತನಾಡಿ – ಶ್ರೀಗಳು ತಮ್ಮ ಆಸೆಯಂತೆ ಮಠದ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ಕಟ್ಟಿಸಬೇಕೆಂದು ತಿಳಿಸಿದಾಗ ಗ್ರಾಮ ಪಂಚಾಯಿತಿಯವರ, ಊರಿನವರ ಹಾಗೂ ಯು. ಎಸ್. ಕೆ. ಉದಯ್ ಶಿವಕುಮಾರ್ ರವರ ಸಹಕಾರದಿಂದ ವಾಣಿಜ್ಯ ಕಟ್ಟಡಗಳ ನಿರ್ಮಾಣವಾಗಿವೆ.
 ಮಠದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ, ಶ್ರೀಗಳ ಜೊತೆ ಸದಾ ಇರುತ್ತೇನೆಂದು ಹೇಳಿದರು.
ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಂದ ಭಕ್ತರಿಗೆಲ್ಲ ಪ್ರಸಾದದ ವ್ಯವಸ್ಥೆ ಮಾಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಠದಿಂದ ಕೃಷ್ಣಮೂರ್ತಿ ವಕೀಲರು, ಜಗದೀಶ್ ಗೌಡ ಪಾಟೀಲ್ ವಕೀಲರು, ಶ್ರೀನಿಧಿ ವಕೀಲರು,ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ. ರೇಖಾ ಕೊಟ್ರೇಶ್, ವೈ. ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಅಕ್ಕಮ್ಮ ಲಕ್ಷ್ಮಣ್, ಐ. ಸಲಾಂ ಸಾಹೇಬ್, ಎ. ಬಿ. ಸಿದ್ದನಗೌಡ, ಪಿ. ಡಿ. ಓ. ಅಂಜಿನಪ್ಪ, ಪಿ. ಮರಿಯಪ್ಪ, ಎ. ಬಿ. ಮಲ್ಲಿಕಾರ್ಜುನ ಗೌಡ, ಬಿ. ರಾಮಪ್ಪ, ಎ. ಹೆಚ್. ನಾಗರಾಜಪ್ಪ, ಡಾ. ಎಂ. ಸುರೇಶ್, ಎ. ಹೆಚ್. ಕೊಟ್ರೇಶಪ್ಪ, ಎಸ್. ಎಂ. ಸಿದ್ದಯ್ಯ ಹಾಗೂ ಊರಿನ ಗ್ರಾಮಸ್ಥರಿಗೆ ಶ್ರೀಗಳು ಸನ್ಮಾನಿಸಿದರು.