
ವಿಜಯಪುರ: ಎ.6:ಬದುಕಿರುವಾಗಲೇ ವೃದ್ಧೆಯೊಬ್ಬಳಿಗೆ ಮರಣ ಪತ್ರ ನೀಡಿದ ವಿಚಿತ್ರ ಘಟನೆಯೊಂದು ಜಿಲ್ಲೆಯ ಚಡಚಣ ತಾಲೂಕಿನ ನಡೆದಿರುವದು ತಡವಾಗಿ ಬೆಳಕಿಗೆ ಬಂದಿದೆ. ಇದರ ಹಿಂದೆ ಸಂಬಂಧಿಕರ ಆಸ್ತಿ ಹೊಡೆಯುವ ದುರಾಲೋಚನೆ ಇತ್ತಾ? ಅಥವಾ ಜನನ ಮತ್ತು ಮರಣ ಪತ್ರ ನೋಂದಣಿ ಕೇಂದ್ರದ ಅಧಿಕಾರಿಗಳ ಎಡವಟ್ಟು ಕಾರಣವೇ ಇನ್ನುವ ಪ್ರಶ್ನೆ ಎದುರಾಗಿದೆ.
ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ 60 ವರ್ಷದ ಸಾವಿತ್ರಿ ರಾಮಾಗುಂಡ ಮಾಳಿ ಎಂಬವಳಿಗೆ ಚಡಚಣ ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳು ಮರಣ ಪತ್ರ ನೀಡಿ ಅವಳಿಗೆ ಅಚ್ಚರಿ ಮೂಡಿಸಿದ್ದಾರೆ.ವೃದ್ದೆ ಸಾವಿತ್ರಿ ಮಾಳೆ ತಮ್ಮ ತಾಯಿಯ ಮರಣ ಪತ್ರ ಪಡೆಯಲು ಕಚೇರಿಗೆ ಹೋದಾಗ ಅಧಿಕಾರಿಗಳು ನೀವು 12/3/2001ರಲ್ಲಿ ನಿಧನರಾಗಿದ್ದೀರಿ ಎಂದು ಅವಳ ಮರಣ ಪತ್ರವೇ ನೀಡಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಸಾವಿತ್ರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸಾವಿತ್ರಿ ಮೂಲತ ಹೊನ್ನಳ್ಳಿ ಗ್ರಾಮದವರು ಇವರ ತಂದೆಗೆ ಒಬ್ನಳೇ ಮಗಳು ತಂದೆ ನಿಧನಾದಂತರ ಅವರ 12ಎಕರೆ ಹೊಲ ಇವರ ಹೆಸರಿಗೆ ಬಂದಿತ್ತು. ಈ ಆಸ್ತಿ ಲಪಟಾಯಿಸಲು ತಮ್ಮ ಸಂಬಂಧಿಕರೆ ಸಾವಿತ್ರ ದತ್ತು ಪುತ್ರನೆಂದು ಬಿಂಬಿಸಿ ತನ್ನ ಆಸ್ತಿ ಕಬಳಿಸಲು ಮರಣ ಪತ್ರ ಸೃಷ್ಟಿ ಮಾಡಿದ್ದಾರೆ ಎಂದು ಸಾವಿತ್ರಿ ಮಾಳೆ ಆರೋಪಿಸಿದ್ದಾಳೆ.
ಮರಣ ಪತ್ರದ ರಹಸ್ಯವೇನು?: ಸಾವಿತ್ರಿ ಮಾಳೆಯ ಪತಿ ನಿಂಗಪ್ಪ ಮಾಳೆ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿದ್ದಾನೆ. ಇವಳಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವಿದ್ಯಾವಂತರು ಪ್ರಪಂಚದ ಜ್ಞಾನ ಸಹ ಗೊತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಅವರ ಸಂಬಂಧಿಕರೊಬ್ಬರು ಸಾವಿತ್ರಿ ಹೆಸರಿನಲ್ಲಿರುವ 12ಎಕರೆ ಜಮೀನು ಹೊಡೆಯಲು 2001ರಲ್ಲಿ ಸಾವಿತ್ರಿ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 11-03-2001ರಂದು ನಿಧನರಾಗಿದ್ದಾಳೆಂದು ಚಡಚಣದ ಗ್ರಾಮಲೆಕ್ಕಾಧಿಕಾರಿ ಮೂಲಕ ಜನನ ಮತ್ತು ಮರಣಗಳ ನೊಂದಣಿ ಕಚೇರಿಯಲ್ಲಿ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದು ನೊಂದಣಿಯಾಗಿದ್ದು ಮಾತ್ರ 2-01-2013 ರಂದು. ನಂತರ 5-01-2023ರಂದು ಮರಣ ಪ್ರಮಾಣ ಪತ್ರಕ್ಕೆ ಅನುಮೋದನೆ ದೊರೆತಿದೆ. ಇದು ಗೊತ್ತಿಲ್ಲದ ವೃದ್ದೆ ಸಾವಿತ್ರಿ ತಮ್ಮ ತಾಯಿಯ ಮರಣ ಪತ್ರ ಪಡೆಯಲು ಹೋದಾಗ ತನ್ನ ಮರಣ ಪತ್ರ ನೀಡಿದ ಮೇಲೆ ಇಡಿ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ನ್ಯಾಯಾಲಯದ ಮೆಟ್ಟಿಲೇರಿರುವ ವೃದ್ದೆ ಸಾವಿತ್ರಿ ಮಾಳೆ ಜೀವಿತಾವಧಿಯಲ್ಲಿಬಮರಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜತೆ ಮಾನಸಿಕವಾಗಿ ನೊಂದಿರುವ ತಮಗೆ ಕಾನೂನಿನ ನೆರವು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಅರ್ಜಿ ಬರೆದಿದ್ದಾಳೆ.
ವಕೀಲರು ಏನಂತಾರೆ: ಕಾನೂನು ಪ್ರಾಧಿಕಾರಕ್ಕೆ ಸಾವಿತ್ರಿ ಅರ್ಜಿ ಹಾಕಿದ ಮೇಲೆ ಪ್ರಕರಣ ನ್ಯಾಯವಾದಿಗಳ ಗಮನಕ್ಕೆ ಬಂದಿದೆ. ಜೀವಂತವಿರುವಾಗಲೇ ವೃದ್ಧೆಗೆ ಮರಣ ಪ್ರಮಾಣ ಪತ್ರ ನೀಡಿರುವದು ದೊಡ್ಡ ಅಪರಾಧವಾಗಿದೆ ಎಂದು ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅಭಿಪ್ರಾಯ ಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಇಂಥ ಪ್ರಕರಣ ನೋಡಿರಲಿಲ್ಲ, ಆಕೆ ಹೇಳುವಂತೆ ಆಸ್ತಿಗಾಗಿ ಈ ರೀತಿ ಮಾಡಿದ್ದಾರೆ ಎಂದು ಆದರೆ ಏನೇ ಇರಲಿ ಜೀವಂತವಿರುವ ವ್ಯಕ್ತಿಗಳಿಗೆ ಮರಣಪತ್ರ ನೀಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟ ಕೈಗೊಳ್ಖ ಲಾಗುವದು ಎಂದು ಎಚ್ಚರಿಸಿದ್ದಾರೆ.
ಏನೇ ಇರಲಿ ಜೀವಂತವಿರುವ ವೃದ್ದೆಗೆ ಮರಣ ಪತ್ರ ನೀಡಿ ಎಸಗಿರುವ ಪ್ರಮಾದದಿಂದ ಜನನ ಮತ್ತು ಮರಣ ನೋಂದಣಿ ಅಧಿಕಾರಿ ಇಲಾಖೆಯನ್ನು ಅಣುಕಿಸುವಂತಾಗಿದೆ.