ಮೈಸೂರು: ಮೇ.31:- ಚುನಾವಣಾ ವರ್ಷದಲ್ಲಿ ಮಂಡಿಸಿದ ಬಜೆಟ್ ಅವಧಿ 3 ತಿಂಗಳು ಮಾತ್ರ. ಬಜೆಟ್ ಮಂಡಿಸಿದೇ ಕಾರ್ಯಕ್ರಮಗಳಿಗೆ ಹಣ ಕೊಡಲು ಸಾಧ್ಯವಿಲ್ಲ. ಸರ್ಕಾರ ಹಣ ಕೊಡಲು ಏನು ಮಾಡಬೇಕೆಂದು ತಿಳಿಯದೇ ಪೆದ್ದರಂತೆ ಬಿಜೆಪಿ ಮಾತಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಲೇವಡಿ ಮಾಡಿದರು.
ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಂದ ಸಾಂಪ್ರದಾಯಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆ ಭರವಸೆಗಳನ್ನು ಈಗಲೇ ಈಡೇರಿಸಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿ ನಾಯಕರಿಗೆ ರಾಜಕೀಯ ಪ್ರಜ್ಞೆ ಇಲ್ಲವೇ. 2014ರಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ರೈತರ ಆದಾಯ ದ್ವಿಗುಣ ಮಾಡಿದರೆ? ಅವರು ನೀಡಿದ ಭರವಸೆಗಳನ್ನು ಈಡೇರಿಸದೇ ತಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟಲು ಹಸಿಸುಳ್ಳು ಹೇಳುತ್ತಿದ್ದಾರೆ ಎಂದು ನುಡಿದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಚಿಂತಿತರಾಗಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ನಿದ್ರೆ ಬರುತ್ತಿಲ್ಲ. ದುರಾಡಳಿತ, ಆಡಳಿತ ವಿರೋಧಿ ಧೋರಣೆಯಿಂದ ಜನರು ಮುಖಕ್ಕೆ ಮಸಿ ಬಳಿದಿದ್ದರೆ. ಆದರೆ, ನಮ ಘೋಷಣೆ ಯಾವಾಗ ಜಾರಿ ಮಾಡುತ್ತೀರಿ ಎಂದು ಆಗ್ರಹಿಸುತ್ತಿದ್ದಾರೆ. ಭರವಸೆಯನ್ನು ಅನುಷ್ಠಾನಕ್ಕೆ ತರದವರಿಂದ ಹೇಳಿಕೊಳ್ಳುವ ಅಗತ್ಯವಿಲ್ಲ. ಸೋತು ಸುಣ್ಣವಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
5 ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನದ ಸಂಬಂಧಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಔಪಚಾರಿಕ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಗುರುವಾರ ಅಜೆಂಡಾದ ಮೇಲೆ ಸಂಪುಟ ಸಭೆ ಕರೆದಿದ್ದಾರೆ. ಸಭೆಯ ಬಳಿಕ ಎಲ್ಲ ತೀರ್ಮಾನವಾಗಲಿದೆ ಎಂದರು.
ಮೈಸೂರು ಜಿಲ್ಲೆ ಪ್ರಪಂಚದಲ್ಲಿಯೇ ದೊಡ್ಡ ಇತಿಹಾಸವನ್ನು ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ಇಲ್ಲದಿದ್ದಾಗ ಎಲ್ಲರಿಗೂ ಸಮಾನ ಅವಕಾಶ ನೀಡಿದರು. ಮೀಸಲಾತಿ ಜಾರಿಗೆ ತಂದರು. ಭಾರತದ ಪ್ರಜಾಪ್ರಭುತ್ವದ ಆಡಳಿತಕ್ಕೆ ಮುನ್ನಡಿ ಬರೆದರು. ಬಸವಣ್ಣ ಪ್ರಜಾಪ್ರಭುತ್ವದ ವ್ಯವಸ್ಥೆ ರೂಪಿಸಿದರು. ಅಪ್ಪಟ ದೇಶಪ್ರೇಮಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ. ತದನಂತರ ಸ್ವತಂತ್ರ ಭಾರತದಲ್ಲಿ ದೇವರಾಜ ಅರಸು, ತುಳಸಿದಾಪ್ಪ, ಬಿ.ರಾಚಯ್ಯ, ಸಾಹುಕಾರ್ ಚೆನ್ನಯ್ಯ ಉತ್ತಮ ಮಾರ್ಗ ತೋರಿದರು. ಈಗ ಸಿದ್ದರಾಮಯ್ಯ ಅವರ ಹಿಂದೆ ನಾವೆಲ್ಲ ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಯಾರೋ ಒಬ್ಬರ ಆಸ್ತಿಯಲ್ಲ. ಕಾಂಗ್ರೆಸ್ ಅಂದರೆ ಚಳವಳಿ. ಕಾಂಗ್ರೆಸ್ ಜನರೇ ಆಸಿ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೂಲ ಮತಗಳು ಕ್ರೂಢೀಕರಣಗೊಂಡಿದ್ದು ದೊಡ್ಡ ಸಾಧನೆ. ಲಕ್ಷಾಂತರ ಕಾರ್ಯಕರ್ತರ ಪರಿಶ್ರಮ ಮತ್ತು ಹೋರಾಟದಿಂದ ಕಾಂಗ್ರೆಸ್ ಅಭೂತಪೂರ್ವ ಜಯ ದೊರೆಯಿತು. ಅವರರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಿಎಎ ವಿರುದ್ಧ ರಾಷ್ಟ್ರ ಮಟ್ಟದ ಸೆಮಿನಾರ್ ಏರ್ಪಡಿಸಿತ್ತು. ಕೋವಿಡ್ ಸಂದರ್ಭದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ನಾಯಕರು ದುಡ್ಡು ಮಾಡುವುದರಲ್ಲಿ ನಿರತರಾಗಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾವಾರು ಪ್ರತಿಭಟನೆ ನಡೆಸಿ ಸರ್ಕಾರ ಎಚ್ಚರಿಸಿದರು. ಮೇಕೆದಾಟು ಹೋರಾಟ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ದೇಶವನ್ನು ಒಗ್ಗೂಡಿಸುವ ಭಾರತ್ ಜೋಡೋ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಎಂದು ಹೇಳಿದರು.
ಕಾಂಗ್ರೆಸ್ ಯಾವತ್ತೂ ನುಡಿದಂತೆ ನಡೆದ ಪಕ್ಷವಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. 2023ರ ಚುನಾವಣೆಯಲ್ಲಿ ದಲಿತ ಸಂಘಟನೆಗಳು, ಮಹಿಳೆಯರು, ಅಲ್ಪಸಂಖ್ಯಾತರು, ಪ್ರಗತಿಪರರು, ಚಿಂತಕರು, ಸಾಹಿತಿಗಳು ಸಂವಿಧಾನ ಬಲಪಡಿಸುವಂತೆ ಅಧಿಕಾರ ಕೊಟ್ಟರು. ಒಕ್ಕಲಿಗ, ಲಿಂಗಾಯತ ಬೆಂಬಲದಿಂದ ಕಾಂಗ್ರೆಸ್ಗೆ 135 ಸ್ಥಾನಗಳು ದೊರೆತವು ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅರುಣ್ಸಿಂಗ್ ಸುರ್ಜೇವಾಲಾ ಅವರು ಮೈಸೂರು ನಗರದಲ್ಲಿ ಮುಂದಿನ 2 ವರ್ಷಗಳಲ್ಲಿ ಸುಸಜ್ಜಿತ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಬೇಕೆಂದು ಗುರಿ ಕೊಟ್ಟಿದ್ದಾರೆ. ಇದನ್ನು ಈಡೇರಿಸಲು ಜಿಲ್ಲಾ ಮಂತ್ರಿಗಳಾದ ಡಾ.ಎಚ್.ಸಿ.ಮಹದೇವಪ್ಪ ಮತ್ತು ಕೆ.ವೆಂಕಟೇಶ್ ಸಹಕಾರ ನೀಡಬೇಕು ಎಂದು ಕೋರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಶಾಸಕ ಕೆ.ಹರೀಶ್ ಗೌಡ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಮುಡಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ನರೇಂದ್ರ, ಎಂ.ಶಿವಣ್ಣ, ಮಂಜುನಾಥ್, ಶಿವಮಲ್ಲು, ಎಚ್.ಎ.ವೆಂಕಟೇಶ್, ಪುಷ್ಪಲತಾ ಚಿಕ್ಕಣ್ಣ, ಈಶ್ವರ್ ಚಕ್ಕಡಿ ಮುಂತಾದವರಿದ್ದರು.