
ಕಲಬುರಗಿ:ಮೇ.19: ಗಿರೀಶ್ ಕಾರ್ನಾಡ ಅವರು ನಾಟಕಕಾರ, ರಂಗಕರ್ಮಿ, ಲೇಖಕ, ಸಿನಿಮಾ ನಟ, ನಿರ್ದೇಶಕ, ಚಿಂತಕ, ಹೋರಾಟಗಾರ, ವಿಮರ್ಶಕರಾಗಿ ಹೀಗೆ ವಿವಿಧ ಮುಖಗಳುಳ್ಳ ಬಹುಮುಖ ವ್ಯಕ್ತಿತ್ವದ ಮಹಾನ ಸಾಧಕ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಅವರ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ,ಲೇಖಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ, ಶಿವಾ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಡಾ.ಗಿರೀಶ್ ಕಾರ್ನಾಡ್ರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಮಾತನಾಡಿ, ‘ಯಯಾತಿ’, ‘ತಲೆದಂಡ’, ‘ಹಯವದನ’, ‘ಅಂಜುಮಲ್ಲಿಗೆ’, ‘ನಾಗಮಂಡಲ’ ಸೇರಿದಂತೆ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ರಾಜ್ಯೋತ್ಸವ, ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗುವ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪ್ರತಿಭಾವಂತ, ಪ್ರಗತಿಪರ ಲೇಖಕರಾಗಿ ನಾಡಿಗೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಸಿಬ್ಬಂದಿ ಸುನೀತಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಆದಿತ್ಯ, ಅದಿತಿ ಸೇರಿದಂತೆ ಇನ್ನಿತರರಿದ್ದರು.