
ಕಲಬುರಗಿ:ಮೇ.21: ನಮ್ಮ ದೇಶ ಸೇರಿದಂತೆ ವಿಶ್ವದಲ್ಲಿ ದಿನನಿತ್ಯಲೂ ನೂರಾರು ಅಮಾಯಕರ ಸಾವಿಗೆ ಕಾರಣವಾಗಿ, ಜಗತ್ತನ್ನು ತಲ್ಲಣಗೊಳಿಸಿ, ಅಶಾಂತಿಯುತವಾದ ವಾತಾವರಣದ ಸೃಷ್ಟಿಗೆ ಕಾರಣೀಕೃತವಾದ ಭಯೋತ್ಪಾದನೆ ಎಂಬುದು ದೊಡ್ಡ ಸಾಮಾಜಿಕ ಪಿಡುಗಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಇದು ತೊಡಕಾಗಿದ್ದು, ಇದರ ನಿರ್ಮೂಲನೆಗೆ ಎಲ್ಲರು ಜೊತೆಗೂಡಿ ಬೇರು ಸಹಿತ ಸರ್ವನಾಶ ಮಾಡುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಜೆ.ಆರ್.ನಗರದಲ್ಲಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡುತ್ತಿದ್ದರು.
ಶಾಂತಿ, ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ದೇಶದಲ್ಲಿ ಕೆಲವು ದುಷ್ಟ ಶಕ್ತಿಗಳು ಸಮಾಜದಲ್ಲಿ ಅರಾಜಕತೆಯ ವಾತವರಣವನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತಿವೆ. ಅದನ್ನು ನಾವೆಲ್ಲರು ಒಕ್ಕೋರಲಿನಿಂದ ಖಂಡಿಸುವ ಮೂಲಕ, ಅದರ ನಾಶಕ್ಕೆ ಶ್ರಮಿಸಬೇಕಾಗಿದೆ. ಭಯೋತ್ಪಾದನೆಗೆ ಎಂದಿಗೂ ಕೂಡಾ ಪ್ರತ್ಯಕ್ಷವಾಗಲಿ ಅಥವಾ ಪರೋಕ್ಷವಾಗಿ ಆಗಲಿ ಬೆಂಬಲಿಸುವುದು ದೇಶದ್ರೋಹ ಕೆಲಸ ಎಂದರು.
ಕಂಪ್ಯೂಟರ ಸಂಸ್ಥೆಯ ನಿರ್ದೇಶಕ ಇಸ್ಮೈಲ್ ಅತ್ತರ್, ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯ ನಿರ್ದೇಶಕ ದತ್ತು ಹಡಪದ, ಪ್ರಮುಖರಾದ ತಿರುಪತಿ ನಾಯಕ, ಕಾವೇರಿ ಸಣಮನಿ, ಸೌಂದರ್ಯ ಸಣಮನಿ, ಪ್ರವೀಣ ಸಿಂಗೆ, ಸಂಧ್ಯಾರಾಣಿ ಜಾಧವ, ಶಿವಯ್ಯ ಮಠಪತಿ, ಮಹೇಶ ಪೊಲೀಸ್ಪಾಟೀಲ್ ಹಾಗೂ ಉಭಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.