
ಸಂಜೆವಾಣಿ ಪ್ರತಿನಿಧಿಯಿಂದ
ಬಳ್ಳಾರಿ:ಮೇ,6- ಮೊದಲ ಬಾರಿಗೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತಾ ಹೊರಟಿದೆ.
ಪಕ್ಷದ ಅಭ್ಯರ್ಥಿ ಕೊರ್ಲಗುಂದಿಯ ವಿ. ದೊಡ್ಡ ಕೇಶವ ರೆಡ್ಡಿ ಅವರು ಈ ಮೊದಲು ಹಲವು ವರ್ಷಗಳ ಕಾಲ ಜೆಡಿಎಸ್ ನಲ್ಲಿ ಇದ್ದು. ಈಗ ಅರವಿಂದ ಕ್ರೇಜಿವಾಲ ಅವರ ಆಡಳಿತವನ್ನು ಮೆಚ್ಚಿ, ಪಕ್ಷದ ಸಿದ್ದಾಂತಗಳನ್ನು ಕಂಡು ಆಮ್ ಆದ್ಮಿ ಪಕ್ಷ ಸೇರಿ ಈಗ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿನದಿಂದ ಭರ್ಜರಿ ಪ್ರಚಾರ ನಡೆಸಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಅವರನ್ನು ಸಂಜೆವಾಣಿ ಮಾತನಾಡಿಸಿದೆ.
ಮೇ 10 ರಂದು ನಡೆಯುವ ಬಳ್ಳಾರಿ ನಗರ ವಿಧಾನಸಭಾ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿ.ಜೆ.ಪಿ., ಹಾಗೂ ಪ್ರಾದೇಶಿಕ ಪಕ್ಷಗಳಾದ ಜೆ.ಡಿ.ಎಸ್. ಕೆಆರ್ಪಿ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇವರ ಮಧ್ಯೆ ರಾಷ್ಟ್ರೀಯ ಪಕ್ಷ ಆಮ್ ಆದ್ಮಿಯು ಒಂದಾಗಿದೆ.
@12bc = •ರಾಜಕೀಯ ಕ್ಷೇತ್ರದ ನಿಮ್ಮ ಅನುಭವದ ಬಗ್ಗೆ ಏನಂತೀರಿ
ರಾಜಕೀಯ ಕ್ಷೇತ್ರ ನನಗೇನು ಹೊಸದೇನು ಅಲ್ಲ, ಕಳೆದ 30 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ನನ್ನದೇ ಆದ ರೀತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ವಿವಿಧ ಹಂತಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಸ್ಪರ್ಧಿಸಿರುತ್ತೇನೆ. 2007 ರಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 1ನೇ ವಾರ್ಡ್ನಿಂದ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ, ಪ್ರಸ್ತುತ ಪಿ.ಎಲ್.ಡಿ. ಬ್ಯಾಂಕ್ನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. 1996 ರಲ್ಲಿ ಬಳ್ಳಾರಿ ತಾಲ್ಲೂಕು ಪಂಚಾಯಿತಿಗೆ ಕೊರ್ಲಗುಂದಿ ಕ್ಷೇತ್ರದಿಂದ ಸ್ಪರ್ಧಿಸಿ, ಅತ್ಯಲ್ಪ ಮತಗಳಿಂದ ಸೋತಿರುತ್ತೇನೆ. ಆದರೂ ಸಹ ನಾನು ನನ್ನದೇ ಆದ ರೀತಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಜನರಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಸಧ್ಯ ನಗರ ಕ್ಷೇತ್ರದ ಎಎಪಿ ಪಕ್ಷದ ಅಭ್ಯರ್ಥಿಯಾಗಿರುವೆ.
@12bc = •ಭ್ರಷ್ಟಚಾರದ ವಿರುದ್ಧ ಅಣ್ಣ ಹಜಾರೆ ಅವರು ದೇಶ ವ್ಯಾಪಿ ಆಂದೋಲನ ನಡೆಸಿದ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ಬಂದ ‘ಆಮ್ ಆದ್ಮಿ ಪಕ್ಷ’ ನಿಮಗೆ ರಾಜಕೀಯಕ್ಕೆ ಹೊಂದಾಣಿಕೆಯಾಗುತ್ತಾ
ನಾನು ಸಹ ಈ ಮೊದಲಿನಿಂದ ಭ್ರಷ್ಟಚಾರದ ವಿರುದ್ಧ ಮಾತನಾಡುತ್ತಾ ಬಂದಿದ್ದೇನೆ. ಸಮಾಜದಲ್ಲಿರುವ ಶೋಷಿತರ, ಬಡವರ ಧ್ವನಿಯಾಗಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದೇನೆ. ಆದ್ದರಿಂದ ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳಿಗೂ ನನಗೂ ಹೊಂದಾಣಿಕೆಯಾಗುತ್ತದೆಂದರು
ನೀವು ಯಾವ ಉದ್ದೇಶಗಳನ್ನಿಟ್ಟುಕೊಂಡು ಮತ ಕೇಳುತ್ತೀರಿ
ಬಳ್ಳಾರಿ ಮಹಾಜನತೆ ನನಗೆ ಬೆಂಬಲಿಸಿ ಆಶೀರ್ವದಿಸಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರೆ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆಧ್ಯತೆ ನೀಡುತ್ತೇನೆ. ಖಾಸಗೀ ಶಾಲೆಗಳಿಗಿಂತಲೂ ಉತ್ತಮವಾದ ರೀತಿಯಲ್ಲಿ ಸರ್ಕಾರಿ ಶಾಲೆಗಳನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸುತ್ತೇನೆ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ದೆಹಲಿ ಮಾದರಿಯಲ್ಲಿ ಬಳ್ಳಾರಿ ನಗರದಲ್ಲಿಯೂ ಸಹ ಮೊಹಲ್ಲಾ ಕ್ಲೀನಿಕ್ಗಳನ್ನು ಆರಂಭಿಸುವುದಕ್ಕೆ ಪ್ರಯತ್ನಿಸುತ್ತೇನೆ. ಬಳ್ಳಾರಿ ನಗರವು ಧೂಳುಮಯವಾಗಿದ್ದು, ನಗರವನ್ನು ಧೂಳು ಮುಕ್ತವನ್ನಾಗಿ ಮಾಡುತ್ತೇನೆ ಹಾಗೂ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಶ್ರಮಿಸುತ್ತೇನೆ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ಸ್ಪಂಧಿಸುತ್ತೇನೆ. ಶಾಸಕರಿಗೆ ಬರುವ ಅನುದಾನವನ್ನು ಬಳಸಿಕೊಂಡು ನಗರವನ್ನು ಸರ್ವಾಂಗೀಣ ಅಭಿವೃದ್ಧಿ ಹೊಂದಿದ ಕ್ಷೇತ್ರವನ್ನಾಗಿಸುತ್ತೇನೆ ಎನ್ನುತ್ತಾರೆ
@12bc = •ಶಾಸಕರಾದರೆ ರೈತರಿಗೆ ಯಾವ ರೀತಿ ನೆರವಾಗುತ್ತೀರಿ
ಸಹಕಾರಿ ಬ್ಯಾಂಕ್ಗಳಿಂದ ಸಣ್ಣ, ಅತಿಸಣ್ಣ ರೈತರು ಸೇರಿದಂತೆ ಎಲ್ಲಾ ರೈತರಿಗೆ ರಿಯಾಯಿತಿ ಧರದಲ್ಲಿ ಕೃಷಿ ಪರಿಕರಗಳನ್ನು ಕೊಡಿಸುತ್ತೇನೆ. ರೈತರ ಪಂಪ್ಸೆಟ್ಗಳಿಗೆ ನಿರಂತರವಾಗಿ ವಿದ್ಯುತ್ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ. ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಿ ಸ್ಥಳದಲ್ಲಿಯೇ ಹಣ ಪಾವತಿಸುವಂತೆ ವ್ಯವಸ್ಥೆ ಮಾಡುತ್ತೇನೆ. ಆಮ್ ಆದ್ಮಿ ಪಕ್ಷವು ಪ್ರಣಾಳಿಕೆಯ ಅಂಶಗಳ ಜಾರಿಗಾಗಿ ಪ್ರಯತ್ನಿಸುತ್ತೇನೆ, ಬಳ್ಳಾರಿ ನಗರದ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಮುದಾಯಗಳ ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸುತ್ತೇನೆ. ಆದ್ದರಿಂದ ಬಳ್ಳಾರಿ ನಗರದ ಮತದಾರರು ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಗೆಲ್ಲಿಸಬೇಕೆಂದು ನಿಮ್ಮ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆಂದರು.
ತಮ್ಮ ಪ್ರಚಾರ ಕಾರ್ಯದಲ್ಲಿ ತಮ್ಮೊಂದಿಗೆ ಹಗಲಿರುಳು ಸಾಗಿ ಬರುತ್ತಿರುವ ಪಕ್ಷದ ಮುಖಂಡರಾದ ರುದ್ರಯ್ಯ ನವಲಿ ಹಿರೇಮಠ್, ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್, ನಗರ ಅಧ್ಯಕ್ಷ ಜೆ.ವಿ.ಮಂಜುನಾಥ್, ಮುಖಂಡರಾದ ಬಾದಾಮಿ ಶಿವಲಿಂಗ, ಬಾಲಾಜಿ, ಲಿಂಗಾರೆಡ್ಡಿ, ಶ್ರೀನಿವಾಸರೆಡ್ಡಿ, ಶ್ರಾವಣಿ, ಅನಂತ ಲಕ್ಷ್ಮೀ ರಾಘವರೆಡ್ಡಿ, ಮಂಜುಳ, ಗಾದಿಲಿಂಗ, ಪ್ರದೀಪ್ ರೆಡ್ಡಿ, ಪ್ರಸಾದ್ ರೆಡ್ಡಿ, ಮನೋಹರ ರೆಡ್ಡಿ, ಪ್ರಭಾಕರರೆಡ್ಡಿ, ಪುತ್ರಿಯರು, ಅಳಿಯಂದಿರು, ಪತ್ನಿ ಅವರ ಸಹಕಾರವನ್ನು ಸ್ಮರಿಸಿದರು.
@12bc = ಮತದಾರರ ಸ್ಪಂದನೆ ಹೇಗಿದೆ:
ಸಧ್ಯ ನಗರದಲ್ಲಿ ಮೊದಲ ಸುತ್ತಿನ ಪ್ರಚಾಋ ಮುಗಿಸಿ, ಎರಡನೇ ಸುತ್ತಿನ ಪ್ರಚಾರ ನಡೆಸಿರುವೆ. ಮತದಾರರು ಎಲ್ಲಡೆ, ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಮತ ನೀಡುವ ಭರವಸೆ ನೀಡಿದ್ದಾರೆ. ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆ ಇದೆ. ಇಲ್ಲದಿದ್ದರೆ ಸೋಲೆ ನನಗೆ ಗೆಲುವಿನ ಮೆಟ್ಟಿಲಾಗಬಹುದು ಎಂದರು.
ಈ ರೀತಿ ಮಾತನಾಡುತ್ತಲೇ ಅವರು ಇಂದು ಸಹ ಮನೆ ಮನೆ ಪ್ರಚಾರವನ್ನು ಮುಂದುವರೆಸಿದರು.