ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 29 :- ತಾಲೂಕಿನ ವಿರುಪಾಪುರ ಸಮೀಪದ ಅಡವಿಸೂರವ್ವನಹಳ್ಳಿ ರಸ್ತೆಯ ಕಕ್ಕುಪ್ಪಿ ಕ್ರಾಸ್ ಬಳಿ ಬೈಕ್ ಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಕ್ಕುಪ್ಪಿ ಗ್ರಾಮ ಪಂಚಾಯತಿ ಸದಸ್ಯ ತೀವ್ರಗಾಯಗೊಂಡು ಮೃತಪಟ್ಟಿದ್ದು ಬೈಕ್ ಹಿಂಬದಿಕುಳಿತಿದ್ದ ಯುವಕನಿಗೆ ಗಾಯವಾಗಿರುವ ಘಟನೆ ನಿನ್ನೆ ಸಂಜೆ 5-45ಗಂಟೆಗೆ ಜರುಗಿದೆ.
ತಾಲೂಕಿನ ಕಕ್ಕುಪ್ಪಿ ಗ್ರಾಮಪಂಚಾಯಿತಿಯ ಅಡವಿಸೂರವವನಹಳ್ಳಿ ಸದಸ್ಯ ಅಂಜಿನಪ್ಪ (45) ಮೃತಪಟ್ಟವನಾಗಿದ್ದು ಅದೇ ಬೈಕಿನಲ್ಲಿ ಕುಳಿತಿದ್ದ ವಿಜಯಕುಮಾರ (24) ಗಾಯಗೊಂಡವನಾಗಿದ್ದಾನೆ ಈತನು ಕೂಡ್ಲಿಗಿ ಆಸ್ಪತ್ರೆಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದಿದೆ.
ಇವರುಗಳು ಕೂಡ್ಲಿಗಿ ಕಡೆಯಿಂದ ವಿರುಪಾಪುರ ಗ್ರಾಮ ದಾಟಿ ಅಡವಿಸೂರವ್ವನಹಳ್ಳಿ ಗ್ರಾಮದ ಕಡೆಗೆ ಹೋಗುವ ಕಕ್ಕುಪ್ಪಿ ಕ್ರಾಸಿನಲ್ಲಿ ಹೋಗುತ್ತಿರುವಾಗ್ಗೆ ಹಿಂಬದಿಯಿಂದ ಬಂದ ಯಾವುದೋ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ನಿಯಂತ್ರಣ ತಪ್ಪಿ ತಗ್ಗಿಗೆ ಬಿದ್ದಿದ್ದು ಗ್ರಾಮಪಂಚಾಯಿತಿ ಸದಸ್ಯ ಅಂಜಿನಪ್ಪ ಹಾಗೂ ಇನ್ನೋರ್ವ ಯುವಕ ವಿಜಯಕುಮಾರ ಗೆ ತೀವ್ರಗಾಯವಾಗಿದ್ದರಿಂದ ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ವೈದ್ಯರ ಪರೀಕ್ಷೆ ಮಾಡಲಾಗಿ ಅಂಜಿನಪ್ಪ ಮೃತಪಟ್ಟಿರುವ ಬಗ್ಗೆ ಖಚಿತಪಡಿಸಲಾಗಿ, ಇನ್ನೋರ್ವ ಗಾಯಾಳು ವಿಜಯಕುಮಾರ ಗೆ ಚಿಕಿತ್ಸೆ ನೀಡಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎಸ್ಪಿ ಅವರ ಅಧ್ಯಕ್ಷತೆಯ ದಲಿತರ ಸಭೆಯಲ್ಲಿ ಭಾಗವಹಿಸಿದ್ದ ಕೂಡ್ಲಿಗಿ ಪಿಎಸ್ಐ ಧನುಂಜಯ ವಿಷಯ ತಿಳಿದ ತಕ್ಷಣ ಎಸ್ಪಿ ಸಾಹೇಬರ ಅನುಮತಿ ಪಡೆದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗಾಯಾಳು ವಿಜಯಕುಮಾರ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.