
ಯಾದಗಿರಿ ಸೆ. 04: ಕಳೆದ ವರ್ಷ ಧಾರಾಕಾರ ಸುರಿದ ಮಳೆಗೆ ಕೊಚ್ಚಿಹೋದ ಅರ್ಧ ಸೇತುವೆಯ ಮೇಲೆ ಜನತೆ ನಿತ್ಯ ಸಂಚಾರ ಮಾಡುತ್ತಿದ್ದಾರೆ. ಈದೀಗ ಈವರ್ಷದ ಮಳೆಗೂ ಸಹ ಸೇತುವೆ ಇನ್ನಷ್ಟು ಕೊಚ್ಚಿಕೊಂಡು ಹೋಗುತ್ತಲೇ ಇದೆ ಎಂದು ಹೇಳಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹೋರಾಟಕ್ಕೆ ಎಚ್ಚೆತ್ತ ಪಿಡಬ್ಲೂಡಿ ಅಧಿಕಾರಿಗಳು ಸೇತುವೆ ಸ್ಥಳಕ್ಕೆ ಓಡೋಡಿ ಬಂದು ಕ್ರಮ ಕೈಗೊಂಡರು.
ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 6 ಕಿ.ಮೀ. ಅಂತರದಲ್ಲಿರುವ ಮುಂಡರಗಿ ಬೆಳಗೇರಾ ಪ್ರಮುಖ ಗ್ರಾಮೀಣ ರಸ್ತೆ ರಾಜ್ಯದಲ್ಲೇ ಇಂತಹ ರಸ್ತೆ ಅವ್ಯವಸ್ಥೆ ಸೇತುವೆ ಕೊಚ್ಚಿ ಹೋಗಿರುವ ದೃಶ್ಯ ಎಲ್ಲಿಯೂ ಕಂಡು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಅರ್ಧ ಕೊಚ್ಚಿ ಹೋಗಿರುವ ಸೇತುವೆ ಈದೀಗ ಈ ವರ್ಷದ ಮಳೆಯ ಕಾರಣದಿಂದಲೇ ಮತ್ತಷ್ಟು ಕೊಚ್ಚಿ ಹೋಗುತ್ತಿದೆ. ಈ ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಿ ಅದರ ಮೇಲೆ ಅವೈಜ್ಞಾನಿಕವಾಗಿ ಮಣ್ಣು ಹಾಕಿರುವುದರಿಂದ ಮಳೆಯಿಂದ ರಸ್ತೆ ಕೆಸರು ಗದ್ದೆಯಾಗಿತ್ತು.
ಇದೇ ಸ್ಥಳದಲ್ಲಿ ಮಹಿಳೆಯರು ಹಾಗೂ ರೈತರು ಸೇರಿಕೊಂಡು ಬತ್ತದ ನಾಟಿಯನ್ನು ಹಾಡು ಹಾಡುವ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದ ಎಇಇ ಹಾಗೂ ಸಿಬ್ಬಂದಿಯವರು [ಪಕ್ಕದಲ್ಲಿರುವ ಜಮೀನಿನ ಮಾಲೀಕರ ಮನವೊಲಿಸಿ ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಂದ ಮರಂ ಹೊಡೆಸಿ ರೋಲರ್ ಓಡಾಡಿಸಿ ರಿಪೇರಿ ಮಾಡಿದರು. ಹಳೆ ಸೇತುವೆ ಮೇಲೆ ಯಾರು ತಿರುಗಾಡದಂತೆ ಮುಳ್ಳು ಹಚ್ಚಿ ತಿರುವು ನಾಮಫಲಕ ಅಳವಡಿಸಿದ್ದಾರೆ.
ಇದಾದ ನಂತರ ಸೇತುವೆ ಹಾಗೂ ರಸ್ತೆ ಸುಮಾರು 1 ಕೋ.ರೂ. ಗೂ ಹೆಚ್ಚಿನ ವೆಚ್ಚದಲ್ಲಿ ಡಾಂಬರಿಕರಣಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಜೊತೆಗೆ ಸ್ಥಳದಲ್ಲಿಯೇ ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಉಮೇಶ ಮುದ್ನಾಳ ರಸ್ತೆ ಅತ್ಯಗತ್ಯವಾಗಿದ್ದು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದು ತಾತ್ಕಾಲಿಕ ರಸ್ತೆ ನಿರ್ಮಿಸಿದರೆ ಆಗದು ಪೂರ್ಣ ಪ್ರಮಾಣದ ಸೇತುವೆ, ರಸ್ತೆ ಮತ್ತು ತಡೆಗೋಡೆ ನಿರ್ಮಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಆಗ ಮಾತನಾಡಿದ ಶಾಸಕರು ಸಧ್ಯ ತಾತ್ಕಾಲಿಕವಾಗಿ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಬಾರ್ಡ, ಕೆಕೆಆರ್ಡಿಬಿ ಇಲ್ಲವೇ ತಮ್ಮ ಶಾಸಕರ ಅನುದಾನದಲ್ಲಿ ಸೇತುವೆ ಮತ್ತು ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಬೆಳಗೇರಾ ಗ್ರಾಮಸ್ಥರಾದ ಮುಂಡರಗಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಪಿಡಿಓ ಅವರು ಸೇರಿದಂತೆ ಆಂಜಿನೇಯ ನಾಯ್ಕೋಡಿ, ಚಂದ್ರಯ್ಯ ಗುತ್ತೇದಾರ, ಸಾಬಣ್ಣ ಪ್ಯಾಟಿ, ಮಾದೇವ, ಲಕ್ಷ್ಮಣ, ಮಶಾಕ್ ಅಲಿ, ಅಯ್ಯಪ್ಪ, ಮಾದೇವಪ್ಪ, ಶೇಟ್ರ, ಮೋನಪ್ಪ, ಕಾಸಿಮ್ ಮರಿಲಿಂಗ, ಲೋಕೇಶ ಜಗದೇವ, ಮೋನಪ್ಪ, ಶರಣಪ್ಪ, ಮುತ್ತಮ್ಮ, ಅಳ್ಳೆಮ್ಮ, ಬಸಲಿಂಗಮ್ಮ ಸೇರಿ ಅನೇಕರಿದ್ದರು.