ಮುಂಬೈ,ಏ.೩- ಮುಂಬೈನ ಭದ್ರತಾ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ವಿದೇಶಿದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹಲವಾರು ಸುಲಿಗೆ, ಜೀವ ಬೆದರಿಕೆ ಮತ್ತು ಕೊಲೆ ಪ್ರಕರಣಗಳಲ್ಲಿ ಬೇಕಾಗಿರುವ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರಿಸಲು ಚೀನಾ ಹಸಿರು ನಿಶಾನೆ ತೋರಿದೆ.
ತನ್ನ ಹಸ್ತಾಂತರದ ವಿನಂತಿಯನ್ನು ಮ್ಯಾಂಡರಿನ್ ಭಾಷೆಯಲ್ಲಿ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಚೀನಾ ಮನವಿ ಮಾಡಿದೆ. ೨೦೧೦ ರಿಂದ ಪರಾರಿಯಾಗಿರುವ ಪ್ರಸಾದ್ ಪೂಜಾರಿ ಕಳೆದ ತಿಂಗಳು ಹಾಂಗ್ ಕಾಂಗ್ನಲ್ಲಿ ಇಂಟರ್ಪೋಲ್ನ ಅಧಿಕಾರಿಗಳಿಗೆ ಸಿಕ್ಕಿಬಿದ್ದ ನಂತರ ಚೀನಾದ ಅಧಿಕಾರಿಗಳು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ದರೋಡೆಕೋರ ಪೂಜಾರಿಯ ದಸ್ತಾವೇಜನ್ನು ಭಾಷಾಂತರಿಸಲು ನಗರ ಅಪರಾಧ ವಿಭಾಗದ ತಂಡ ಮುಂಬೈನಲ್ಲಿ ಭಾಷಾಂತರಕಾರರ ಸಹಾಯ ಪಡೆಯುತ್ತಿದೆ ಮತ್ತು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿ ಚೀನಾಕ್ಕೆ ಕಳುಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ತಿಂಗಳ ಆರಂಭದಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಲು ವಿಶೇಷ ನ್ಯಾಯಾಲಯಕ್ಕೆ ವಿವಿಧ ಹಂತದಲ್ಲಿ ಮನವಿ ಸಲ್ಲಿಸಿದ ನಂತರ ಪೊಲೀಸರು ಪೂಜಾರಿಯ ದಾಖಲೆಯೊಂದಿಗೆ ಅಫಿಡವಿಟ್ ಅನ್ನು ಸಹ ಲಗತ್ತಿಸಿದ್ದಾರೆ. ಪೂಜಾರಿಗೆ ಸಂಬಂಧಿಸಿದ ಅಪರಾಧ ಕಡತ ಮತ್ತು ಅವರ ಕುಟುಂಬದ ಡಿಎನ್ಎ ಮಾದರಿಗಳನ್ನು, ವಿಶೇಷವಾಗಿ ಅವರ ತಾಯಿ, ಅವರ ಗುರುತನ್ನು ಸ್ಥಾಪಿಸಲು ಚೀನಾ ಸರ್ಕಾರಕ್ಕೆ ಕಳುಹಿಸಲು ದಾಖಲೆಯೊಂದಿಗೆ ಲಗತ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡೀಪಾರು ಮಾಡಿದ ದರೋಡೆಕೋರ ಕುಮಾರ್ ಪಿಳ್ಳೈ ಅವರ ಮಾಜಿ ಸದಸ್ಯ ಪೂಜಾರಿ ಅವರು ಚೀನಾದ ಪ್ರಜೆಯನ್ನು ಮದುವೆಯಾಗಿದ್ದಾರೆ ಎಂದು ನಂಬಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಂಗ್ ಕಾಂಗ್ನಿಂದ ಚೀನಾದ ಪತ್ನಿಯೊಂದಿಗೆ ವಿಮಾನದಲ್ಲಿ ತೆರಳಲು ಹೊರಟಿದ್ದಾಗ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಲುಚು ಜಿಲ್ಲೆ, ಶೆನ್ಜೆನ್ ನಗರದಲ್ಲಿ ಪೂಜಾರಿ ನೆಲೆಸಿದ್ದರು ಎಂದು ಮೂಲಗಳು ತಿಳಿಸಿವೆ. ಮ್ಯಾಂಡರಿನ್ ಭಾಷೆಯಲ್ಲಿ ದಸ್ತಾವೇಜನ್ನು ಮತ್ತು ಇತರ ಹಸ್ತಾಂತರ ಪತ್ರಗಳನ್ನು ಭಾಷಾಂತರಿಸುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಪೂಜಾರಿ ಕಸ್ಟಡಿಗೆ ಪಡೆಯುವ ಭರವಸೆ ಇದೆ. ಇತರ ದೊಡ್ಡ ದರೋಡೆಕೋರರ ಅನುಪಸ್ಥಿತಿಯಲ್ಲಿ ಅವನು ಸರಣಿ ಸುಲಿಗೆ ಕರೆಗಳನ್ನು ಮಾಡುವ ಮೂಲಕ ವಿಧ್ವಂಸಕತೆಯನ್ನು ಸೃಷ್ಟಿಸಿದ್ದ ಎಂದು ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂಬೈ ಮತ್ತು ಥಾಣೆಯಲ್ಲಿ ಸುಮಾರು ೧೫ ರಿಂದ ೨೦ ಪ್ರಕರಣಗಳಿವೆ. ಹೆಚ್ಚಾಗಿ ಸುಲಿಗೆ, ಬೆದರಿಕೆ, ಒಂದು ಕೊಲೆ ಮತ್ತು ಇನ್ನೊಂದು ಕೊಲೆ ಯತ್ನ ಪ್ರಕರಣಗಳಿವೆ.