
ಸಂಜೆವಾಣಿ ವಾರ್ತೆ
ಕೊಟ್ಟೂರು: ಏ,17- 2023ರ ವಿಧಾನಸಭಾ ಚುನಾವಣೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ಶಾಸಕರಾದ ಎಸ್. ಭೀಮಾನಾಯಕ ಅವರಿಗೆ ಟಿಕೆಟ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದ ಆರಾಧ್ಯ ದೈವ, ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರುಕೊಟ್ಟೂರೇಶ್ವರನ ದೇವಸ್ಥಾನಕ್ಕೆ ಶಾಸಕರಾದ ಎಸ್.ಭೀಮಾ ನಾಯಕ ತನ್ನ ಕುಟುಂಬ ಸಮೇತ ಆಗಮಿಸಿ ಬಿ ಫಾರಂ ಗೆ ಕೊಟ್ಟೂರೇಶ್ವರ ಸ್ವಾಮಿಯ ಪೂಜೆಯನ್ನು ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೇ 19 ರಂದು ನಾಮಿನೇಷನ್ ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಪಕ್ಷವು ಈಗಾಗಲೇ ದಿವಾಳಿಯಾಗಿದೆ ಬಿಜೆಪಿ ಪಕ್ಷವು ವೀರಶೈವ ಲಿಂಗಾಯತರನ್ನು ಕಡೆಗಣಿಸುತ್ತಿದೆ ಸತತ 35 ರಿಂದ 40 ವರ್ಷಗಳ ಕಾಲ ಪಕ್ಷಕ್ಕೆ ದುಡಿದವರನ್ನು ಕಿಮ್ಮತ್ತು ಕೊಡದೆ ಕಡೆಗಣಿಸುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 130 ರಿಂದ 140 ಸ್ಥಾನಗಳನ್ನು ಗೆಲುವು ಸಾಧಿಸಿದ ಮೂಲಕ ಅಧಿಕಾರಕ್ಕೆ ಬರುವುದು ಖಚಿತ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸುವುದು ಖಂಡಿತ, ಮೇ 13 ರಂದು ಬೆಳಕಿನ ಹಬ್ಬವನ್ನು ಕೊಟ್ಟೂರಿನ ಆಚರಣೆ ಮಾಡುವುದು ಖಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾರುಕೀಶ, ಅಡಿಕೆ ಮಂಜುನಾಥ್, ಕುಮಾರಸ್ವಾಮಿ, ಶಿವಕುಮಾರ್ ಗೌಡ, ಅಚ್ಚೆ ಮನೆ ಮಲ್ಲಿಕಾರ್ಜುನ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.