ಬೀದರ್‍ನಲ್ಲಿ ಧಾರಾಕಾರ ಮಳೆ – ಅಕಾಲಿಕ ಮಳೆಗೆ ಹೈರಾಣಾದ ಜನ

ಬೀದರ್: ಮಾ.17:ಸತತ ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಅಕಾಲಿಕ ಧಾರಾಕಾರ ಮಳೆಗೆ ಬೀದರ್‍ನ ಜನ ಹೈರಾಣಾಗಿದ್ದಾರೆ.

ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಎರಡು ಅಡಿಯಷ್ಟು ನೀರು ನಿಂತಿದ್ದು, ಜನ ಹೊರಗೆ ಬರಲು ಹರಸಾಹಸ ಪಡುತ್ತಿದ್ದಾರೆ.

ಒಂದೆಡೆ ಬಿಸಿಲಿನಿಂದ ಬೆಂದಿದ್ದ ಜನ ಮಳೆರಾಯನ ಆಗಮನಕ್ಕೆ ಸಂಭ್ರಮಿಸಿದ್ದಾರೆ. ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಬೀದರ್, ಹುಮ್ನಾಬಾದ್, ಔರಾದ್, ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು, ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಅಕಾಲಿಕ ಮಳೆಗೆ ಬೈಕ್ ಸವಾರರು ಹಾಗೂ ಪಾದಾಚಾರಿಗಳು ತತ್ತರಿಸಿದ್ದಾರೆ.

ಈಗಾಗಲೇ 3 ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಇನ್ನೆರೆಡು ದಿನ ಜಿಲ್ಲೆಯಲ್ಲಿ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.