
ಬೀದರ್:ನ.5: ರಾಷ್ಟ್ರೀಯ ಬಸವ ದಳದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ರಾಜೇಂದ್ರಕುಮಾರ ಗಂದಗೆ ಅವರನ್ನು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ನಗರದ ಕುಂಬಾರವಾಡ ರಸ್ತೆಯಲ್ಲಿ ಇರುವ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ಸತ್ಕರಿಸಲಾಯಿತು.
ಸಂಘದ ಪದಾಧಿಕಾರಿಗಳು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಗಂದಗೆ ಅವರು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರೀಯರಾಗಿದ್ದಾರೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ನುಡಿದರು.
ಸರಳತೆ, ಸಜ್ಜನಿಕೆಗೆ ಹೆಸರಾಗಿದ್ದಾರೆ. ಎಲ್ಲರನ್ನು ಜತೆಗೆ ತೆಗೆದುಕೊಂಡು ಹೋಗುವ ಗುಣ ಹೊಂದಿದ್ದಾರೆ. ಹೀಗಾಗಿ ಅವರಿಗೆ ಹುದ್ದೆಗಳು ಹುಡುಕಿಕೊಂಡು ಬರುತ್ತಿವೆ. ಇದೀಗ ಅವರನ್ನು ಬಸವ ದಳದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರವಿಕುಮಾರ ಕುಮನೋರ, ಸಹ ಕಾರ್ಯದರ್ಶಿ ಬಳವಂತರಾವ್ ರಾಠೋಡ್, ಸಂಘಟನಾ ಕಾರ್ಯದರ್ಶಿ ವೈಜಿನಾಥ ಸಾಳೆ, ಖಜಾಂಚಿ ಸಂಜೀವಕುಮಾರ ಸ್ವಾಮಿ, ಪ್ರಮುಖರಾದ ವೀರಭದ್ರಪ್ಪ ಚಟ್ನಾಳೆ, ಲಕ್ಷ್ಮಣ ಪೂಜಾರಿ, ಅಬ್ದುಲ್ ಆಲಸ್, ಸಂಜು ಕನೇರಿ, ಬಳಿರಾಮ ಕುರನಾಳೆ, ಅನಿಲ್, ಶೇರಿಕಾರ್, ಮಹಮ್ಮದ್ ಶಹಾಬುದ್ದಿನ್, ವಿಜಯಕುಮಾರ ದೇವಾ, ವಿಜಯಕುಮಾರ ಸೋನಿ, ಎಂ.ಡಿ. ತನ್ವೀರ್ ಅಹಮ್ಮದ್, ನಟರಾಜ ಅಂಗಡಿ ಮೊದಲಾದವರು ಇದ್ದರು.