
ಚೆನ್ನೈ , ಮಾ. ೨- ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ -ಡಿಎಂಕೆ “ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ” ಭಾರತ ಒಂದುಗೂಡಿಸಲು ಪ್ರಯತ್ನಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಎಂ.ಕೆ ಸ್ಟಾಲಿನ್ ಮತ್ತು ಡಿಎಂಕೆ ಪಕ್ಷ ರಾಷ್ಟ್ರದ ಏಕತೆಗಾಗಿ ಕೆಲಸ ಮಾಡುತ್ತಿದೆ.ಭಾರತ ವಿವಿಧತೆಯಲ್ಲಿ ಏಕತೆ,ವೈವಿಧ್ಯತೆ ಹೊಂದಿದೆ ಎಂದು ಅವರು ಗುಣಗಾನ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತವನ್ನು ಒಂದುಗೂಡಿಸುವ ಪ್ರಯತ್ನ ಉತ್ತಮ ಪ್ರಯತ್ನ ಎಂದು ಅವರು ತಿಳಿಸಿದ್ದಾರೆ.
೨೦೨೪ ರ ಲೋಕಸಭಾ ಚುನಾವಣೆಯು ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಅಲ್ಲ ಆದರೆ ಯಾರನ್ನು ಸೋಲಿಸಬೇಕು ಎನ್ನುವರ ಬಗ್ಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಜೊತೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.
“ಇದು ಕೇವಲ ಜನ್ಮದಿನದ ಆಚರಣೆಯ ವೇದಿಕೆಯಲ್ಲ. ಭಾರತದಲ್ಲಿ ಬೃಹತ್ ರಾಜಕೀಯ ವೇದಿಕೆಯ ಆರಂಭವೂ ಆಗಿದೆ. ಸಾಮಾನ್ಯ ವೇದಿಕೆ ರಚಿಸುವ ಮೂಲಕ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆಗಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸೋಲಿಸಲು ಒಗ್ಗಟ್ಟು ಅಗತ್ಯ:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಲು ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಮೀರಿ ಒಗ್ಗಟ್ಟಿನ ಶಕ್ತಿಯಾಗಿ ನಿಲ್ಲಬೇಕು ಎಂದರು.
“ತೃತೀಯ ರಂಗದ ಬಗ್ಗೆ ಆಲೋಚನೆಗಳು ಅರ್ಥಹೀನ. ಬಿಜೆಪಿ ವಿರೋಧಿಸುವ ಎಲ್ಲಾ ರಾಜಕೀಯ ಪಕ್ಷಗಳು ಸರಳವಾದ ಚುನಾವಣಾ ಅಂಕಗಣಿತದ ತರ್ಕವನ್ನು ಅರ್ಥಮಾಡಿಕೊಳ್ಳಲು ಮತ್ತು ಒಗ್ಗಟ್ಟಿನಿಂದ ನಿಲ್ಲುವಂತೆ ಅವರು ಮನವಿ ಮಾಡಿದ್ದಾರೆ.