ಬೆಂಗಳೂರು,ಜೂ.19- ಶಕ್ತಿ ಯೋಜನೆ ಜಾರಿ ಹಿನ್ನಲೆಯಲ್ಲಿ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಪ್ರಯಾಣದ ವೇಳೆ ಏನೆಲ್ಲ ತೊಂದರೆಗಳು ಎದುರಾದಾಗ ಏನು ಮಾಡಬೇಕು ಎಂದು ನಗರ ಪೊಲೀಸರಿಂದ ಮಹಿಳಾ ಪ್ರಯಾಣಿಕರಿಗೆ ಅರಿವು ಕಾರ್ಯಕ್ರಮ ಕೈಗೊಂಡಿದ್ದಾರೆ. ಮಹಿಳಾ ಪ್ರಯಾಣಿಕರಿಗಾಗಿ ನಗರದ ಇನ್ಸ್ ಪೆಕ್ಟರ್ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಂದ ಅರಿವು ಕಾರ್ಯಕ್ರಮ ಮಾಡಲಾಗುತ್ತಿದ್ದು ಖುದ್ದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿ ಅರಿವು ಮೂಡಿಸಿದ್ದಾರೆ.
ನಗರದ ಸೇಫ್ಟಿ ಐ ಲ್ಯಾಂಡ್ಗಳ ಕುರಿತು ಪ್ರಯಾಣಿಕರಲ್ಲಿ ತಿಳಿ ಹೇಳಲಾಯಿತು. ಇನ್ಸ್ ಪೆಕ್ಟರ್ಗಳೊಂದಿಗೆ ಹಿರಿಯ ಅಧಿಕಾರಿಗಳು ಕೂಡ ಬಸ್ ಹತ್ತಿದ್ದು, ಶಿವಾಜಿನಗರದಿಂದ ಕನ್ನಿಂಗ್ ಹ್ಯಾಮ್ ರಸ್ತೆ, ಕಾಕ್ಸ್ ಟೌನ್, ಇಂಡಿಯನ್ ಎಕ್ಸ್ ಪ್ರೆಸ್ ವರೆಗೆ ರೌಂಡ್ಸ್ ಹಾಕಿದ್ದಾರೆ.
ಸುರಕ್ಷತೆಗೆ ಆದ್ಯತೆ:
ಈ ವೇಳೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಮಹಿಳಾ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಹೀಗಾಗಿ ಇಂದು ಇನ್ಸ್ ಪೆಕ್ಟರ್ನಿಂದ ಹಿಡಿದು ಪೊಲೀಸ್ ಆಯುಕ್ತರವರೆಗೂ ಬಸ್ ಹತ್ತಿ ಅರಿವು ಮೂಡಿಸಿದ್ದೇವೆ. ಮಹಿಳೆಯರ ಬಳಿ ಖುದ್ದು ನಾವೇ ಮಾತನಾಡಿ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದರು.
ಮಹಿಳೆಯರಿಗೆ ತೊಂದರೆಯಾದಾಗ ಏನ್ ಮಾಡಬೇಕು. ಸೇಫ್ಟಿ ಐ ಲ್ಯಾಂಡ್ಗಳಲ್ಲಿ ಪ್ಯಾನಿಕ್ ಬಟನ್ ಬಳಸೋದು ಹೇಗೆ? ತೊಂದರೆಯಾದಾಗ 112 ಕರೆ ಮಾಡುವುದು. ಸುರಕ್ಷಾ ಆಪ್ ಬಳಕೆ ಮಾಡುವ ವಿಧಾನ, ಹೀಗೆ ಹಲವು ಮಾಹಿತಿಯನ್ನ ಮಹಿಳೆಯರಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.
ಸಾರ್ವಜನಿಕರು ನಮ್ಮ ಬಳಿ ಬರುವುದಕ್ಕಿಂತ ನಾವೇ ಅವರ ಬಳಿ ಹೋಗುವುದು ಒಳ್ಳೆಯದು. ಹೀಗಾಗಿ ಇಂದು ನಗರದ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಬೆಳೆಸಿ ಅರಿವು ಮೂಡಿಸಿದ್ದೇವೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಾನು ಶಿವಾಜಿ ನಗರದಿಂದ ದೇವನಹಳ್ಳಿಯವರೆಗೂ ಪ್ರಯಾಣ ಮಾಡಿದೆ. ಇದನ್ನ ಹೀಗೆ ಮುಂದುವರೆಸುತ್ತೇವೆ. ಶಕ್ತಿಯೋಜನೆಯಿಂದಾಗಿ ಹಲವು ಕಡೆ ಗಲಾಟೆ ಆಗುತ್ತಿದ್ದು, ಅದನ್ನ ನಮ್ಮ ಸ್ಥಳೀಯ ಪೊಲೀಸರು ಪರಿಶೀಲನೆ ಮಾಡುತ್ತಾರೆ ಎಂದು ತಿಳಿಸಿದರು.