
ಬೆಂಗಳೂರು,ಏ.೧೭- ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿರುವ ಕಾಂಗ್ರೆಸ್ ನಾಯಕಿ ಪಲ್ಲವಿ ಜಿ. ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು, ನಾಳೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಶ್ರೀನಿವಾಸ್ ಕರಿಯಣ್ಣ ಅವರಿಗೆ ಟಿಕೆಟ್ ನೀಡಿದ್ದು, ಜಿ. ಪಲ್ಲವಿ ಅವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಬಂಡೆದ್ದಿರುವ ಅವರು ಬಂಡಾಯ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಇತ್ತೀಚೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಲಾಢ್ಯ ಜಾತಿಗಳಿಗೆ ಮಣಿದಿದ್ದು, ಅಲೆಮಾರಿ ಸಮುದಾಯದವನ್ನು ನಿರ್ಲಕ್ಷಿಸಿದೆ. ಪರಿಶಿಷ್ಟ ಜಾತಿಯಲ್ಲಿನ ೧೦೧ ಸಮುದಾಯಗಳಿಗೆ ೩೬ ಮೀಸಲು ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಹಣಬಲ, ಜನಬಲವುಳ್ಳ ೪ ಪ್ರಬಲ ಸಮುದಾಯಗಳಿಗೆ ಮಣಿಹಾಕಿ ಅಲೆಮಾರಿ ಹಾಗೂ ಇತರೆ ಸಮುದಾಯಗಳಿಗೆ ಆದ್ಯತೆ ನೀಡದೇ ವಂಚಿಸಿರುವುದು ಖಂಡನೀಯ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘ” ಕೊರಮ- ಕೊರಚ-ಕೊರವ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶಿವಾನಂದ ಎಂ ಭಜಂತ್ರಿ ಟೀಕಿಸಿದ್ದಾರೆ.
ಇಂದು ಎಲ್ಲಾ ರಾಜಕೀಯ ಪಕ್ಷಗಳು ೩೬ ಮೀಸಲು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ಒಂದು ಟಿಕೆಟ್ ಸಹ ನೀಡದೇ ಕೊರಮ-ಕೊರಚ ಸಮಾಜವನ್ನು ನಿರ್ಲಕ್ಷಿಸಿ, ರಾಜಕೀಯ ದ್ರೋಹವೆಸಗಿದೆ. ಕಾಂಗ್ರೆಸ್ನ ಎರಡನೇ ಪಟ್ಟಿಯಲ್ಲಿ ಜಿ. ಪಲ್ಲವಿ ಹೆಸರು ಅಂತಿಮವಾಗಿತ್ತು. ಆದರೆ ಟಿಕೆಟ್ ಪ್ರಕಟವಾದಾಗ ಆಘಾತವಾಯಿತು. ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ