ತಾಳಿಕೋಟೆ: ಜೂ.30:ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲೀಂ ಬಾಂಧವರು ಈದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಈದ ಪ್ರವಚನ ನೀಡಿದ ಡಾ|| ಮೀನಹಾಜುದ್ದೀನ ಖಾಜಿ ಬಕ್ರೀದ್ ಹಬ್ಬವು ತ್ಯಾಗ ಮತ್ತು ಸಮರ್ಪಣೆಯ ಪ್ರತೀಕವಾಗಿದೆ. ಈ ಹಬ್ಬವು ಪ್ರವಾದಿ ಇಬ್ರಾಹೀಮರು ದೇವನ ಆದೇಶದಂತೆ ತಮ್ಮ ಏಕೈಕ ಪುತ್ರ ಇಸ್ಮಾಯಿಲ್ವರನ್ನು ಬಲಿ ನೀಡಲು ಮುಂದಾದ ಘಟನೆಯ ಸ್ಮರಣೆಗಾಗಿ ಆಚರಿಸಲಾಗುತ್ತದೆ. ಪ್ರವಾದಿ ಇಬ್ರಾಹೀಮರು ಸರ್ವಾಧಿಕಾರದ ಕೆಟ್ಟ ವ್ಯವಸ್ಥೆಯನ್ನು ಕಿತ್ತುಹಾಕಿ ಸಮಾಜದಲ್ಲಿ ಶಾಂತಿ, ನ್ಯಾಯ ಹಾಗೂ ಸತ್ಯದ ಸ್ಥಾಪನೆಗಾಗಿ ಶಕ್ತಿಮೀರಿ ಹೋರಾಟವನ್ನು ನಡೆಸಿದರು. ಅವರಿಗೆ ಈ ಕಾರ್ಯದಲ್ಲಿ ಹಲವಾರು ಗಂಡಾಂತರಗಳನ್ನು ಎದುರಿಸಬೇಕಾಯಿತು. ಈ ಸತ್ವಪರೀಕ್ಷೆಗಳನ್ನು ಅವರು ಎದುರಿಸಿ ಯಶಸ್ವಿಯಾದರು. ಅವರ ಈ ಆದರ್ಶ ಬದುಕನ್ನು ಮಾದರಿಯನ್ನಾಗಿ ಮಾಡಿಕೊಳ್ಳಲು ಈ ಹಬ್ಬವನ್ನು ನಾವು ಲೋಕಾಂತ್ಯದವರೆಗೆ ಆಚರಿಸಬೇಕೆಂದು ಪ್ರವಾದಿ ಮಹಮ್ಮದರು ನಮಗೆ ತಿಳಿಸಿದ್ದಾರೆ. ಮುಸ್ಲೀಂ ಸಮುದಾಯ ಧರ್ಮದ ನೈಜ ತಿರುಳನ್ನು ಅರಿತು ಬಾಳುವಂತವರಾಗಬೇಕು. ಧರ್ಮವನ್ನು ಸರಿಯಾಗಿ ತಿಳಿಯದೇ ಹೋದಲ್ಲಿ ಇನ್ನೊಂದು ಧರ್ಮವನ್ನು ಪ್ರೀತಿಸಲು ಹಾಗೂ ಗೌರವಿಸಲು ಸಾಧ್ಯವಿಲ್ಲ. ದೇಶದ ಕಾನೂನು ಮತ್ತು ಇತರ ಧರ್ಮೀಯರ ಭಾವನೆಗಳಿಗೆ ಧಕ್ಕೆ ಬರದಂತೆ ನಾವು ಹಬ್ಬಗಳನ್ನು ಆಚರಿಸುವ ಅಗತ್ಯ ಇದೆ ಎಂದರು.
ಧಾರ್ಮೀಕ ಮುಖಂಡ ಸೈಯದ್ ಶಕೀಲಅಹ್ಮದ ಖಾಜಿ, ಈದ್ಗಾ ಕಮೀಟಿ ಅಧ್ಯಕ್ಷ ಮಾಸೂಮ್ಸಾಬ ಕೆಂಭಾವಿ, ಉಪಾಧ್ಯಕ್ಷ ಅಬ್ದುಲ್ರಜಾಕ್ಸಾಬ ಮನಗೂಳಿ, ಕಾರ್ಯದರ್ಶಿ ಎ.ಡಿ. ಯಕೀನ್, ಜಾಮೀಯಾ ಮಸೀದಿ ಅಧ್ಯಕ್ಷ ಅಲ್ಲಾಭಕ್ಷ ನಮಾಜಕಟ್ಟಿ, ಪುರಸಭೆ ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ಫಯಾಜ್ ಉತ್ನಾಳ, ಮುಸ್ಲೀಂ ಬ್ಯಾಂಕ ಅಧ್ಯಕ್ಷ ಇಬ್ರಾಹೀಂಸಾಬ ಮನ್ಸೂರ, ಗಣ್ಯರಾದ ಕೆ.ಎಂ. ಡೋಣಿ, ಗನಿಸಾಬ ಲಾಹೋರಿ, ಫಸಿಯುದ್ದೀನಸಾಬ ಖಾಜಿ, ಅಬ್ದುಲ್ಸತ್ತಾರ ಅವಟಿ, ರೋಶನ್ ಡೋಣಿ, ಹಸನ್ಸಾಬ ಮನಗೂಳಿ, ಯಾಸೀನಸಾಬ ಮಮದಾಪೂರ, ಖಾಜಾಹುಸೇನ ಸಗರ, ರಾಜಅಹ್ಮದ್ ಒಂಟಿ, ಡಾ|| ಆರ್.ಎಂ. ಕೋಳ್ಯಾಳ, ಸಿಕಂದರ ವಠಾರ, ನಿರಂಜನಶಾ ಮಕಾನದಾರ, ಡಾ|| ಎ.ಎ. ನಾಲಬಂದ, ಮಹಿಬೂಬಶ್ಯಾ ಮಕಾನದಾರ, ಮುಜಾಹಿದ್ ನಮಾಜಕಟ್ಟಿ, ಶಬ್ಬೀರ ಲಾಹೋರಿ, ಅಬ್ದುಲ್ರಜಾಕ್ ಮಮದಾಪೂರ ಇದ್ದರು.