
ಬೆಂಗಳೂರು,ಡಿ.26- ಚಿಕ್ಕಮಗಳೂರು ಜಿಲ್ಲೆ ಕಡೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳಾ ಕಾನ್ಸ್ಟೇಬಲ್ ಪೋನ್ ನಂಬರ್ ಬರೆದು ಅದರ ಮುಂದೆ ಲೈಂಗಿಕ ಕಾರ್ಯಕರ್ತೆ ಎಂದು ಬರೆದಿದ್ದ ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಕಡೂರು ತಾಲ್ಲೂಕಿನ ಚಿಕ್ಕಂಗಳದ ಸಿ.ಎಂ. ಸತೀಶ್ ಬಂಧಿತ ಆರೋಪಿ.ಬಂಧಿತನು ಸಹಪಾಠಿಗಳಿರುವ ವಾಟ್ಸಾಪ್ ಗ್ರೂಪಿಗೆ ಯಲಹಂಕದ ಉಪನಗರ ಪೊಲೀಸ್ ಠಾಣೆಯ ಎಸಿಪಿ ಸಹಾಯಕ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಕಾನ್ಸ್ಟೇಬಲ್ ನಂಬರ್ ಅನ್ನು ಸೇರಿಸಿದ್ದಾನೆ. ನಂತರ ಅದರಲ್ಲಿ ಆಕೆಯನ್ನು ಉದ್ದೇಶಿಸಿ ಅನಗತ್ಯ ಸಂದೇಶಗಳನ್ನು ಹಾಕುತ್ತಿದ್ದ. ಜೊತೆಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ ಅಲ್ಲದೆ ಇತರರಿಗೂ ನಂಬರ್ ನೀಡಿ ತೊಂದರೆಯುಂಟು ಮಾಡಿದ್ದಾನೆ ಎನ್ನಲಾಗಿದೆ.
ಇದೇ ವಿಚಾರವಾಗಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಸತೀಶ್ ಮಹಿಳಾ ಕಾನ್ಸ್ಟೇಬಲ್ ಪೋನ್ ನಂಬರ್ ಅನ್ನು ಕಡೂರು ಸಾರಿಗೆ ಬಸ್ ನಿಲ್ದಾಣದ ಶೌಚ ಗೃಹದಲ್ಲಿ ಬರೆದು ವಿಕೃತಿ ಮೆರೆದಿದ್ದಾನೆ.
ದಿನೇ ದಿನೇ ಸಾಕಷ್ಟು ಅನಾಮಧೇಯ ಪೋನ್ ಕೆರೆಗಳು ಮಹಿಳಾ ಕಾನ್ಸ್ಟೇಬಲ್ಗೆ ಬರಲು ಆರಂಭವಾದಾಗ ಆತಂಕಗೊಂಡ ಮಹಿಳಾ ಕಾನ್ಸ್ಟೇಬಲ್ ತನ್ನ ಪತಿಯೊಡನೆ ಚರ್ಚಿಸಿ ಯಲಹಂಕ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ಕೈಗೊಂಡು ಕೃತ್ಯವೆಸಗಿದ ಆರೋಪಿಯನ್ನು ಶಿವಮೊಗ್ಗದಲ್ಲಿ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.