ಬೆಳೆಹಾನಿ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲು ಒತ್ತಾಯ

ಭಾಲ್ಕಿ:ಆ.4:ತಾಲೂಕಿನ ಗಡಿಭಾಗ ಸೇರಿ ವಿವಿಧೆಡೆ ಮುಂಗಾರು ಬೆಳೆಹಾನಿ ಸಂಭವಿಸಿದ್ದು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ತಾಲೂಕು ರೈತ ಸಂಘ ಒತ್ತಾಯಿಸಿದೆ.

ಈ ಕುರಿತು ಪಟ್ಟಣದ ತಹಸೀಲ್ ಕಚೇರಿಯಲ್ಲಿ ಗುರುವಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ತಹಸೀಲ್ದಾರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಗಡಿ ಭಾಗದ ಪಾಂಡರಿ, ಖುದವಂತಪೂರ, ಹಲಸಿ(ಎಲ್), ಇಂಚೂರು, ಗೋರಚಿಂಚೋಳಿ, ಲಖಣಗಾಂವ, ತಳವಾಡ(ಕೆ), ಹಜನಾಳ, ಕುಂಟೆಸಿರ್ಸಿ, ನಿಡೇಬಾನ್ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಮುಂಗಾರಿನ ಆರಂಭದಲ್ಲಿ ಮಳೆ ಕೊರತೆಯಿಂದ ಬಿತ್ತನೆಯಾದ ಬೆಳೆಗಳು ಮೊಳಕೆಯೊಡೆಯದೇ ಹಾಳಾಗಿವೆ ಮತ್ತು ಜುಲೈ ತಿಂಗಳಿನಲ್ಲಿ ಬಿತ್ತನೆ ಕಂಡ ಸೋಯಾ ಅವರೆ, ತೊಗರಿ, ಉದ್ದು, ಹೆಸರು ಸೇರಿ ವಿವಿಧ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳು ವಾಡಿಕೆಗಿಂತ ಹೆಚ್ಚು ಸುರಿದ ಮಳೆಗೆ ಜಲಾವೃತಗೊಂಡು ನಷ್ಟಕ್ಕಿಡಾಗಿವೆ.

ಇದರಿಂದ ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಬೆಳೆಹಾನಿ ಸಮೀಕ್ಷೆ ಪಾರದರ್ಶಕವಾಗಿ ನಡೆಸಿ ಸರಕಾರಕ್ಕೆ ಸಮರ್ಪಕ ವರದಿ ಸಲ್ಲಿಸಿ ಅರ್ಹ ರೈತರಿಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು.

ಬೆಳೆಹಾನಿ ಸಮೀಕ್ಷೆಗೆ ವಿಳಂಬ ನೀತಿ ಅನುಸರಿಸಿದರೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಬಾಬುರಾವ ಜೋಳದಾಪಕೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ್, ಶೇಷಾರಾವ ಕಣಜೆ, ಭಾವುರಾವ ಪಾಟೀಲ್, ಶ್ರೀರಂಗ ಗಾಜರೆ, ನಾಗಶೆಟೆಪ್ಪ ಖಂದಾರೆ, ಬಾಬುರಾವ ಸೋನಜಿ, ಬಾಬುರಾವ ಭಾಸಗೆ, ಸತ್ಯವಾನ ಸೂರ್ಯವಂಶಿ, ನಾಗಶೆಟ್ಟಿ ಲಂಜವಾಡೆ ಸೇರಿದಂತೆ ಹಲವರು ಇದ್ದರು.