
ಗದಗ,ಸೆ.16:ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾಗಿರುವುದರಿಂದ ಗದಗ ಜಿಲ್ಲೆಯ ಆರು ತಾಲೂಕುಗಳನ್ನು ತೀವ್ರತರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಮುಂದಿನ ಹಂತದಲ್ಲಿ ರೈತರಿಗೆ ಪರಿಹಾರ ಒದಗಿಸುವಲ್ಲಿ ಬೆಳೆ ಸಮೀಕ್ಷೆ ಮಹತ್ವದ ಪಾತ್ರ ವಹಿಸಲಿದೆ. ಜಿಲ್ಲೆಯ ರೈತರಿಗೆ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವಲ್ಲಿ ರೈತ ಮುಖಂಡರು ನೆರವಾಗಬೇಕೆಂದು ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್.ಅವರು ಕೋರಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ನಿರಂತರವಾಗಿ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಕೃಷಿ ಸಂಬಂಧಿತ ಇಲಾಖೆಗಳು ಸರಿಯಾಗಿ ಮಾಡಬೇಕು. ಕಾಲಕಾಲಕ್ಕೆ ರೈತ ಸಮುದಾಯಕ್ಕೆ ಬಿತ್ತನೆ ಕುರಿತಂತೆ ಹಾಗೂ ವಿಮೆ ನೋಂದಣಿ ಕುರಿತಂತೆ ಮಾಹಿತಿ ಒದಗಿಸಿ ಪೂರ್ಣಗೊಳಿಸಬೇಕು. ಜಿಲ್ಲೆಯ ರೈತರು ಸರ್ಕಾರದ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದರು.
ಬೆಳೆ ವಿಮೆ ಪರಿಹಾರ ಕುರಿತಂತೆ ಮಾತನಾಡಿದ ಅವರು ರೈತರು ತಾವು ಬಿತ್ತಿದ ಬೆಳೆಗಳಿಗೆ ಕಡ್ಡಾಯವಾಗಿ ಕಾಲಮಿತಿಯೊಳಗೆ ವಿಮೆ ಮಾಡಿಸಬೇಕು. ವಿಮೆ ಮಾಡಿಸಲು ನೇಮಿಸಲಾದ ವಿಮಾ ಸಂಸ್ಥೆಗಳು ರೈತರಿಗೆ ಕಾಲಕಾಲಕ್ಕೆ ಜಾಗೃತಿ ಮೂಡಿಸಿ ವಿಮಾ ಕಂತುಗಳನ್ನು ಪಾವತಿಯಾಗುವಂತೆ ಹಾಗೂ ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ವಿಮಾ ಪರಿಹಾರ ವಿತರಿಸಲು ಮುಂದಾಗಬೇಕು.
ರೈತರೆಲ್ಲರೂ ಫ್ರೂಟ್ ತಂತ್ರಾಂಶದಲ್ಲಿ ಫ್ರೂಟ್ ಆಯ್.ಡಿ.ಗಳನ್ನು ಕಡ್ಡಾಯವಾಗಿ ಮಾಡಿಸಬೇಕು. ನೊಂದಣಿ ಸಮಯದಲ್ಲಿ ಭೂಮಿಯ ವಿಸ್ತೀರ್ಣದ ಕುರಿತು ನಿಖರವಾಗಿ ನಮೂದಿಸಬೇಕು. ಬೆಳೆ ಸಮೀಕ್ಷೆ, ಫ್ರೂಟ ತಂತ್ರಾಂಶ ಹಾಗೂ ಪರಿಹಾರ ಆಪ್ಗಳು ಒಂದಕ್ಕೊಂದು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತವೆ. ಅವುಗಳ ಸಹಾಯದಿಂದಲೇ ಮುಂಬರುವ ದಿನಗಳಲ್ಲಿ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗಲಿದೆ. ಆದ್ದರಿಂದ ರೈತರೆಲ್ಲರೂ ಬೆಳೆ ಸಮೀಕ್ಷೆ ಸರಿಯಾಗಿ ಪೂರ್ಣಗೊಳಿಸಬೇಕು ಎಂದರು.
ಬರಗಾಲ ಘೋಷಣೆಯಾದ ಹಿನ್ನಲೆಯಲ್ಲಿ ರೈತರಿಗೆ ನೀಡುವ ಪರಿಹಾರ ಮೊತ್ತವನ್ನು ಬ್ಯಾಂಕ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಈ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಜಿಲ್ಲೆಯ ಎಲ್ಲ ಬ್ಯಾಂಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಜಾಜ್ ಅಲಿಯಾಂಜ್ ವಿಮಾ ಕಂಪನಿಯ ಜಿಲ್ಲಾ ಸಂಯೋಜಕ ಪವನ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಕಂಪನಿಯಿಂದ ಆದಷ್ಟು ಹೆಚ್ಚಿನ ಪರಿಹಾರ ವಿತರಣೆ ಮಾಡಲು ಕ್ರಮ ವಹಿಸಲಾಗುವದು. ವಿಮಾ ಕಂತು ಪಾವತಿಸಿದ ಅರ್ಹ ರೈತರಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಹಾರ ಮೊತ್ತವನ್ನು ವಿತರಿಸಲಾಗುವದು ಎಂದರು.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾತನಾಡಿ ಪಿ.ಎಮ್.ಜಿ.ಎಸ್.ವಾಯ್ಡಿ ವಿಮಾ ಕಂತು ಪಾವತಿಸಿದ ಜಿಲ್ಲೆಯ ರೈತರಿಗೆ 2019 ರಲ್ಲಿ 31619 ರೈತರಿಗೆ 2662 ಲಕ್ಷ ರೂ.ಪರಿಹಾರ ವಿತರಿಸಲಾಗಿದೆ. ಅದರಂತೆ 2020 ರಲ್ಲಿ 86331 ರೈತರಿಗೆ 14852 ಲಕ್ಷರೂ. 2021 ರಲ್ಲಿ 83794 ರೈತರಿಗೆ 10471 ಲಕ್ಷ ರೂ., 2022 ರಲ್ಲಿ 92123 ರೈತರಿಗೆ 12735 ಲಕ್ಷ ರೂ. ಪರಿಹಾರವನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಬರಗಾಲ ಘೋಷಣೆಯಾದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ವಿತರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೊಟಿಮನೆ, ಕೃಷಿ ಇಲಾಖೆ ಉಪನಿರ್ದೇಶಕ ಕರಿಯಪ್ಪ ಸೇರಿದಂತೆ ಜಿಲ್ಲೆಯ ರೈತರು, ರೈತ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.