ಬೆಂಗಳೂರು,ಜೂ.೨೪-ದಾಖಲಾತಿ ಕೊರತೆ, ಸೂಕ್ತ ಸಾಕ್ಷಾಧಾರ ಇಲ್ಲದೇ ವಿವಿಧ ಕಾರಣಗಳಿಂದ ಒಂದು ದಶಕದಿಂದ ಬಾಕಿ ಉಳಿದಿರುವ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಲು ಅಪರಾಧ ತನಿಖಾ ವಿಭಾಗ (ಸಿಐಡಿ)ದ ಅಧಿಕಾರಿಗಳು ಮುಂದಾಗಿದ್ದಾರೆ.
ಕಳೆದ ೨೦೦೯ರಿಂದ ೨೦೧೯ರವರೆಗೆ ಸಿಐಡಿಗೆ ಶಿಫಾರಸು ಆಗಿ ಹಾಗೂ ವಿವಿಧ ಕಾರಣಗಳಿಂದ ತನಿಖೆಗೆ ಗ್ರಹಣ ಹಿಡಿದಿದ್ದ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಸಿಐಡಿಯ ಡಿಜಿಪಿ ಡಾ.ಎಂ.ಎಂ.ಸಲೀಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಪ್ರಗತಿ ಹಂತದಲ್ಲಿರುವ ಪ್ರಕರಣಗಳ ಬಗ್ಗೆ ವಾರಕ್ಕೊಮ್ಮೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲಿಸಲು ಸಲೀಂ ಮುಂದಾಗಿದ್ದಾರೆ.
ಹಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಪ್ರಕರಣಗಳ ತೆರವು ಬಗ್ಗೆ ನಿರಂತರವಾಗಿ ಫಾಲೋಅಪ್ ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಬಾಕಿಯಿರುವ ೮೪೫ ಕೇಸ್?ಗಳಿಗೆ ತಾರ್ಕಿಕ್ಯ ಅಂತ್ಯ ನೀಡಲು ಒಂದೆರಡು ತಿಂಗಳ ಗಡುವು ವಿಧಿಸಿದ್ದಾರೆ.
ವಿಚಾರಣೆಯಲ್ಲಿ ೯೭೩ ಕೇಸ್ :
ಆರ್ಥಿಕ ಅಪರಾಧಗಳು, ಪೊಲೀಸ್ ಕಸ್ಟೋಡಿಯಲ್ ಡೆತ್, ಕಾನ್ಸ್ಟೇಬಲ್ ಪರೀಕ್ಷಾ ಅಕ್ರಮ, ಶಿಕ್ಷಕರ ನೇಮಕಾತಿ, ಕೆಪಿಎಸ್ಸಿ ಅಭ್ಯರ್ಥಿಗಳ ನೇಮಕಾತಿಯಲ್ಲಿ ನಡೆದ ಹಗರಣಗಳು ಸೇರಿದಂತೆ ಸಾವಿರಾರು ಪ್ರಕರಣಗಳನ್ನ ಸಿಐಡಿ ತನಿಖೆ ನಡೆಸುತ್ತಿದೆ. ಈ ಪೈಕಿ ವಿವಿಧ ಕಾರಣಗಳಿಂದಾಗಿ ೮೪೫ ಪ್ರಕರಣಗಳ ತನಿಖೆ ಮಂದಗತಿಯಲ್ಲಿದೆ. ಇನ್ನೂ ೯೭೩ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.ವಂಚನೆ ಪ್ರಮಾಣ ಅಳೆಯಲು ಆಡಿಟ್ ವರದಿ ಬರಲು ತಡವಾಗುತ್ತಿರುವುದು, ಸಮಗ್ರ ಸಾಕ್ಷ್ಯಾಧಾರ ಕೊರತೆಯಿಂದ ಹಿನ್ನೆಡೆಯಾಗಿತ್ತು. ಮತ್ತು ಕೆಲವು ಪ್ರಕರಣಗಳಲ್ಲಿ ಕೋರ್ಟ್ನಿಂದ ತಡೆಯಾಜ್ಞೆ ಆಗಿದೆ.ಪೊಲೀಸರ ಮೇಲೆ ನಂಬಿಕೆ ಬಲಗೊಳಿಸಲು ಹಾಗೂ ಅನ್ಯಾಯಕ್ಕೊಳಗಾದವವರಿಗೆ ತ್ವರಿತಗತಿ ನ್ಯಾಯ ಕೊಡಿಸಲು ಪೂರ್ಣಗೊಳ್ಳದೇ ಬಾಕಿಯಿರುವ ಪ್ರಕರಣಗಳ ತನಿಖೆ ಮುಕ್ತಾಯಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ಬಾಕಿ ಇರುವ ಪ್ರಕರಣಗಳು:
ಸಿಐಡಿಯಲ್ಲಿ ಹಣಕಾಸು, ಆರ್ಥಿಕ ಅಪರಾಧ, ಸೈಬರ್ ಅಪರಾಧ, ಖೋಟಾನೋಟು, ಮಾದಕವಸ್ತು ತಡೆ ವಿಭಾಗ ಹಾಗೂ ಅರಣ್ಯ ಘಟಕಗಳ ವಿಭಾಗಗಳಿವೆ. ವಂಚನೆ ಮತ್ತು ಹಣ ದುರ್ಬಳಕೆ, ಸಹಕಾರಿ ಸಂಘ ಸಂಸ್ಥೆಗಳನ್ನು ಒಳಗೊಂಡಂತಹ ವಂಚನೆಗಳು, ಮೋಸ ಮತ್ತು ನಕಲಿ ದಾಖಲೆ ಹಾಗೂ ನಂಬಿಕೆ ದ್ರೋಹದ ಪ್ರಕರಣಗಳೇ ಹೆಚ್ಚು ಶಿಫಾರಸು ಆಗುತ್ತದೆ. ಆಂಬಿಡೆಂಟ್, ಕಣ್ವ, ಅಗ್ರಿಗೋಲ್ಡ್, ಗುರುರಾಘವೇಂದ್ರ ಹಾಗೂ ವಸಿಷ್ಠ ಕೋ-ಆಪರೇಟಿವ್ ವಂಚನೆ ಸೇರಿ ಸುಮಾರು ೮೦ ಕಂಪನಿಗಳಿಂದ ಸಾವಿರಾರು ಕೋಟಿ ವಂಚನೆ ಆರೋಪ ಪ್ರಕರಣಗಳ ಪೈಕಿ ಶೇ.೮೦ರಷ್ಟು ಕೇಸ್ಗಳು ತನಿಖಾ ಹಂತದಲ್ಲಿವೆ. ಜೊತೆಗೆ ೮೪ ಕಸ್ಟೋಡಿಯನ್ ಡೆತ್ ಪ್ರಕರಣಗಳು, ಪೊಲೀಸ್, ಶಿಕ್ಷಕರು ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳ ಪರೀಕ್ಷೆಗಳಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣಗಳ ತನಿಖೆಗೆ ವೇಗ ನೀಡಬೇಕಿದೆ.
ಆರ್ಥಿಕ ಪ್ರಕರಣಗಳೇ ಹೆಚ್ಚು:
ಸಿಐಡಿಯಲ್ಲಿ ಇದುವರೆಗೂ ದಾಖಲಾಗಿರುವ ಸಾವಿರಾರು ಪ್ರಕರಣಗಳ ಪೈಕಿ ಆರ್ಥಿಕ ಅಪರಾಧ ಪ್ರಕರಣಗಳೇ ಸಿಂಹಪಾಲು ಪಡೆದುಕೊಂಡಿವೆ. ಹೆಚ್ಚು ಲಾಭಾಂಶ ತೋರಿಸಿ/ ಬಡ್ಡಿ ಆಸೆ ತೋರಿಸಿ ವಂಚನೆ, ಸಹಕಾರ ಬ್ಯಾಂಕ್?ಗಳಿಂದ ಬಹುಕೋಟಿ ಹಗರಣ, ಮುಗ್ದ ಜನರನ್ನು ನಂಬಿಸಿ ಮೋಸ ಮಾಡುವ ವಂಚನೆ ಪ್ರಕರಣಗಳೇ ಅಧಿಕ ದಾಖಲಾಗಿವೆ.ಬಹುತೇಕ ಪ್ರಕರಣಗಳಲ್ಲಿ ಕಂಪನಿಗಳು ಎಷ್ಟು ಹಣ ವಂಚಿಸಿವೆ ಎಂಬುದಕ್ಕೆ ಅರಿಯಲು ಆಡಿಟ್ ವರದಿ ಅಗತ್ಯವಾಗಿದೆ. ಆದರೆ, ಕೆಲ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕ ಪ್ರಕರಣಗಳಲ್ಲಿ ಆಡಿಟ್ ವರದಿ ತನಿಖಾಧಿಕಾರಿಗಳ ಕೈ ಸೇರದ ಪರಿಣಾಮ ತನಿಖೆಗೆ ಹಿನ್ನೆಡೆಯಾಗಿದೆ.
ಪ್ರತ್ಯೇಕವಾಗಿ ಆಡಿಟ್:
ಸಿಐಡಿಯಲ್ಲಿ ಪ್ರತ್ಯೇಕವಾಗಿ ಆಡಿಟ್ ಮಾಡಲು ತಜ್ಞ ಅಧಿಕಾರಿಗಳಿಲ್ಲ. ಸಾವಿರಾರು ಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುವ ತನಿಖಾಧಿಕಾರಿಗೆ ಎಷ್ಟು ಪ್ರಮಾಣದಲ್ಲಿ ಹಣ ವಂಚನೆಯಾಗಿದೆ, ಹಣ ಎಷ್ಟು ದುರ್ಬಳಕೆಯಾದೆ ಎಂಬುದನ್ನು ಅರಿಯಲು ವಂಚನೆ ಕಂಪನಿಗಳ ಆಡಿಟ್ ವರದಿ ಪಡೆಯಲು ಸಿಐಡಿ ಹೊರಗುತ್ತಿಗೆ ನೀಡುತ್ತಿದೆ. ಈ ವರದಿ ಪಡೆಯಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಿದೆ. ನೂರಾರು ಕೋಟಿ ವಂಚನೆಯಿದ್ದರೆ ಶುಲ್ಕವೇ ಕೋಟಿಗಿಂತ ಹೆಚ್ಚಾಗಲಿದೆ. ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ-೨೦೦೪ (ಕೆಪಿಐಡಿ) ಕಂದಾಯ ಇಲಾಖೆಯ ಅಧೀನದ ಸಕ್ಷಮ ಪ್ರಾಧಿಕಾರ ಅಥವಾ ಪೊಲೀಸ್ ಇಲಾಖೆಯಿಂದ ಹಣ ಪಾವತಿಸಬೇಕಿದೆ. ಸಮನ್ವಯ ಕೊರತೆ ಹಿನ್ನೆಲೆಯಲ್ಲಿ ಸಕಾಲಕ್ಕೆ ವರದಿ ಕೈ ಸೇರದಿರುವುದು ತನಿಖೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಇದುವರೆಗೂ ೮೪೫ ವಿವಿಧ ಅಪರಾಧ ಪ್ರಕರಣಗಳ ತನಿಖೆ ಮಂದಗತಿಯಲ್ಲಿ ಸಾಗಿದ್ದು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕಾಲಮಿತಿಯಲ್ಲಿ ತನಿಖೆ ನಡೆಸಿ ಅವುಗಳಿಗೆ ತಾರ್ಕಿಕ ಅಂತ್ಯಗೊಳಿಸಲು ಸೂಚಿಸಿದ್ದೇನೆ ಎಂದಿದ್ದಾರೆ.