ಬೆಣ್ಣೆನಗರಿಯಲ್ಲಿ ಕೇಜ್ರಿವಾಲ್ ಸಂಚಲನ

ದಾವಣಗೆರೆ,ಮಾ.೪-ಅದೃಷ್ಟದ ನೆಲವೆಂದೇ ಬಿಂಬಿತವಾಗಿರುವ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಅಬ್ಬರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕದಲ್ಲೂ ಆಪ್ ತನ್ನ ಖಾತೆ ತೆರೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಂದಾಗಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ ಈಗಾಗಲೇ ಪ್ರಮುಖ ರಾಷ್ಟ್ರೀಯ ಪಕ್ಷಗಳು ರಾಜ್ಯದ ದಶದಿಕ್ಕುಗಳಲ್ಲಿ ಚುನಾವಣೆಗೆ ಪ್ರಚಾರ ಆರಂಭಿಸಿದ್ದಾರೆ.ಇದೀಗ ಆಮ್ ಆದ್ಮಿ ಪಕ್ಷ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಚುನಾವಣೆಗೆ ಪ್ರಚಾರ ಆರಂಭಿಸಿದೆ.ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯುತ್ತಿದೆ.
ಬೆಣ್ಣೆನಗರಿಯಲ್ಲಿ ಅರವಿಂದ್ ಕೇಜ್ರಿವಾಲ್ “ಹವಾ”ಮುಂಬರುವ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷವು ದಾವಣಗೆರೆಯಿಂದ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ಕೊಟ್ಟಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಾನ್ ಸಿಂಗ್ ಮಾನ್ ಭರ್ಜರಿ ಪ್ರಚಾರ ನಡೆಸಿದರು.
ದೆಹಲಿಯಲ್ಲಿ ಎರಡನೇ ಬಾರಿ ಸಿಎಂ ಆದ ಬಳಿಕ ಮೊದಲ ಬಾರಿಗೆ ಆಗಮಿಸಿದ ಅರವಿಂದ ಕೇಜ್ರಿವಾಲ್‌ಗೆ ಭರ್ಜರಿ ಸ್ವಾಗತ ಕೋರಲಾಯಿತು. ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಬಂದಿಳಿದ ಅರವಿಂದ್ ಕೇಜ್ರಿವಾಲ್ ಹಾಗೂ ಭಗವಾನ್ ಸಿಂಗ್ ಮಾನೆ ವೇದಿಕೆಗೆ ಆಗಮಿಸಿದರು.ನಗರದ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ರಾಜ್ಯ ಮುಖಂಡರು, ಆಮ್ ಆದ್ಮಿ ಪಕ್ಷದ ರಾಷ್ಟ್ರದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಆಗಮಿಸಿದ್ದರು.
ಬಿಗಿ ಬಂದೋಬಸ್ತ್:
ಅರವಿಂದ್ ಕೇಜ್ರಿವಾಲ್ ಹಾಗೂ ಭಗವಾನ್ ಸಿಂಗ್ ಮಾನ್ ಆಗಮನ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾತ್ರವಲ್ಲ, ಭದ್ರತಾ ಸಿಬ್ಬಂದಿ ದೆಹಲಿ ಹಾಗೂ ಪಂಜಾಬ್ ನಿಂದ ಆಗಮಿಸಿದ್ದರು. ಸ್ಥಳೀಯ ಪೊಲೀಸರು ಸಹ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.೪೦ರಿಂದ ೫೦ ಸಾವಿರ ಜನರು ಆಗಮಿಸುವ ನಿರೀಕ್ಷೆ ಸಮಾವೇಶದ ಆಯೋಜಕರ ನಿರೀಕ್ಷೆಯಾಗಿತ್ತು. ಆದ್ರೆ ಕೇವಲ ನಾಲ್ಕರಿಂದ ಐದು ಸಾವಿರ ಜನರು ಮಾತ್ರ ಆಗಮಿಸಿದ್ದರು. ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕರು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡರು. ಆಯ್ದ ಪದಾಧಿಕಾರಿಗಳು, ಆಕಾಂಕ್ಷಿಗಳಿಗೆ ವೇದಿಕೆ ಮುಂಭಾಗ ಅವಕಾಶ ಕಲ್ಪಿಸಿಕೊಡಲಾಗಿತ್ತು.ಈ ವೇಳೆ ಉಸ್ತುವಾರಿಗಳಾದ ದಿಲೀಪ್ ಪಾಂಡೆ,ಬ್ರಿಜೇಶ್ ಕಾಳಪ್ಪ, ಉಪೇಂದ್ರ ಗೋಯೆಂಕರ್, ರಾಜ್ಯ ಕಾರ್ಯಾಧ್ಯಕ್ಷರಾದ ಬಿ.ಟಿ. ನಾಗಣ್ಣ, ಮೋಹನ್ ದಾಸರಿ, ಶಿವರಾಜಪ್ಪ ಜೋಗಿನ್, ಜಫರ್ ಮೊಹಿದ್ದೀನ್, ರವಿಚಂದ್ರ ನರವೆಂಚಿ, ಟೆನ್ನಿಸ್ ಕೃಷ್ಣ, ಕುಶಾಲ ಸ್ವಾಮಿ,ಜಗದೀಶ್ ಸದಾಯ್,ಹರಿಹರನ್ ಹಾಗೂ ಜಿಲ್ಲೆಯ ಮುಖಂಡರುಗಳಿದ್ದರು.
ಅಭ್ಯರ್ಥಿ ಆಯ್ಕೆಗೆ ಕಸರತ್ತು
ಶುಕ್ರವಾರ ತಡರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ಈ ಇಬ್ಬರು ನಾಯಕರು, ಖಾಸಗಿ ಹೋಟೆಲ್‌ವೊಂದರಲ್ಲಿ ತಂಗಿದ್ದು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ತೆರೆಮರೆಯಲ್ಲಿಯೇ ಚುನಾವಣಾ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಂದು ಬೆಳಿಗ್ಗೆ ಕೇಜ್ರಿವಾಲ್ ಅವರೊಂದಿಗೆ ಚರ್ಚೆ ನಡೆಸಿದ ಪಕ್ಷದ ಸ್ಥಳೀಯ ಮುಖಂಡರು ಇಲ್ಲಿ ಪಕ್ಷದ ಕಾರ್ಯಕರ್ತರ ಚಟುವಟಿಕೆ, ಚುನಾವಣಾ ತಯಾರಿಗಳ ಕುರಿತು ವಿವರಿಸಿದರೆಂದು ತಿಳಿದುಬಂದಿದೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ೨೨೪ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶವಿರಿಸಿದ್ದು, ಈ ದಿಶೆಯಲ್ಲಿ ಅವರು ಯಾವ ಹೆಜ್ಜೆ ಇಡಲಿದ್ದಾರೆ ಎಂಬುದು ಗೌಪ್ಯ. ಈ ಸಂಬಂಧ ಶೀಘ್ರ ಅಭ್ಯರ್ಥಿಗಳ ಪಟ್ಟಿಯೂ ಬಿಡುಗಡೆಯಾಗಲಿದೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ.