(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ. 19: ವಿದ್ಯುತ್ ಶುಲ್ಕ ಹೆಚ್ಚಳ ವಿರೋಧಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕರೆ ನೀಡಿರುವ ಜೂನ್ 22ರ ಗುರುವಾರದ `ಕರ್ನಾಟಕ ಬಂದ್’ ಯಶಸ್ವಿಗೊಳಿಸಲು ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆ ನಿರ್ಧರಿಸಿದೆ.
ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್, ಗೌರವ ಕಾರ್ಯದರ್ಶಿ ಯಶವಂತ್ರಾಜ್ ನಾಗಿರೆಡ್ಡಿ ಅವರು ಜಂಟಿಯಾಗಿ ಈ ಮಾಹಿತಿ ನೀಡಿದ್ದು, ಸಂಸ್ಥೆಯ ಸಭಾಭವನದಲ್ಲಿಂದು ನಡೆದ ಬಳ್ಳಾರಿ ಜಿಲ್ಲಾ ರೈಸ್ಮಿಲ್ ಅಸೋಸಿಯೇಷನ್, ಕಾಟನ್ ಅಸೋಸಿಯೇಷನ್, ಇಂಡಸ್ಟ್ರಿಯಲ್ ಅಸೋಸಿಯೇಷನ್, ಸ್ಪಾಂಜ್ ಐರನ್ ಅಸೋಸಿಯೇಷನ್, ಗಾರ್ಮೆಂಟ್ಸ್ ಅಸೋಸಿಯೇಷನ್, ಕೋಲ್ಡ್ ಸ್ಟೊರೇಜ್ ಅಸೋಸಿಯೇಷನ್, ಎಪಿಎಂಸಿ ಮರ್ಚೆಂಟ್ಸ್ ಅಸೋಸಿಯೇಷನ್ ಸೇರಿ ವಿವಿಧ ಸಂಘ – ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಿದ್ದತಾ ಸಭೆ ನಡೆದಿದ್ದು, ಈ ಕೆಳಗಿನಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
`ಕರ್ನಾಟಕದ ಬಂದ್’ ಗುರುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ನಡೆಯಲಿದೆ. ವ್ಯಾಪಾರ, ವಾಣಿಜ್ಯೋದ್ಯಮಗಳು ಮತ್ತು ಕೈಗಾರಿಕೆಗಳು ಮಾತ್ರ ಬಂದ್ ಆಚರಿಸಲಿದೆ. ಉಳಿದಂತೆ ಶಾಲಾ ಕಾಲೇಜುಗಳು, ಸಾರ್ವಜನಿಕ ಸಾರಿಗೆ, ಆರೋಗ್ಯ ಸೇರಿ ನಾಗರಿಕರ ಜನಜೀವನ ಸಾಮಾನ್ಯವಾಗಿರುತ್ತದೆ. ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಸಭೆ ಸೇರುವ ಪ್ರತಿಭಟನಾಕಾರರು ಬೆಂಗಳೂರು ರಸ್ತೆ, ತೇರುಬೀದಿ ಮೂಲಕ ಎಚ್ಆರ್ಜಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿ ಜಿಲ್ಲಾಡಳಿತಕ್ಕೆ ಪ್ರತಿಭಟನಾ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಸಮಾರೋಪಗೊಳ್ಳಲಿದೆ ಎಂದರು.
`ಕರ್ನಾಟಕ ಬಂದ್’ನಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆಯಲ್ಲಿ ನೋಂದಣಿಯಾಗಿರುವ ಸಂಘಗಳ ಜೊತೆಯಲ್ಲಿ ನಾಗರೀಕರ ಹಿತಾಸಕ್ತಿ ಕಾಪಾಡುವ ಸಂಘ – ಸಂಸ್ಥೆಗಳನ್ನು, ಸಾರ್ವಜನಿಕರನ್ನು ಆಹ್ವಾನಿಸಲಾಗುತ್ತದೆ. ವಿದ್ಯುತ್ ಶುಲ್ಕ ಹೆಚ್ಚಳದ ಬಾಧಿಸಲು ಪಾಲ್ಗೊಳ್ಳಲು ಮುಕ್ತ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದಿದ್ದಾರೆ.