ಬದುಕು- ಭವಿಷ್ಯತ್ತಿಗೆ ನಿರ್ಧಿಷ್ಟ ಗುರಿ ಮುಖ್ಯ: ಸತ್ಯಂಪೇಟೆ

ಕಲಬುರಗಿ: ಆ.25:ಬದುಕು ಹಾಗೂ ಭವಿಷ್ಯತ್ತಿಗೆ ಗುರಿ ಮುಖ್ಯ. ಆ ಗುರಿ ಗಾಳಿಗೆ ಚಲಿಸುವ ಮೋಡದಂತಿರಬಾರದು.ಅದು ನಿರ್ಧಿಷ್ಟವಾಗಿ, ನಿಖರವಾಗಿ ಚಲಿಸುವ ಮಷಿನ್ ಗನ್ ನಂತೆ ಇರಬೇಕು ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.

ನಗರದ ಕರ್ನಾಟಕ ಪೀಪಲ್ಸ್ ಎಜ್ಯುಕೇಷನ್ ಸೊಸೈಟಿಯ ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗಳು ಎದುರಾದಾಗ ಕೈ ಕಟ್ಟಿ ಕುಳಿತುಕೊಳ್ಳದೆ ಆ ದಿಸೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಸತತ ಪ್ರಯತ್ನ, ಸಮಯದ ಮಹತ್ವ, ಭವಿಷ್ಯದ ಕಲ್ಪನೆ, ಯೋಜನೆ ಹಾಕಿಕೊಂಡು ಅದರಂತೆ ನಡೆದರೆ ಜೀವನದಲ್ಲಿ ಖಂಡಿತ ಯಶಸ್ಸು ಸಾಧಿಸಬಹುದು. ಮೂಢನಂಬಿಕೆ ಹಾಗೂ ಅಂಧಶ್ರದ್ಧೆ ತೊರೆದು ವೈಜ್ಞಾನಿಕ, ವೈಚಾರಿಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಡಾ. ಆನಂದ ಸಿದ್ಧಾಮಣಿ ಮಾತನಾಡಿ, ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು. ಬಸವಾದಿ ಶರಣರು ಬದುಕಿ ಬೋಧಿಸಿದ ಜೀವನಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅತಿಥಿಯಾಗಿದ್ದ ಕೆಪಿಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ಚಂದ್ರಶೇಖರ ಶೀಲವಂತ ಮಾತನಾಡಿ, ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು, ಸಾಧಿಸುವ ಛಲ, ಆತ್ಮಬಲ ಹೊಂದಿರಬೇಕು. ಅಂದಾಗ ಮಾತ್ರ ನಾವು ಅಂದುಕೊಂಡದ್ದನ್ನು ಸಾಧಿಸಬಹುದು ಎಂದರು.

ಸಜ್ಜನರ ಸಂಗ, ಮನಸ್ಸು ನಿಗ್ರಹ, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಧೈರ್ಯದಿಂದ ಜೀವನ ನಡೆಸಬೇಕು. ಯಶಸ್ಸು ಖರದೀಸಲು ಬರುವುದಿಲ್ಲ. ಯಶಸ್ಸಿಗೆ ಪ್ರಯತ್ನ ಅಗತ್ಯ ಎಂದು ಅನೇಕ ಉದಹಾರಣೆ ನೀಡಿ ಮಕ್ಕಳನ್ನು ಹುರಿದುಂಬಿಸಿದರು.

ಇದೇವೇಳೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾವ್ಯ, ಇಂದುಮತಿ, ಶ್ವೇತಾ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯೆ ಅಕ್ಕನಾಗಮ್ಮ ಹತ್ತಿ ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.

ಉಪನ್ಯಾಸಕರಾದ ಉಮಾದೇವಿ ಒಡೆಯರ, ಎಸ್.ಬಿ.ಮಹಾಜನ, ಅಣ್ಣಾರಾವ, ಎಸ್. ದೇಶಮಾನ್ಯೆ,
ವಿದ್ಯಾ ಪದಕಿ, ಭಾರತಿ ಸೇರಿದಂತೆ ಅನೇಕರಿದ್ದರು.