
ಚಿಕ್ಕಮಗಳೂರು, ಏ. ೯- ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ೪೨ ರಿಂದ ೪೬ ಹುಲಿಗಳು ಕಂಡು ಬರುತ್ತಿವೆ ಎಂದು ಜಿಲ್ಲಾ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದ ಆರು ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿ ಹೆಚ್ಚಳವಾಗುತ್ತಿದೆ. ಸಿಡಬ್ಲ್ಯೂಎಸ್(ವನ್ಯಜೀವಿ ಅಧ್ಯಯನ ಕೇಂದ್ರ) ಪ್ರಕಾರ ಹುಲಿ ಸಂತತಿ ಹಾಗೂ ಬಲಿ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗಿದೆ.
ಈ ಬಗ್ಗೆ ಸಂಶೋಧನೆ ಕೂಡ ನಡೆಸಲಾಗಿದೆ. ಪ್ರಮುಖವಾಗಿ ಉಲ್ಲಾಸ್ ಕಾರಂತ್ ಅವರು ಈ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿದ್ದು, ೧೯೮೬ರಲ್ಲಿ ಈ ಕುರಿತು ವೈಜ್ಞಾನಿಕವಾಗಿ ಸಂಶೋಧನೆಯನ್ನು ಪ್ರಾರಂಭ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಮೊದಲು ಹುಲಿ ಗಣತಿ ಬಗ್ಗೆ ಅವೈಜ್ಞಾನಿಕ ಸಂಶೋಧನೆಯಿಂದಾಗಿ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ನಂತರ ಇವರು ಸಂಶೋಧನೆಯಲ್ಲಿ ತಂದ ಬದಲಾವಣೆಗಳು ಹುಲಿಗಳ ಸಂತತಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಹುಲಿಗಳ ಹೆಚ್ಚಳಕ್ಕೆ ಪ್ರಮುಖವಾದ ಕಾರಣ ಎಂದರೆ ಬಲಿ ಪ್ರಾಣಿಗಳು. ೧೯೮೬ಕ್ಕೂ ಮೊದಲು ೮೬ ಹುಲಿಗಳು ಕಂಡು ಬಂದಿದ್ದವು. ೧೯೮೬ರ ನಂತರ ನಿರಂತರ ಸಂಶೋಧನೆಯ ಪ್ರಕಾರ ಇಲ್ಲಿಯವರೆಗೂ ೫೨೦ಕ್ಕೂ ಹೆಚ್ಚು ಹುಲಿಗಳು ಕಂಡು ಬಂದಿವೆ.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ೪೨ ರಿಂದ ೪೬ ಹುಲಿಗಳು ಕಂಡು ಬರುತ್ತಿವೆ ಎಂದು ಚಿಕ್ಕಮಗಳೂರು ಜಿಲ್ಲಾ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ರಕ್ಷಿತಾರಣ್ಯ ಹಾಗೂ ಅಭಯಾರಣ್ಯ, ಹುಲಿ ಸಂರಕ್ಷಣಾ ಕೇಂದ್ರ ಇರುವುದರಿಂದ ಹುಲಿಗಳ ಸಂತತಿ ಹೆಚ್ಚಳವಾಗಿದೆ. ಇಲ್ಲಿನ ನೈಸರ್ಗಿಕ ಬೆಟ್ಟಗಳು ಹಾಗೂ ಅರಣ್ಯಗಳು ಜಿಲ್ಲೆಯಲ್ಲಿ ಹುಲಿಗಳ ವಾಸಸ್ಥಾನಕ್ಕೆ ಪೂರಕವಾಗಿದೆ. ಹುಲಿಗಳ ಸಂಖ್ಯೆ ಏರಿಕೆ: ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ಇಲ್ಲಿನ ರಕ್ಷಣಾ ವ್ಯವಸ್ಥೆ. ಹುಲಿ ಬಗ್ಗೆ ಇರುವಂತಹ ಕಾಳಜಿ. ಅರಣ್ಯ ಪ್ರದೇಶದಲ್ಲಿ ಬಲಿ ಪ್ರಾಣಿಗಳು ಹೆಚ್ಚಾಗಿರುವುದು.
ಇನ್ನು ಇಲ್ಲಿನ ವಾತಾವರಣ ಹುಲಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಜತೆಗೆ ಪರಿಸರ ಸಂಘಟನೆಗಳು ವಹಿಸಿರುವ ಮುತುವರ್ಜಿಗಳು ಕೂಡ ಕಾರಣ. ಭದ್ರಾ ಅಭಯಾರಣ್ಯದಲ್ಲಿ ಈವರೆಗೆ ೪೫ಕ್ಕೂ ಹೆಚ್ಚು ಹುಲಿಗಳು ಕಂಡು ಬಂದಿವೆ. ಹುಲಿಗಳ ರಕ್ಷಣಾ ವ್ಯವಸ್ಥೆ ಹೆಚ್ಚಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ಹುಲಿಗಳ ಸಂತತಿ ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗಿದೆ.