
ಬೆಂಗಳೂರು, ಆ.4- ಬಿಬಿಎಂಪಿಯ ಮಹದೇವಪುರ ವಲಯದ ಕಂದಾಯ ಅಧಿಕಾರಿ ನಟರಾಜ್ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದಾಗ ಕೋಟ್ಯಾಂತರ ರೂಪಾಯಿ ಆಸ್ತಿಯ ದಾಖಲೆಗಳು, ಚಿನ್ನಾಭರಣ ಪತ್ತೆಯಾಗಿದೆ.

900 ಗ್ರಾಂ ಚಿನ್ನಾಭರಣ, 7 ಕೆಜಿ ಬೆಳ್ಳಿ ವಸ್ತುಗಳು, 4 ಕಾರುಗಳು, 80 ಸಾವಿರ ನಗದು, ಆವಲಹಳ್ಳಿಯಲ್ಲಿ ನಿವೇಶನ, ಕೊಡಿಗೇಹಳ್ಳಿಯಲ್ಲಿ ಪತ್ನಿಯ ಹೆಸರಿನಲ್ಲಿ ನಿವೇಶನದ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕೃತ ಮೂಲಗಳು ತಿಳಿಸಿವೆ.

ಅಪಾರ್ಟ್ಮೆಂಟ್ ಗಳ ಬರೋಬ್ಬರಿ 79 ಫ್ಲಾಟ್ಗಳಿಗೆ ಖಾತಾ ನೀಡಲು ತಲಾ 10 ಸಾವಿರ ಲಂಚ ಫಿಕ್ಸ್ ಮಾಡಿದ್ದ ಆರೋಪದಡಿ ಬಿಬಿಎಂಪಿಯ ಮಹದೇವಪುರ ವಲಯದ ಕಂದಾಯ ಅಧಿಕಾರಿ ನಟರಾಜ್ ಹಾಗೂ ಖಾಸಗಿ ವ್ಯಕ್ತಿ ಪವನ್ ಎಂಬುವರನ್ನು ಲಂಚ ಸ್ವೀಕರ ಆರೋಪದಡಿ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆದಿದ್ದರು.
ಕೊಡಿಗೇಹಳ್ಳಿ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್ ಗಳಲ್ಲಿ 79 ಫ್ಲಾಟ್ಗಳಿಗೆ ಖಾತಾ ನೀಡಲು ತಲಾ 10 ಸಾವಿರ ಲಂಚ ನೀಡುವಂತೆ ಆರೋಪಿ ಕಂದಾಯ ಅಧಿಕಾರಿ ಸೇರಿ ಇಬ್ಬರು ಬೇಡಿಕೆಯಿಟ್ಟಿದ್ದರು.
ಈ ಸಂಬಂಧ ದಾಖಲಾದ ದೂರಿನ್ವಯ ಶುಕ್ರವಾರ ಲೋಕಾಯುಕ್ತ ಡಿಎಸ್ಪಿ ಬಸವರಾಜ ಮಗದುಮ್, ಇನ್ಸ್ಪೆಕ್ಟರ್ ಮಂಜುನಾಥ ಹೂಗಾರ ನೇತೃತ್ವದ ತಂಡವೂ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಇನ್ನೂ, ಮಹದೇವಪುರ ಬಿಬಿಎಂಪಿ ಕಚೇರಿಯಲ್ಲಿ ಮುಂಗಡವಾಗಿ ಲಂಚದ ಮೊತ್ತ 5 ಲಕ್ಷ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ವಿಚಾರಣೆಯಲ್ಲಿ
ಪ್ರತಿ ಖಾತೆಗೆ 10 ಸಾವಿರದಂತೆ 7.9ಲಕ್ಷ ರೂ ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.