ದಾವಣಗೆರೆ.ಜೂ.೨೪: ಮೇ ಕೊನೆ ವಾರದಲ್ಲಿ ಮುಂಗಾರು ಆರಂಭವಾಗಬೇಕಿದ್ದರೂ ಸಹ ಪ್ರಕೃತಿಯ ವೈಫರೀತ್ಯದಿಂದಾಗಿ ಮುಂಗಾರು ಜೂನ್ ಕೊನೆಯ ವಾರದಲ್ಲಿ ಆರಂಭವಾಗಿದ್ದು, ಉತ್ತಮ ಮಳೆ ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ರೈತರು ಬಿತ್ತನೆ ಕರ್ಯವನ್ನು ಮುಂಬರುವ ದಿನಗಳಲ್ಲಿ ಚುರುಕುಗೊಳಿಸಬಹುದು ಎಂದು ತೋಟಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.ಕೃಷಿ ಇಲಾಖೆ ಅಭಿಪ್ರಾಯದಂತೆ ಜುಲೈವರೆಗೂ ಬಿತ್ತನೆ ಕಾರ್ಯ ಆರಂಭಿಸಬಹುದಾಗಿದ್ದು, ರೈತರಿಗೆ ತೊಂದರೆ ಆಗದಂತೆ ಅಗತ್ಯ ಇರುವಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದ್ದು, ರೈತರ ಬೇಡಿಕೆಗೆ ಅನುಗುಣವಾಗಿ ವಿತರಣೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಈಗಾಗಲೇ ಕೆಲವು ಭಾಗಗಳಲ್ಲಿ ಕೆಲವು ರೈತರು ಬಿತ್ತನೆ ಮಾಡಿದ್ದು, ಇನ್ನು ಬಿತ್ತನೆ ಕರ್ಯ ನಡೆಯಬೇಕಿದ್ದು , ಬಿತ್ತನೆಬೀಜ, ರಸಗೊಬ್ಬರಗಳ ದಾಸ್ತಾನು ಇರುವುದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು. ಪ್ರಸಕ್ತ ವರ್ಷದಲ್ಲಿ ಎರಡೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಕೃಷಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರಗೆ ಕೇವಲ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. 47,772 ಕ್ವಿಂಟಾಲ್ ಬಿತ್ತನೆ ಬೀಜ ಇದ್ದು, ಈಗಾಗಲೇ 5,748 ವಿತರಣೆ ಮಾಡಲಾಗಿದೆ. ಇನ್ನು 37,024 ಟನ್ ಬಿತ್ತನೆ ಬೀಜ ಇದೆ. ಅದೇ ರೀತಿ 1,54,962 ಟನ್ ರಸಗೊಬ್ಬರದ ಅವಶ್ಯಕತೆ ಇದ್ದು, ಜೂನ್ ಮಾಹೆಗೆ 29480 ಟನ್ ಬೇಕಾಗಿದೆ. ಜಿಲ್ಲೆಯಲ್ಲಿ 42089 ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ತಿಳಿಸಿದ್ದಾರೆ.