
ದಾವಣಗೆರೆ ಮೇ 8; ಶಾಲೆಗಳ ವಾರ್ಷಿಕ ಪರೀಕ್ಷೆಗಳು ಮುಗಿದು ಮಕ್ಕಳ ಪರೀಕ್ಷಾ ಫಲಿತಾಂಶ ಬಂದ ನಂತರ ಮತ್ತೆ ಶಾಲೆಗಳು ಆರಂಭವಾಗುವ ತನಕ ಮಕ್ಕಳನ್ನು ನೋಡಿಕೊಳ್ಳುವುದು ಪೋಷಕರಿಗೆ ತುಂಬಾ ಕಷ್ಟದ ಕೆಲಸ. ಮನೆಯಲ್ಲಿ ಮಕ್ಕಳ ಗಲಾಟೆ ನಿಯಂತ್ರಣ ಮಾಡುವಲ್ಲಿ ಪೋಷಕರು ಹರಸಾಹಸ ಪಡಬೇಕಾಗುತ್ತದೆ, ಎಷ್ಟು ಬೇಗ ಶಾಲೆಗಳು ಪುನರ್ ಆರಂಭ ಆಗುತ್ತದೆಯೋ ಎಂದು ಯೋಚಿಸುತ್ತಾರೆ. ಮಕ್ಕಳನ್ನು ಹೊರಗೆ ಆಟವಾಡಲು ಕಳಿಸಲು ಬಿಸಿಲಿನ ಭಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಬೇಸಿಗೆ ಶಿಬಿರಗಳು ತುಂಬಾ ಅಗತ್ಯ ಆಗಿರುತ್ತವೆ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷರಾದ ಎಚ್. ಚೆನ್ನಪ್ಪ ಪಲ್ಲಾಗಟ್ಟಿ ಅಭಿಪ್ರಾಯ ಪಟ್ಟರು. ಭಾರತ ಸೇವಾದಳ ಮತ್ತು ಫ್ಲೈಯಿಂಗ್ ಬರ್ಡ್ಸ್ ನೃತ್ಯ ಶಾಲೆ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಹಾಗೂ ಸೇವಾದಳ ಸಂಸ್ಥಾಪಕ ಪದ್ಮಭೂಷಣ ಡಾ. ನಾ. ಸು. ಹರ್ಡಿಕರ್ ಮತ್ತು ರಾಷ್ಟ್ರ ಕವಿ ರವೀಂದ್ರನಾಥ ಟ್ಯಾಗೋರ್ ಅವರ ಜಯಂತಿಯಲ್ಲಿ ಅವರು ಪೋಷಕರನ್ನು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.ಸಮಾರೋಪ ಭಾಷಣ ಮಾಡಿದ ಎ.ಕೆ ಫೌಂಡೇಶನ್ ಅಧ್ಯಕ್ಷರಾದ ಕೆ. ಬಿ. ಕೊಟ್ರೇಶ್ ರವರು ಮಾತನಾಡಿ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಈಜು,ನೃತ್ಯ, ಕರಾಟೆ, ಯೋಗ, ಚಿತ್ರಕಲೆ, ಪ್ರವಾಸ ಇತರೆ ಚಟುವಟಿಕೆಗಳು ನಡೆಯುವುದರಿಂದ ಮಕ್ಕಳಲ್ಲಿ ಸಂತೋಷ ಆತ್ಮವಿಶ್ವಾಸ,ನಾಯಕತ್ವ, ಸೇವಾ ಮನೋಭಾವನೆ, ಶಿಸ್ತು ಮೂಡಿಸಲು ಬೇಸಿಗೆ ಶಿಬಿರಗಳು ಅಗತ್ಯವಾಗಿರುತ್ತವೆ ಎಂದರು.
ಜಿಲ್ಲಾ ಸಮಿತಿ ಸದಸ್ಯರಾದ ಕೆ ಬಿ ಪರಮೇಶ್ವರಪ್ಪ ಮತ್ತು ಎ ಸಿದ್ದಲಿಂಗಪ್ಪನವರು ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಮೆಡಲ್ ಪ್ರಧಾನ ಮಾಡಿದರು. ವಲಯ ಸಂಘಟಕರಾದ ಎಂ ಅಣ್ಣಪ್ಪ ಸ್ವಾಗತಿಸಿದರು, ಪರಶುರಾಮ್ ಖಾಟಾವ್ಕಾರ್ ವರದಿ ವಾಚನ ಮಾಡಿದರು ಶ್ರೀಮತಿ ಶೈಲಜಾ ಪಿ ಕೆ ನಿರೂಪಿಸಿದರು , ಶ್ರೀಕಾಂತ್. ಕೆ. ಪಿ ವಂದಿಸಿದರು. ಮಕ್ಕಳಿಂದ ಯೋಗ, ಕರಾಟೆ, ನೃತ್ಯ, ಡ್ರಾಮಾ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.