
ಬೀದರ:ಮೇ.3:ಐಟಿಐ ಒಂದು ಪ್ರಾಯೋಗಿಕ ಶಿಕ್ಷಣ. ಬಡ ಮಕ್ಕಳಿಗೆ ಗುಣಾತ್ಮಕ ಕೌಶಲ್ಯ ಶಿಕ್ಷಣ ನೀಡಿ ಸಾವಿರಾರು ಕೈಗಳಿಗೆ ಕಾಯಕ ನೀಡಿದ ಶಿವಶಂಕರ ಟೋಕರೆ 39 ವರ್ಷಗಳ ಸೇವೆ ರಾಜ್ಯಕ್ಕೆ ಮಾದರಿ ಎಂದು ಬೈಲೂರು ತೋಂಟದಾರ್ಯ ಶಾಖ ಮಟ್ಟದ ಪೂಜ್ಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು.
ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಇತ್ತೀಚಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿವಶಂಕರ ಟೋಕರೆ ಅಭಿಮಾನ ಬಳಗದವರು ಆಯೋಜಿಸಿದ “ವಯೋನಿವೃತ್ತಿ ಹಾಗೂ ಕೌಶಲ್ಯ ಸಿರಿ ಅಭಿನಂದನ ಗ್ರಂಥ” ಜನಾರ್ಪಣೆಯಲ್ಲಿ ಜ್ಯೋತಿ ಪ್ರಜ್ವಲಗೊಳಿಸಿದ ಪೂಜ್ಯ ಶ್ರೀ ನಿಜಗುಣ ಪ್ರಭು ಸ್ವಾಮಿಗಳು ಮುಂದುವರೆದು ತನ್ನ ಕಾಯಕದಲ್ಲಿ ನಿಷ್ಠೆ, ಶ್ರದ್ಧೆ ಕಳಕಳಿಯಿಂದ 16 ಸಾವಿರ ಕುಶಲ ಕರ್ಮಿಗಳ ಬಾಳಿಗೆ ಬೆಳಕು ನೀಡಿದ ಶಿವಶಂಕರ ಟೋಕರೆ ಸೇವೆ ಒಂದು ಅಪರೂಪ.
ತನ್ನೆಲ್ಲಾ ಕೆಲಸಗಳನ್ನು ಬಿಟ್ಟು 13 ವರ್ಷಗಳ ಪ್ರಾಂಶುಪಾಲರಾಗಿ ಒಂದು ರಜೆ ಹಾಕದೆ ಐಟಿಐ ಸಮಗ್ರ ಅಭಿವೃದ್ಧಿ ಮಾಡಿದು ಇವರೊಬ್ಬ ಕಾಯಕ ಯೋಗಿ. ಬಸವ, ಕನ್ನಡ ಕೌಶಲ್ಯಕ್ಕಾಗಿ 39 ವರ್ಷಗಳ ತನ್ನ ಜೀವನವನ್ನೆ ಮುಡುಪಾಗಿಟ್ಟು ಅಹರ್ನಿಷ ಸೇವೆ ಇಂದು ಸಾರ್ಥಕಗೊಂಡಿದೆ. ಅವರ ಸೇವೆಯು ಕಪ್ಪು ಚುಕ್ಕೆ ರಹಿತವಾಗಿ ಸಾವಿರಾರು ಜನರ ಪ್ರೀತಿಯ ಪಾತ್ರರಾಗಿ ಆರೋಗ್ಯದಿಂದ ನಿವೃತ್ತಿಗೊಳ್ಳುತ್ತಿರುವುದು ಅಭಿಮಾನದ ಸಂಗತಿಯಾಗಿದೆ.
ಕೌಶಲ್ಯ ಸಿರಿ ಅಭಿನಂದನ ಗ್ರಂಥ ಜನಾರ್ಪಣೆಗೊಳಿಸಿದ ಕೈಗಾರಿಕಾ ಮತ್ತು ತರಬೇತಿ ಇಲಾಖೆಯ ಬೆಂಗಳೂರಿನ ಇಲಾಖೆಯ ಜಂಟಿ ನಿರ್ದೇಶಕರಾದ ವೈಜಗೊಂಡ ಮಾತನಾಡಿ – ಶಿವಶಂಕರ ಟೋಕರೆ ಇಲಾಖೆಯ ಆಸ್ತಿ. ಇವರಿಗೆ ಸಂಕಷ್ಟದ ಕೆಲಸ ನೀಡಿದರು ಅದನ್ನು ಸರಳಿ ಕರಣಗೊಳಿಸಿ ಅಭಿವೃದ್ಧಿ ಮಾಡುವ ಛಲಗಾರರು 13 ವರ್ಷಗಳ ಪ್ರಾಂಶುಪಾಲರ ಸೇವೆ ಇಡಿ ರಾಜ್ಯಕ್ಕೆ ಮಾದರಿಯಾಗಿದೆ. ಕ್ಯಾಂಪಾಸ್, ಉದ್ಯೋಗ ಮೇಳ, ಹುದ್ದೆಗಳ ವರ್ಗಾವಣೆ, ಕೌಶಲ್ಯ ನಡೆ ಪ್ರೌಢ ಶಾಲೆ ಕಡೆ, ಅನೇಕ ಕಾರ್ಯಗಾರಗಳ ಜಾಗೃತಿ ಸಂಸ್ಥೆಯ ಡಿಜಟಲಿಕರಣ ಜೊತೆಗೆ ಔರಾದ, ಕಮಲನಗರ, ಭಾಲ್ಕಿ ಮತ್ತು ಬೀದರ ಸಮಗ್ರ ಅಭಿವೃದ್ಧಿಗೊಳಿಸಿ ಇಡಿ ರಾಜ್ಯವೇ ನೋಡುವಂತೆ ಮಾಡಿರುವುದು ಅಭಿಮಾನ ಇಲಾಖೆಯ ಅತ್ಯುಪಯುಕ್ತವಾದ ಟಾಟಾ ಯೋಜನೆ ಬೀದರ ಹಾಗೂ ಔರಾದ ಐಟಿಐನಲ್ಲಿ ಏಕ ಕಾಲಕ್ಕೆ ಪ್ರಾರಂಭಿಸಿ ಒಂದೇ ದಿವಸ ಲೋಕಾರ್ಪಣೆಗೊಳಿಸಿದ್ದು ಇವರ ಕಾರ್ಯಕ್ಷಮತೆಗೆ ತೆರೆದಿಟ್ಟ ಪುಸ್ತಕ ಆಯೋಜನೆ ಅಡಿಯಲ್ಲಿ ನೂರಾರು ಮಕ್ಕಳನ್ನು ಅಲ್ಪಾವಧಿ, ತರಬೇತಿ ನೀಡಿ ಅವರೆಲ್ಲರಿಗೆ ನೌಕರಿ ಒದಗಿಸಿದ್ದು ಇಂದು ಟೋಕರೆ ಅಂದರೆ ಐಟಿಐ ಎಂಬ ಮನೆ ಮಾತಾಗಿರುವುದು ಸಂತಸ ಜೊತೆಗೆ ನಾಳೆಯಿಂದ ಶಿವಶಂಕರ ಟೋಕರೆಯಿಲ್ಲದ ಐಟಿಐಗಳು ಬಡವಾಗುತ್ತೇವೆಂಬ ಆತಂಕ ಆವರಿಸುತ್ತಿರುವುದು ದುಃಖದ ಸಂಗತಿಯೆಂದು ನುಡಿದು ಇವರೊಬ್ಬ ಐಟಿಐನಲ್ಲಿ ಇತಿಹಾಸ ನಿರ್ಮಾಣ ಮಾಡಿ ಯುಗ ಪುರುಷರಾಗಿದ್ದಾರೆಂದು ತಮ್ಮ ಅಭಿಮಾನದ ನುಡಿಗಳನ್ನಾಡಿದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ|| ಶಿವಗಂಗ ರುಮ್ಮಾ ಕೌಶಲ್ಯ ಸಿರಿ ಅಭಿನಂದನ ಗ್ರಂಥದ ಬಗ್ಗೆ ಮಾತನಾಡಿ ಶಿವಶಂಕರ ಟೋಕರೆ ಒಬ್ಬ ಬಹುಮುಖ ವ್ಯಕ್ತಿತ್ವದ ಸಂಘಟನೆಗಾರ. ಸಂಘ ಸಂಸ್ಥೆಗಳ ಒಡನಾಟ ಕ್ರಿಯಾಶೀಲತೆ, ಕಾರ್ಯತತ್ವಪರತೆ, ಕ್ಷಮತೆ, ಸಮಯ ಪ್ರಜ್ಞೆ ಅಳವಡಿಸಿಕೊಂಡು ಸಮಾಜವನ್ನು ಪರಿವರ್ತಿಸಿದ ಬಸವ ಪ್ರೇಮಿ.
ತಂತ್ರಾಜ್ಞಾನ ವಿದ್ಯಾರ್ಥಿಯಾಗಿ ಪದಪುಂಜ, ಕೌಶಲ್ಯ ಸಿರಿ, ಅಕ್ಷರ ಕಾರಂಜಿ, ಕನ್ನಡ ಪುಸ್ತಕಗಳು ರಚಿಸಿ ಸಾಹಿತ್ಯ ಲೋಕದಲ್ಲಿಯು ಛಾಪು ಮೂಡಿಸಿದ್ದಾರೆ. ಐಟಿಐ ಶಿಕ್ಷಣಕ್ಕೆ ಮೂಗು ಮುರಿಯುವ ಕಾಲಕ್ಕೆ ಅದಕ್ಕೆ ಒಳ್ಳೆ ಕಾಯಕಲ್ಪ ನೀಡಿ ಸ್ವಾವಲಂಬಿ ಬದುಕಿಗೆ ಇದು ಬೆನ್ನೆಲುಬು ಎಂಬುವುದನ್ನು ಸಾಬೀತು ಪಡಿಸಿ ಸಾವಿರಾರು ಮಕ್ಕಳಿಗೆ ಉದ್ಯೋಗ ಕೊಡಿಸಿ ತನ್ನ ವೃತ್ತಿಗೆ ರಾಜ್ಯ ಮಟ್ಟದಲ್ಲಿ ಗೌರವ ತಂದುಕೊಟ್ಟ ಕೌಶಲ್ಯ ವಂತರಾಗಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೆಗಳಿಲ್ಲವೆಂಬ ಆತಂಕ ಇರುವ ಸಂದರ್ಭದಲ್ಲಿ ಬೃಹತ್ ಕೈಗಾರಿಕೆಗಳನ್ನು ತನ್ನ ಸಂಸ್ಥೆಗೆ ಆಹ್ವಾನಿಸಿ ಕ್ಯಾಂಪಸ್ ಹಿರೋ ಇವರಾಗಿದ್ದಾರೆ. ಇವರ ಅಭಿಮಾನ ಬಳಗ ಸುಮಾರು 450 ಪುಟಗಳ ಕೌಶಲ್ಯ ಸಿರಿ ಗ್ರಂಥದಲ್ಲಿ, ಭಾವಸಿರಿ, ಕಾವ್ಯಸಿರಿ, ಅಕ್ಷರ ಸಿರಿ, ಪುಸ್ತಕ ಸಿರಿ, ಪತ್ರಿಕಾ ಸಿರಿ, ಗೌರವ ಸಿರಿ ವಿಭಾಗಗಳಿಂದ ಕೂಡಿದ್ದು ನೂರಾರು ಲೇಖಕರು, ಕವಿಗಳು ಮಂಡ್ಯಾದಿಂದ ಔರಾದನವರೆಗಿನ ಸಹಹೃದಯಿಗಳು ಅಮೂಲ್ಯವಾದ ಸಮಯ ನೀಡಿ ಗ್ರಂಥಕ್ಕೆ ಸಹಕರಿಸಿರುವುದು ಒಂದು ದಾಖಲೆ.
ಶಿವಶಂಕರ ಟೋಕರೆ ಅವರ ಶಿಷ್ಯ ಹಾಗೂ ಕಲಬುರಗಿ ವಿಭಾಗದ ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಸದಾನಂದ ಜೋಶಿ ಮುಖ್ಯ ಅತಿಥಿಗಳಾಗಿ ಶಿವಶಂಕರ ಟೋಕರೆ ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ಆರು ಕಂಡರಿಯದ ರೀತಿಯಲ್ಲಿ ಕೆಲಸ ಮಾಡಿದ ಅಪರೂಪದ ನಿಸ್ವಾರ್ಥ ಅಧಿಕಾರಿಗಳು. ತರಬೇತಿಯೂ ಉಚಿತ, ನೌಕರಿ ಖಚಿತವೆಂಬ ಶಿರೋನಾಮೆ ಅಡಿಯಲ್ಲಿ 39 ವರ್ಷಗಳ ಸೇವೆ ಮಾಡಿದ್ದು ರಾಜ್ಯಕ್ಕೆ ಒಂದು ಮಾದರಿ ಒಂದೇ ದಿವಸದಲ್ಲಿ 1885 ಐಟಿಐ ಕುಶಲ ಕರ್ಮಿಗಳಿಗೆ ಶಿವಶಂಕರ ಟೋಕರೆ ನೌಕರಿ ಕೊಡಿಸಿದ್ದು, ಇದು ಒಂದು ದಾಖಲೆ. ಅತ್ಯಂತ ಸರಳ ಸಾತ್ವಿಕ, ಬಸವ ಹೃದಯಿಗಳಾದ ಇವರು ಬೈದವರನ್ನು ಬಂಧುಗಳೆಂದು ತಿಳಿದು, ತನ್ನ ದಾರಿಯಲ್ಲಿಯೇ ನಡೆದು ಇಂದು ಅಭಿವೃದ್ಧಿ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಸಾಪ, ಬಸವ ಕೇಂದ್ರ ಹೀಗೆ ಅನೇಕ ಬೃಹತ್ ಸಂಘಟನೆಗಳ ಅಪರೂಪದ ಪದಾಧಿಕಾರಿಗಳಾಗಿ ಆ ಹುದ್ದೆಗಳಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಅವರೊಬ್ಬ ಅಭಿವೃದ್ಧಿ ಪರ್ವ ಪದಾಧಿಕಾರಿಗಳಾಗಿದ್ದಾರೆ. ಇವತ್ತು ಘೋರ ಗರಿಯುವ ಮಳೆಯ ಮಧ್ಯಯೂ ರಂಗ ಮಂದಿರ ಜನ ಸಮುದಾಯದಿಂದ ತುಂಬಿ ತುಳುಕುವದಲ್ಲದೆ ಹೊರಗಡೆ ಜನ ಜಂಗುಳಿ ಗಮನಿಸಿದ್ದಾಗ ನಾನು ಸಹಿತ ವಿಸ್ಮಯಗೊಂಡಿದ್ದೇನೆ. ಇಂಥವರು ಬೀದರನಲ್ಲಿ ಇದ್ದರೆ ಅಭಿವೃದ್ಧಿ ಖಂಡಿತವಾಗುತ್ತದೆಂದು ನುಡಿದರು.
ಸಮಾರಂಭದಲ್ಲಿ ಇಲಾಖೆಯ ಉಪನಿರ್ದೇಶಕರಾದ ಡಾ|| ಶರಣಬಸಪ್ಪ ಸಡ್ಡು ಸಹಿತ ಮಾತನಾಡಿದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಗುರುಬಸವ ಸಂಸ್ಥಾನ ಮಟ್ಟದ ಡಾ|| ಶಿವಾನಂದ ಸ್ವಾಮಿಗಳು, ಬಸವ ಯೋಗಾಶ್ರಮದ, ಡಾ|| ಸಿದ್ದಾರಾಮ ಶರಣರು ಬೆಲ್ದಾಳ, ಲಿಂಗಾಯತ ಮಹಾಮಟ್ಟದ ಪೂಜ್ಯ ಶ್ರೀ ಡಾ|| ಅಕ್ಕ ಅನ್ನಪೂರ್ಣತಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗುರುನಾಥ ಕೊಳ್ಳೂರ, ಪ್ರಭುರಾವ ವಸ್ಮತೆ, ರಾಜೇಂದ್ರಕುಮಾರ ಗಂದಗೆ, ಶೋಭಾವತಿ ಶಿವಶಂಕರ ಟೋಕರೆ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ವಹಿಸಿದ್ದರೆ, ಕೌಶಲ್ಯ ಸಿರಿ ಅಭಿನಂದನ ಗ್ರಂಥದ ಸಂಪಾದಕರಾದ ಡಾ. ಈಶ್ವರಯ್ಯ ಕೊಡಂಬಲ್ ಆಶಯ ನುಡಿ ನುಡಿದರು.
ಮೊದಲಿಗೆ ಪ್ರೊ. ಶಿವಕುಮಾರ ಕಟ್ಟೆ ಸ್ವಾಗತಿಸಿದರೆ, ಅಲ್ಲಮಪ್ರಭು ನಾವದಗೇರೆ ವಂದಿಸಿದರೆ, ಚನ್ನಬಸವ ಹೇಡೆ ನಿರೂಪಿಸಿದರು. ಡಾ|| ಬಸವರಾಜ ಬಲ್ಲೂರ, ಟಿ.ಎಮ್. ಮಚ್ಚೆ ಕಾರ್ಯಕ್ರಮದಲ್ಲಿ ಸಮನ್ವಯಗಾರರಾಗಿ ಕೆಲಸ ನಿರ್ವಹಿಸಿದರು. ಶಿವಾನಿ ಶಿವದಾಸ ಸ್ವಾಮಿ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಇದೆ ಸಂದರ್ಭದಲ್ಲಿ ಜಿಲ್ಲೆಯ 60 ಐಟಿಐ ಪ್ರಾಂಶುಪಾಲ ದಂಪತಿಗಳಿಗೆ ಕೌಶಲ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.