ಸೈದಾಪುರ:ಜು.29:ಕೈಗಾರಿಕೆ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ರೈತ ಮಕ್ಕಳಿಗೆ ಮತ್ತು ಸ್ಥಳೀಯ ಜನರಿಗೆ ಉದ್ಯೋಗ ನೀಡಬೇಕು ಎಂದು ನೂತನ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ವತಿಯಿಂದ ಸ್ಥಾಪಿತವಾದ 110/11 ಕೆವಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಖಾನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಅನುದಾನ ತರಲು ನಾನು ಬದ್ದ, ಆದರೆ ನಿವು ಇಲ್ಲಿನ ಸ್ಥಳೀಯ ಜನರಿಗೆ ಉದ್ಯೋಗ ನೀಡದೆ ಅನ್ಯಾಯ ಮಾಡಿದರೆ ಅದನ್ನು ನಾನು ಸಹಿಸುವುದಿಲ್ಲ, ಅಂತಹ ಕಾರ್ಖನೆಗಳನ್ನು ಮುಚ್ಚಲು ಸಿದ್ದನಿದ್ದೇನೆ. ತಮ್ಮ ಮಕ್ಕಳಿಗೆ ಉದ್ಯೋಗ ದೊರಕುತ್ತೆ ಎಂಬ ಆಶಾ ಭಾವನೆಯಿಂz ಕೃಷಿ ಭೂಮಿಯನ್ನು ನೀಡಿದ್ದಾರೆ. ಆದರೆ ಇಂದು ಆ ಮಕ್ಕಳು ದೂರದ ಮಹಾನಗರಗಳಿಗೆ ಗೂಳೆ ಹೋಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಇದ್ದಾಗ ಈ ಕೈಗಾರಿಕೆ ಪ್ರದೇಶ ಅಭಿವೃದ್ಧಿಗೆ ಸುಮಾರು 90 ಕೋಟಿ ಅನುದಾನವನ್ನು ನಮ್ಮ ತಂದೆಯವರು ತಂದಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕೈಗಾರಿಕ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕಿ ರೇಖಾ ಮ್ಯಾಗೇರಿ, ಕೆಐಎಡಿಬಿ ಇಇ ರೂಪೇಶ ಬೆಂಗಳೂರು. ಹಿರಿಯ ಮುಖಂಡ ಸಿದ್ದಣ್ಣಗೌಡ ಕಡೇಚೂರು, ಯುವ ಮುಖಂಡ ಚಂದ್ರುಗೌಡ ಸೈದಾಪುರ, ನರಸಪ್ಪ ಕವಡೆ ಬದ್ದೇಪಲ್ಲಿ, ಅಜಯರೆಡ್ಡಿ ಯಲ್ಹೇರಿ, ಬನ್ನಪ್ಪ ಬೆಟ್ಟಪ್ಪನ್ನೋರ್, ರಾಜೇಶ ಉಡಪಿ, ಚಂದ್ರಶೇಖರ ಕಡೇಚೂರು, ವಿರೇಶ ಸಜ್ಜನ್, ರಾಘವೇಂದ್ರ ಕಲಾಲ್ ಸೇರಿದಂತೆ ಇತರರಿದ್ದರು.
ಜಿಟಿಟಿಸಿ ಕಟ್ಟಡ ಸೋರಿಕೆಗೆ ಶಾಸಕರು ಗರಂ: ಸುಮಾರು 10 ಏಕರೆ ಭೂಮಿಯಲ್ಲಿ ಸ್ಥಾಪನೆಯಾದ ಸರಕಾರಿ ಕೈಗಾರಿಕಾ ಉಪಕರಣಗಳ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣವಾಗಿ 4 ವರ್ಷ ಕಳೆದಿದೆ. ಆದರೆ ಆ ಕಟ್ಟಡವು ಸಂಪೂರ್ಣವಾಗಿ ಸೊರಿಕೆಯಾಗುತ್ತಿರುವುದನು ಕಂಡ ಶಾಸಕ, ಇದನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಕೂಡಲೆ ನೋಟಿಸ್ ನೀಡಿ ಇಲ್ಲದಿದ್ದರೆ ನಿಮ್ಮ ಮೇಲೆ ನಾವು ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಭೂಸ್ವಾಧಿನ ಪ್ರಕ್ರಿಯೆ ಕೈಬಿಡಬೇಕು: ಪ್ರಸುತ್ತ ಇರುವ 3284.28 ಎಕರೆ ಭೂಮಿಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮತ್ತು ಕಾರ್ಖಾನೆಗಳು ಸ್ಥಾಪನೆಯಾಗಿರುವುದಿಲ್ಲ, ಆದರೂ ಸರ್ಕಾರ ಹೆಚ್ಚುವರಿ ಭೂಸ್ವಾಧಿನ ಮಾಡಲು ಮುಂದಾಗಿದೆ. ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಕೈಗಾರಿಕಾ ಮಂತ್ರಿಗಳಿಗೆ ಈ ಆದೇಶವನ್ನು ಹಿಂಪಡಿಯಬೇಕು ಎಂದು ಮನವಿ ಮಾಡಿದ್ದೇನೆ.