
ದೇವಲ ಗಾಣಗಾಪುರ,ಸೆ. 9: ಶಿಕ್ಷಕರು ರಾಷ್ಟ್ರದ ರಕ್ಷಕರಾಗಿದ್ದು, ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿ ಮಾಡುವುದೇ ಶಿಕ್ಷಕರ ಧರ್ಮ ಎಂದು ಹಿರಿಯ ಶಿಕ್ಷಕ ವಿಜಯಕುಮಾರ್ ಸಾಲಿಮಠ ಹೇಳಿದರು.
ಅಫಜಲಪುರ ತಾಲೂಕಿನ ಬಿದನೂರು ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಆಸ್ಮಾ ಬೇಗಂ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡುತ್ತಾ, ಶಿಕ್ಷಕರ ಸ್ಥಾನ ಅತ್ಯಂತ ಪವಿತ್ರವಾದದ್ದು. ಅದರ ಪಾವಿತ್ರ್ಯತೆ ಉಳಿಸಿಕೊಂಡು ಹೋಗುವುದು ಎಲ್ಲ ಶಿಕ್ಷಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮುಖ್ಯಗುರು ಸುಧಾ ಕುಲಕರ್ಣಿ ಅವರು ಮಾತನಾಡುತ್ತಾ, ಆಸ್ಮಾ ಬೇಗಂ ಅವರು ಸದಾ ಕ್ರಿಯಾಶೀಲರಾಗಿ ವಿಜ್ಞಾನ ವಿಷಯವನ್ನು ಮಕ್ಕಳಿಗೆ ಬೋಧಿಸುತ್ತಾ ವೈಜ್ಞಾನಿಕ ಮನೋಭಾವ ಬೆಳೆಸುತ್ತಿದ್ದಾರೆ ಎಂದು ಗುಣಗಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಭಾಗ್ಯಲತಾ ಎಂ ಶಾಸ್ತ್ರಿ, ಕೌಸರ್ ಬಾನು, ಜ್ಯೋತಿ ಮಠಪತಿ, ವಿನುತಾ ಕುಲಕರ್ಣಿ, ರೇವಣಸಿದ್ದ ಕಲ್ಶೆಟ್ಟಿ, ಪ್ರವೀಣ್ ವಾಡೆಕರ್, ಸಂತೋಷ್ ಉಪಸ್ಥಿತರಿದ್ದರು. ಲಲಿತಾ ಸ್ವಾಗತಿಸಿದರು.ಸಂಗೀತ ನಿರ್ವಹಿಸಿದರು.