
ವಿಜಯಪುರ:ಜು.6: ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಅಧಿಸೂಚನೆ ಹೊರಡಿಸಲಾಗಿದ್ದು, ಬೆಳೆ ವಿಮೆ ಯೋಜನೆ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಬೆಳೆ ವಿಮೆ ಜಿಲ್ಲಾ ಮಟ್ಟದ ಉಸ್ತುವಾರಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಬೆಳೆ ವಿಮೆ ಯೋಜನೆಯಡಿ ಹೆಚ್ಚಿನ ರೈತರು ನೋಂದಾಯಿಸಿಕೊಳ್ಳಲು ಅನುಕೂಲವಾಗಲು ಯೋಜನೆ ಕುರಿತು ಅಗ್ರಿಕಲ್ಟರ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಲ್ಲಿ ಬೆಳೆ ವಿಮೆ ಯೋಜನೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಬೆಳೆ ವಿಮೆ ಮಾಡಿಸುವಾಗ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ ಸೀಡಿಂಗ್ ಮಾಡಿಸಲು ಹಾಗೂ ಬೆಳೆ ವಿಮೆ ನೋಂದಣಿ ಮಾಡಿಸುವಾಗ ವಾರಸುದಾರರ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು. ಬೆಳೆ ವಿಮೆ ಮಾಡಿಸುವ ರೈತರು ಕಡ್ಡಾಯವಾಗಿ ಎಫ್.ಆಯ್.ಡಿ. ಹೊಂದಿರಬೇಕು. ಎಫ್.ಆಯ್.ಡಿ. ಹೊಂದಿಲ್ಲದ್ದಿದಲ್ಲಿ ಕೂಡಲೇ ರೈತ ಸಂಪರ್ಕ ಕೇಂದ್ರ ಭೇಟಿ ನಿಡಿ ಎಫ್.ಆಯ್.ಡಿ.ಮಾಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಾಲೂಕಾವಾರು ಹಾಗೂ ಗ್ರಾಮ ಪಂಚಾಯತ್ವಾರು ಅಧಿಸೂಚಿಸಲಾಗಿರುವ ವಿವಿಧ ಬೆಳೆಗಳ ವಿಮಾ ಮೊತ್ತ, ವಿಮಾ ಕಂತು ಮತ್ತು ನೊಂದಣಿಯ ಅಂತಿಮ ದಿನಾಂಕದ ವಿವರನ್ನು ಆಯಾ ರೈತ ಸಂಪರ್ಕ ಕೇಂದ್ರ ಹಾಗೂ ತಾಲುಕಾ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಪಡೆದುಕೊಳ್ಳಬೇಕು. ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಬೆಳೆ ಸಾಲ ಪಡೆಯದ ರೈತರು ಅನ್ವಯಿಸುತ್ತಾರೆ. ಬೆಳೆ ಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ್ ಖಾತೆ ಪಾಸ್ ಬುಕ್ ಮತ್ತು ಆಧಾರ ಸಂಖ್ಯೆಯೊಂದಿಗೆ ಡಿಸಿಸಿ-ಇತರೆ ಬ್ಯಾಂಕ್, ಗ್ರಾಮ ಒನ ಮತ್ತು ಸಿ.ಎಸ್.ಸಿ. ಕೇಂದ್ರಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.