
ದಾವಣಗೆರೆ. ಆ.೪; ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆ ಪ್ರೀಮಿಯಂ ಪಾವತಿಸಲು ಜುಲೈ 31 ಇದ್ದ ಕಡೆ ದಿನಾಂಕವನ್ನು ಆಗಸ್ಟ್ 7ರ ತನಕ ವಿಸ್ತರಣೆ ಮಾಡಿ, ಕೇಂದ್ರದ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ ಸಂತಸ ತಂದಿದೆ ಎಂದು ಬಿಜೆಪಿ ಮುಖಂಡ, ಮಾಜಿ ಎಪಿಎಂಸಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಹೇಳಿದ್ದಾರೆ.ಆಗಸ್ಟ್ 7 ರೊಳಗೆ ಪ್ರೀಮಿಯಂ ಪಾವತಿಸುವ ರೈತರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಮುಂದಿನ 15 ದಿನಗಳವರೆಗೆ ಕಾಲಾವಕಾಶ ನೀಡಿದೆ.ವಾಡಿಕೆಯಂತೆ ಮೇ ತಿಂಗಳ ಅಂತ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿಲ್ಲ. ಜೂನ್ ತಿಂಗಳಲ್ಲಿಯೂ ಮೊದಲಾರ್ಧದಲ್ಲಿ ವಾಡಿಕೆಯಷ್ಟು ಮಳೆಯಾಗದೇ ವಿಳಂಬವಾಗಿದ್ದರಿಂದ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚಟುವಟಿಕೆಗಳಿಗೆ ಹಿನ್ನಡೆಯಾಯಿತ್ತು. ಜುಲೈ ಮೊದಲ ವಾರದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದರು. ಅಲ್ಲಿಂದ ಬಿತ್ತನೆ, ಹೊಲ ಉಳಿಮೆ, ಮರು ಬಿತ್ತನೆ ಆರಂಭಗೊಂಡಿದ್ದರಿಂದ ಬೆಳೆವಿಮೆ ಯೋಜನೆ ಕಂತು ಪಾವತಿಸಲು ಕಡೆ ದಿನಾಂಕ ಜುಲೈ 31 ರೊಳಗೆ ರೈತರಿಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ 7 ದಿನಗಳ ಕಾಲ ವಿಸ್ತರಣೆ ಮಾಡಿರುವುದು ರೈತರಿಗೆ ಯೋಜನೆ ಪ್ರೀಮಿಯಂ ಪಾವತಿಸಲು ಕಾಲಾವಕಾಶ ಸಿಕ್ಕಿದೆ ಎಂದು ಬಿ ಎಂ ಸತೀಶ್ ಹೇಳಿದ್ದಾರೆ