
ದಾವಣಗೆರೆ.ಏ.೨೯ : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು ಇಂದು ಬೆಳಗ್ಗೆ, ಸಂಜೆ 31 ಮತ್ತು 41 ಹಾಗೂ 44ನೇ ವಾರ್ಡ್ ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.ವಾರ್ಡ್ ಗಳಲ್ಲಿ ತೆರೆದ ವಾಹನದಲ್ಲಿ ನಾಗರಾಜ್ ಲೋಕಿಕೆರೆ ಅವರು ಕೈ ಮುಗಿಯುತ್ತಾ ಮತಯಾಚಿಸುತ್ತಾ ಸಾಗುತ್ತಿರುವಾಗ ನೆರೆದಿದ್ದ ಮತದಾರರು ನಗು ಮೊಗದಿ, ಕೈ ಬೀಸುತ್ತಾ ಪ್ರತಿಸ್ಪಂದನೆ ನೀಡುತ್ತಾ, ಮನಪೂರ್ವಕವಾಗಿ ಸ್ವಾಗತಿಸಿದರು.ಬೆಳಗ್ಗೆ 31 ಮತ್ತು 41ನೇ ವಾರ್ಡ್ ನಲ್ಲಿನ ಮತ ಪ್ರಚಾರವು 41ನೇ ಚಾನಲ್ ಏರಿಯಿಂದ ಪ್ರಾರಂಭವಾಯಿತು. ಎಸ್ ಓಜಿ ಕಾಲೋನಿ, ರಾಮನಗರ, ಬಸವ- ಬುದ್ದ -ಭೀಮನಗರ ಸೇರಿದಂತೆ ಪ್ರತಿ ಗಲ್ಲಿ, ಕೇರಿಗಳ ಸುತ್ತಿ ಮತಯಾಚಿಸಿದರು. ಬಸವ -ಬುದ್ದ -ಭೀಮನಗರದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಾಯಿಯ ಕೃಪಾಶಿರ್ವಾದ ಪಡೆದು ಮುಂದಿನ ಮತ ಪ್ರಚಾರ ನಡೆಸಿದರು.ಸ್ಥಳೀಯರು ತೋರಿಸಿದ ಆ ಪ್ರೀತಿ ವಿಶ್ವಾಸಕ್ಕೆ ನನ್ನ ಮನಸ್ಸು ತುಂಬಿ ಬಂದಿದೆ. ನಾನು ಅವರೊಂದಿಗೆ ಸದಾ ಇರುತ್ತೇನೆ ಹಾಗೂ ಅವರು ತೋರಿದ ಪ್ರೀತಿಗೆ ನಾನು ಅವರಿಗೆ ಶತಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಹಾಗೂ ಜೀವನದುದ್ದಕ್ಕೂ ಚಿರಋಣಿಯಾಗಿರುತ್ತೇನೆ ಎಂದು ನಾಗರಾಜ್ ಲೋಕಿಕೆರೆ ಅವರು ಹರ್ಷ ವ್ಯಕ್ತಪಡಿಸಿದರು.ಬೃಹತ್ ಹೂವಿನಾರ ಹಾಕಿ ಅಭಿಮಾನದಿ ಬೆಂಬಲ : ಎಸ್ ಓಜಿ ಕಾಲೋನಿಯಲ್ಲಿ ಮತ ಪ್ರಚಾರ ನಡೆಸುತ್ತಿದ್ದ ವೇಳೆ ನಾಗರಾಜ್ ಲೋಕಿಕೆರೆ ಅವರಿಗೆ ದೇವನಗರಿ ಫ್ರೆಂಡ್ಸ್ ಹೆಸರಿನ ಯುವಕರ ತಂಡದಿಂದ ಬೃಹತ್ ಹೂವಿನಾರ ಹಾಕಿ ಅಭಿಮಾನದಿಂದ ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಲಾಯಿತು.