
ವಿಜಯಪುರ: ಮೇ.6:ಬೌದ್ಧವಿಹಾರ ನಿರ್ಮಾಣ ಸಮಿತಿ, ಭಾರತೀಯ ಬೌದ್ಧ ಮಹಾಸಭಾದ ಆಶ್ರಯದಲ್ಲಿ ಜಲನಗರದ ಸಾರಿಪುತ್ರ ಬುದ್ಧವಿಹಾರದಲ್ಲಿ ಜರುಗಿದ 2567ನೇ ಬುದ್ಧ ಪೂರ್ಣಿಮೆ ಮಹೋತ್ಸವ ಸಮಾರಂಭವು ಸಾಮೂಹಿಕ ಬುದ್ಧವಂದನೆ, ಬುದ್ಧ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಗತಿಪರ ಚಿಂತಕ ಡಾ. ಜೆ.ಎಸ್. ಪಾಟೀಲ ಅವರು ಮಾತನಾಡಿ, ಕತ್ತಲೆ ಪ್ರತೀಕವಾದ ಅಮವಾಸ್ಯೆಯ ವಿರೋಧವಾಗಿ ಬೆಳಕಿನ ಪ್ರತೀಕವಾದ ಹುಣ್ಣಿಮೆ ಬೌದ್ಧ ಧರ್ಮದಲ್ಲಿ ಮಹತ್ವವನ್ನು ಪಡೆಯುತ್ತದೆ. ಗೌತಮ ಬುದ್ಧರ ಹುಟ್ಟಿನಿಂದ ಪರಿನಿಬ್ಬಾಣದವರೆಗೂ ಹುಣ್ಣಿಮೆಯು ಮಹತ್ವವನ್ನು ಪಡೆದಿದ್ದು, ಹುಣ್ಣಿಮೆಯು ಜ್ಞಾನದ ಮತ್ತು ಬೆಳಕಿನ ಸಂಕೇತ ಎಂದು ಹೇಳಿದರು.
ಮಾನವ ಘನತೆಗೆ ಬೇಕಾದ ಬೋಧನೆಗಳನ್ನು ನೀಡಿದ ಭಗವಾನ ಬುದ್ಧರು ಸ್ವಾತಂತ್ರ್ಯ ಚಳುವಳಿಯನ್ನು ಹುಟ್ಟು ಹಾಕಿದರು. ಭಾರತದ ಪರಂಪರೆಯಲ್ಲಿ ವಾರದ ನಡುವೆ, ಜನಗಳ ಮಧ್ಯೆ, ನಕ್ಷತ್ರಗಳಲ್ಲಿ, ಆಹಾರ ಪದಾರ್ಥಗಳಲ್ಲಿ, ಕೀಳು-ಮೇಳು ಎಂಬ ಬೇಧ-ಭಾವವನ್ನು ಮಾಡಲಾಗಿದೆ. ಆದರೆ ಬೌದ್ಧ ಧರ್ಮವೂ ಶಾಂತಿ ಮತ್ತು ಸಮಾನತೆಯನ್ನು ನೀಡುವ ಮೂಲಕ ಜಗತ್ತಿನಲ್ಲಿಯೇ ಶ್ರೇಷ್ಠ ಧರ್ಮವಾಗಿದೆ ಎಂದು ಹೇಳಿದರು.
ಭಾರತದಲ್ಲಿನ ಬೌದ್ಧವಿಹಾರಗಳನ್ನು ಮಂದಿರಗಳನ್ನಾಗಿ ಪರಿವರ್ತಿಸಲಾಯಿತು. ಮಂದಿರಗಳ ಸಂಸ್ಕøತಿ ಬುದ್ಧ ಪೂರ್ವದಲ್ಲಿರಲಿಲ್ಲ, ಆದರೆ ನಾವುಗಳಿಂದು ಅವರ ಸಿದ್ಧಾಂತಗಳೊಂದಿಗೆ ಇದ್ದರೂ ಕೂಡಾ ಮಂದಿರಕ್ಕೆ ಹೋಗುವುದನ್ನು ಬಿಟ್ಟಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ವೈದಿಕ ಮೌಢ್ಯಗಳ ವಿರುದ್ಧ ತೊಡೆತಟ್ಟಿ ಹುಟ್ಟಿದ ಬೌದ್ಧ ಧರ್ಮದ ಆಚರಣೆಗಳನ್ನು ಮಾತ್ರ ಮಾಡುತ್ತೇವೆ ಎಂಬ ಪ್ರಮಾಣವನ್ನು ಇಂದಿನ ಬುದ್ಧ ಪೂರ್ಣಿಮೆ ದಿನ ಮಾಡೋಣ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಕಾರ ಸಂಘಗಳ ನಿವೃತ್ತ ಅಧಿಕಾರಿಯಾದ ಬಿ.ಆರ್. ಬನಸೋಡೆ ಅವರು ಮಾತನಾಡಿ, ಬುದ್ಧ ಈ ಜಗದ ಬೆಳಕು. ಶಾಂತಿ ಮತ್ತು ಸಮಾನತೆಯ ತತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಪ್ರಥಮ ಮಹಾಪುರುಷ. ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿದ ಭಗವಾನ ಬುದ್ಧರು ಇಂದಿನ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೌದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಅವರು, ಬುದ್ಧರ ಬೋಧನೆಗಳನ್ನು ಮತ್ತು ಬೌದ್ಧ ಧರ್ಮದ ಆಚರಣೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು, ಬುದ್ಧವಿಹಾರ ಸಮಾಜದ ಆಸ್ತಿಯಾಗುದ್ದು, ಜಿಲ್ಲೆಯ ಎಲ್ಲ ಬೌದ್ಧ ಉಪಾಸಕ, ಉಪಾಸಕಿಯರು ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಅನುಯಾಯಿಗಳು ಸಂಘದ 2022-2023ನೇ ಸಾಲಿನ ಸದಸ್ಯರಾಗಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಬೌದ್ಧವಿಹಾರ ನಿರ್ಮಾಣ ಸಮಿತಿಗೆ 60 ಜನರು ಸದಸ್ಯರಾಗಲು ಸಹಮತವನ್ನು ನೀಡಿ ತಮ್ಮ ಹೆಸರನ್ನು ನಮೂದಿಸಿದರು. ಮನಗೂಳಿ ಅಗಸಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಬೌದ್ಧವಿಹಾರ ನಿರ್ಮಾಣ ಸಮಿತಿಯ ನಿರ್ದೇಶಕರಾದ ಸಾಬು ಚಲವಾದಿ ದಂಪತಿಗಳ 49ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಸಂತೋಷ ಶಹಾಪೂರ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘರ್ಷ ಹೊಸಮನಿ ವಂದಿಸಿದರು.
ಸಮಾರಂಭದಲ್ಲಿ ಬೌದ್ಧವಿಹಾರ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ಉಪಾಧ್ಯಕ್ಷರಾದ ಶಶಿಕಾಂತ ಹೊನವಾಡಕರ, ಸದಸ್ಯರಾದ ಸಾಬು ಚಲವಾದಿ, ದಶವಂತ ಗುನ್ನಾಪೂರ, ಅಪ್ಪು ನಾಗಠಾಣ, ಮನೋಜ ಕೋಟ್ಯಾಳಕರ್, ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಕಾರ್ಯದರ್ಶಿ ವೆಂಕಟೇಶ ವಗ್ಯಾನವರ, ಬೌದ್ಧ ಉಪಾಸಕರಾದ ಅಶ್ವಿನಿ ಲಂಬು, ಸುಲೋಚನಾ ಚಲವಾದಿ, ಭಾಗ್ಯಶ್ರೀ ವಗ್ಯಾನವರ, ಸಿದ್ದಮ್ಮ ಚಲವಾದಿ, ರೇಣುಕಾ ಶಹಾಪೂರ, ಶಾರದಾ ಹೊಸಮನಿ, ಸವಿತಾ ಹೊಸಮನಿ, ಬಿ.ಎಚ್. ನಾಡಗಿರಿ, ವಾಯ್.ಎಚ್. ಲಂಬು, ಮಲ್ಲಿಕಾರ್ಜುನ ಕೆಳಗಡೆ, ಸುಭಾಸ್ ಗುಡಿಮನಿ, ರೋಹಿತ್ ಮಲಕನ್ನವರ, ಇಬ್ರಾಹಿಂಪೂರ ಮತ್ತು ಮನಗೂಳಿ ಅಗಸಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ನಗರದ ವಿವಿಧ ಬಡಾವಣೆಯ ಡಾ. ಅಂಬೇಡ್ಕರ್ ಅನುಯಾಯಿಗಳು, ಪ್ರಗತಿಪರ ಚಿಂತಕರು, ಉಪಾಸಕ-ಉಪಾಸಕಿಯರು ಉಪಸ್ಥಿತರಿದ್ದರು.