
ಕಲಬುರಗಿ:ಮೇ.20:ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನರೋಣಾದಲ್ಲಿಂದು ಹಳೆಯ ವಿದ್ಯಾರ್ಥಿಗಳ ಸಂಘ ನರೋಣ ವತಿಯಿಂದ ಸುಮಾರು ಎರಡು ತಿಂಗಳ ಕಾಲ ಮಕ್ಕಳಿಗೆ ಬೇಸಿಗೆ ಶಿಕ್ಷಣ ಶಿಬಿರವನ್ನು ಹಮ್ಮಿಕೊಂಡಿದ್ದು ಇಂದು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ದತ್ತು ವಾಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ನರೋಣಾ ಹಾಗೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಳಂದ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಬಸವರಾಜ ದೊಡ್ಮನಿ ರವರು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ ರೋಳೆ ಸಂಪನ್ಮೂಲ ವ್ಯಕ್ತಿಗಳಾದ ನಾಗನಾಥ ಆಲಮದರವರು ಎಚ್.ಡಿ.ಎಂ.ಸಿ ನರೋಣಾದ ಅಧ್ಯಕ್ಷರಾದ ಶ್ರೀ ಮಂಜುನಾಥ ಕೋರೆ ಅವರು ಗ್ರಾಮದ ಶಿಕ್ಷಣ ಪ್ರೇಮಿಗಳಾದ ಶ್ರೀ ಕೈಲಾಸ ರಾಗಿ ಶ್ರೀ ಶಾಂತಪ್ಪ ರವರು ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಗಳಾದ ಶ್ರೀ ಸಿದ್ದಪ್ಪ ಮಹಾಗಾಂವ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.
ಈ ಒಂದು ಸಂದರ್ಭದಲ್ಲಿ ಎರಡು ತಿಂಗಳುಗಳ ಕಾಲ ನಡೆದ ಶಿಬಿರದ ಕುರಿತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು. ಮುಂದೆಯೂ ಕೂಡ ಇಂತಹ ಶಿಬಿರಗಳು ಹಮ್ಮಿಕೊಂಡು ನಮ್ಮಂತಹ ಬಡ ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾಗಬೇಕೆಂದು ಮಕ್ಕಳು ತಮ್ಮ ಮನಸ್ಸಿನಲ್ಲಿ ಮಾತುಗಳನ್ನು ತಿಳಿಸಿದರು.
ಸಿದ್ದಪ್ಪ ಮಹಾಗಾಂವ ಮಾತನಾಡಿ ಶಿಕ್ಷಣವೇ ಶಕ್ತಿ ಶಿಕ್ಷಣ ಪಡೆದವರು ಎಲ್ಲಿಯೂ ಸಲ್ಲುವರು ಶಿಕ್ಷಣ ಬಹಳ ಮುಖ್ಯವಾಗಿರತಕ್ಕಂತಹ ಅಂಶ ಎಂದು ಹುರಿದುಂಬಿಸಿದರು.
ಅದೇ ರೀತಿಯಾಗಿ ಶ್ರೀ ವೀರೇಶ ಬೋಳಶೆಟ್ಟಿ ರವರು ಮಾತನಾಡಿ ಈ ಎರಡು ತಿಂಗಳಗಳ ಕಾಲ ಬೇಸಿಗೆ ಶಿಬಿರವು ಯಶಸ್ವಿಯಾಗಲು ಶಾಲಾ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಕಾರಣ ಎಂದು ಹೇಳುತ್ತಾ ಶಿಕ್ಷಣಕ್ಕೆ ಸಮುದಾಯ ಸಮುದಾಯಕ್ಕೆ ಶಿಕ್ಷಣ ಪೂರಕವಾಗಿದ್ದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎನ್ನುವ ಮಾತನ್ನು ಹೇಳಿ ಶಿಕ್ಷಣದ ಮಹತ್ವವನ್ನು ವಿವರಿಸಿ ಹಲವು ದಾರ್ಶನಿಕರ ಹಾಗೂ ವಚನಕಾರರ ವಚನಗಳನ್ನು ಹೇಳುವುದರ ಮೂಲಕ ವ್ಯಕ್ತಿತ್ವ ವಿಕಸನದ ಬೋಧೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶ್ರೀ ಗಂಗಾಧರ ಪೆÇೀದ್ದಾರ, ರವಿಕುಮಾರ ಹೂಗಾರ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಎನ್. ಪೂಜಾರಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಪ್ರಾರ್ಥಿಸಿದರು. ರವಿಕುಮಾರ ಹೂಗಾರ ಸ್ವಾಗತ ಕೋರಿದರು,ಸಿದ್ದಪ್ಪ ಮಹಾಗಾಂವ ಪ್ರಾಸ್ತಾವಿಕ ನುಡಿಗಳನ್ನಾಡಿದರು ಶ್ರೀ ವಿರೇಶ ಬೋಳಶೇಟ್ಟಿ ನಿರೂಪಿಸಿ ವಂದಿಸಿದರು.