
ಚಿಕ್ಕಬಳ್ಳಾಪುರ,ಮೇ.೮-ಬಿಜೆಪಿಯವರು ಅಕ್ರಮವಾಗಿ ಸಂಪಾದನೆ ಮಾಡಿರುವ ಪಾಪದ ಹಣದಿಂದ ಚುನಾವಣೆಯನ್ನು ನಡೆಸಲು ಹೊರಟ್ಟಿದ್ದಾರೆ. ಬಿಜೆಪಿಯ ನೋಟು ತೆಗೆದುಕೊಂಡು, ಜೆಡಿಎಸ್ಗೆ ಓಟು ನೀಡಬೇಕು, ಶ್ರಮಜೀವಿಗಳ ಸ್ವಾಭಿಮಾನಕ್ಕೆ ಧಕ್ಕೆವುಂಟು ಮಾಡುವ ವ್ಯಕ್ತಿಗಳನ್ನು ತಿರಸ್ಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ನಗರದಲ್ಲಿ ನಡೆದ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರ ಪರ ಪ್ರಚಾರ ಹಾಗೂ ರೋಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಷ್ಠಾವಂತ ಕಾರ್ಯಕರ್ತರು ಯಾವುದೇ ರೀತಿ ಅಮಿಷಗಳಿಗೆ ಮಾರು ಹೋಗದೆ ಜೆಡಿಎಸ್ಗೆ ಬೆಂಬಲ ನೀಡಬೇಕು. ಸರಕಾರ ರಚನೆಯಾದ ಕೂಡಲೇ ಮತದಾರರ ಋಣವನ್ನು ತೀರಿಸಲಾಗುವುದು. ಚಿಕ್ಕಬಳ್ಳಾಪುರ ನನ್ನ ಜಿಲ್ಲೆ, ಜಿಲ್ಲೆಗೆ ನನ್ನ ಕೊಡುಗೆಯೂ ಇದೆ ಎಂದು ತಿಳಿಸಿದರು.
ಜನರೇ ತೀರ್ಮಾನ ಮಾಡಬೇಕು:
ಬಿಜೆಪಿ ಅಭ್ಯರ್ಥಿಗೆ ಸರಿಸಮಾನಾಗಿ ಹಣ ಖರ್ಚು ಮಾಡಲು ಬಚ್ಚೇಗೌಡರಿಂದ ಸಾಧ್ಯವಿಲ್ಲ, ಇದರಿಂದಾಗಿ ಬಿಜೆಪಿಗೆಯ ನೋಟಿಗೆ ಜನತಾ ದಳಕ್ಕೆ ಓಟು ನೀಡಬೇಕು. ವಿಧಾನಸಭಾ ಚುನಾವಣೆ ಹಣ, ತೋಳ್ಬದ ನಡುವೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಶ್ರಮ ಜೀವಿಗಳು ಇದ್ದು ಸ್ವಾಭಿಮಾನದ ಬದುಕಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಈ ಚುನಾವಣೆಯಲ್ಲಿ ಪ್ರೀತಿ, ವಿಶ್ವಾಸ ದೊಡ್ಡದೊ ಅಥವಾ ಹಣ, ತೋಳ್ಬಲ ದೊಡ್ಡ ಎಂಬುದನ್ನು ಜನರೇ ತೀರ್ಮಾನ ಮಾಡಬೇಕು ಎಂದು ಎಚ್ಚರಿಸಿದರು.
ಬಚ್ಚೇಗೌಡರು ಪ್ರತಿ ಹಳ್ಳಿಹಳ್ಳಿಗೂ ಭೇಟಿ ನೀಡಿ ತಾಯಂದಿರ ಆಶೀರ್ವಾದ ಪಡೆದಿದ್ದಾರೆ. ಅವರ ಕುಟುಂಬ ಅತ್ಯಂತ ಪ್ರಾಮಾಣಿಕವಾದ ಕುಟುಂಬ. ಶಾಸಕರಾಗಿದ್ದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ನಿಷ್ಠವಂತ ವ್ಯಕ್ತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಶಾಶ್ವತ ಸ್ವಾಭಿಮಾನದ ಬದುಕಿಗೆ ಪಂಚ ರತ್ನ ಯೋಜನೆಗಳನ್ನು ಜಾರಿಗೆ ತರಲಾಗುವುದು. ಸಮಾನತೆಯ ಬದುಕು ರೂಪಿಸಿಕೊಳ್ಳಲು ಕ್ರಮಕೈಗೊಂಡಿದ್ದು ಪ್ರತಿಯೊಬ್ಬರಿಗೂ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಚುನಾವಣೆಯ ಸಂದರ್ಭದಲ್ಲಿ ನಿವೇಶನ, ಚಿನ್ನ-ಬೆಳ್ಳಿ, ಸ್ಟೌವ್, ಕುಕ್ಕರ್, ಪಂಚೆ-ಸೀರೆ ಹಂಚಿಕೆ ಮಾಡುತ್ತಿರುವುದು ಕಷ್ಟದಿಂದ ಸಂಪಾದನೆ ಮಾಡಿರುವ ಹಣದಿಂದಲ್ಲ. ಹೈನುಗಾರಿಕೆಯಿಂದ ಮಹಿಳೆಯರು ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಜನತಾ ದಳವನ್ನು ಅಧಿಕಾರಕ್ಕೆ ಜನ ಸ್ಪಷ್ಟ ಬಹುಮತದೊಂದಿಗೆ ತರಬೇಕು. ಆ ನಿಟ್ಟಿನಲ್ಲಿ ಆಶೀರ್ವಾದ ಮಾಡಬೇಕು ಎಂದು ಕೋರಿದರು.
ಚಿಕ್ಕಬಳ್ಳಾಪುರ ಜಿಲ್ಲೆ, ತಾಲೂಕು ಅಭಿವೃದ್ಧಿಗೆ ಸದಾ ಸಿದ್ದನಾಗಿದ್ದೇನೆ, ನನ್ನನ್ನು ಜಿಲ್ಲೆಯ ಜನ ಮನೆ ಮಗನಂತೆ ಕಾಣುತ್ತೀದೀರ. ಬಚ್ಚೇಗೌಡರ ಕ್ರಮ ಸಂಖ್ಯೆ ೩ ತೆನೆಹೊತ್ತ ಮಹಿಳೆ ಗುರುತಿನ ಗುಂಡಿಯನ್ನು ಒತ್ತಿ ಮತ ಚಲಾಯಿಸಬೇಕು. ಮತ ಏಣಿಕೆಯ ದಿನ ಬಚ್ಚೇಗೌಡರು ಗೆದಿದ್ದಾರೆ ಎಂಬ ಸಂದೇಶ ನೀಡಬೇಕು ಎಂದರು.