ಸಂಜೆ ವಾಣಿ ವಾರ್ತೆ
ಕೊಟ್ಟೂರು: ಜು,6- ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವ ಉದ್ದೇಶದಿಂದ ದೇಶದಲ್ಲಿ ನರೇಗಾ ಯೋಜನೆ ಜಾರಿಯಾಗಿದ್ದು, ಜನರ ಬೇಡಿಕೆಗೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಕೂಲಿಕಾರರಿಗೆ ಕೆಲಸ ಕೊಡಿಸಲು ಕಾಯಕ ಬಂಧುಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಸದಾಶಿವ ಪ್ರಭು ಅವರು ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಗೂಗಲ್ ಮೀಟ್ ಮೂಲಕ ಮಾತನಾಡಿದರು.
ನರೇಗಾ ಯೋಜನೆಯಡಿ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ಕೆಲಸ ಕೊಡಿಸುವ ವ್ಯವಸ್ಥೆ ಮಾಡಬೇಕು. ಅದರ ಜೊತೆಗೆ ತಮ್ಮ ಗುಂಪಿನಲ್ಲಿರುವ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ಕೂಲಿ ಪಾವತಿಯಾಗಿದೆಯೇ, ಇಲ್ಲವೋ ಎಂಬುದನ್ನು ಗಮನಿಸುತ್ತಿರಬೇಕು. ಸರಿಯಾದ ಅಳತೆಗೆ ತಕ್ಕಂತೆ ತಮ್ಮ ಗುಂಪಿನ ಸದಸ್ಯರು ಕೆಲಸ ನಿರ್ವಹಿಸುತ್ತಿದ್ದರೆ ಪೂರ್ತಿ ಪ್ರಮಾಣದ ಕೂಲಿ ಪಾವತಿಯಾಗುತ್ತದೆ. ಒಂದು ವೇಳೆ ನಿಗದಿತ ಅಳತೆಗಿಂತ ಕಡಿಮೆ ಅಳತೆ ಕೆಲಸ ಮಾಡಿದ್ದಲ್ಲಿ ಕಡಿಮೆ ಕೂಲಿ ಪಾವತಿಯಾಗುತ್ತದೆ. ಇದನ್ನು ಎಲ್ಲಾ ಕಾಯಕ ಬಂಧುಗಳು ಕೂಲಿಕಾರರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಕೆಲಸದ ಬೇಡಿಕೆ ಸಲ್ಲಿಸಿದರೂ ಕೆಲಸಗಾರರಿಗೆ ಕೆಲಸದ ಬೇಡಿಕೆಯನ್ನು ಕೂಲಿಕಾರರಿಂದ ಪಡೆಯದಿರುವುದು, ಅಳತೆಯಲ್ಲಿ ಹಾಗೂ ಹಾಜರಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಸೂಚಿಸಿದರು.
ಒಂದು ದಿನದ ತರಬೇತಿಗೆ ಚಾಲನೆ ನೀಡಿದ ಬಳಿಕ ತಾಪಂ ಸಹಾಯಕ ನಿರ್ದೇಶಕರಾದ ವಿಜಯಕುಮಾರ್ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ, ಉದ್ದೇಶಗಳು ಮತ್ತು ಸಾಮಾನ್ಯ ಮಾಹಿತಿ ಕುರಿತು ಮಾತನಾಡಿದರು. ಮೇಟಿಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಇತರೆ ವಿಷಯಗಳ ಕುರಿತು ಮೇಟಿಗಳ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸಕ್ರಪ್ಪ ಧರ್ಮರ್, ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕು ತಾಂತ್ರಿಕ ಸಂಯೋಜಕರಾದ ಶ್ರೀಕಾಂತ್ ಡಿ.ಎಂ, ತಾಲೂಕು ಐಇಸಿ ಸಂಯೋಜಕರಾದ ಪ್ರಭುಕುಮಾರ್ ಉಪ್ಪಾರ್, ತಾಂತ್ರಿಕ ಸಹಾಯಕರಾದ ವೈ.ಶ್ರೀಧರ್, ಚಂದ್ರಶೇಖರ ಸಣ್ಣಕ್ಕಿ, ರಾಕೇಶ್, ಡಿಇಒ ಮೋಹನ್, ಆಡಳಿತ ಸಹಾಯಕ ರಾಮಮೂರ್ತಿ, ಬಿಎಫ್ ಟಿ, ಗ್ರಾಪಂಗಳ ಗ್ರಾಮ ಕಾಯಕ ಮಿತ್ರರು, ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.