ಬೀದರ:ಜೂ.7:ಭಕ್ತಿ ಸಾಹಿತ್ಯವು ಬದುಕಿನ ವಿಕಾಸಕ್ಕೆ ನೇರ ಸಂಸ್ಕಾರ ನೀಡಿ, ಶಾರೀರಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಗಳನ್ನು ಸಂರಕ್ಷಿಸುವ ಸಾಧನಾ ಮಾರ್ಗವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಔರಾದ(ಬಾ)ನ ಇತಿಹಾಸ ವಿಭಾಗ ಮುಖ್ಯಸ್ಥರಾದ ಡಾ. ಸಂಜೀವಕುಮಾರ ತಾಂದಳೆ ನುಡಿದರು.
ಅವರು ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು,(ರಿ) ಬೀದರ, ವತಿಯಿಂದ ದಿನಾಂಕ 05-06-2023 ರಂದು ನಗರದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ದಾಸ ಸಾಹಿತ್ಯ ಸಂಶೋಧಕರು “ಪ್ರೊ. ವಸಂತ ಕುಷ್ಟಗಿರವರ ಬದುಕು ಮತ್ತು ಬರಹ” ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ದಾಸರು ಜ್ಞಾನ ಸುಧೆಯನ್ನು ಹರಿಸಿ ವಿಶ್ವವನ್ನು ನೆಮ್ಮದಿಯಾಗಿರಿಸಲು ಸತ್ವದ ಸಾರವನ್ನು ಸುಲಭವಾಗಿ ಕನ್ನಡದಲ್ಲಿ ನೀಡಿದ್ದಾರೆ ಎಂದರು.
ಇಲ್ಲಿಯ ಸಪ್ತಗಿರಿ ಪ.ಪೂ.ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಅನೀಲಕುಮಾರ ಜಾಧವರವರು “ಪ್ರೊ. ವಸಂತ ಕುಷ್ಟಗಿರವರ ಬದುಕು ಮತ್ತು ಬರಹ” ಕುರಿತು ಉಪನ್ಯಾಸ ನೀಡುತ್ತಾ, ಪ್ರೊ. ಕುಷ್ಟಗಿರವರು ಇಡೀ ಜೀವಮಾನವೇ ಸಾಹಿತ್ಯ ಸೇವೆ ವಿಶೇಷವಾಗಿ ದಾಸ ಸಾಹಿತ್ಯ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ಮುಡಿಪಾಗಿದ್ದರು. ಅವರ ಕನ್ನಡ ಸಾಹಿತ್ಯದ ಸಂಶೋಧನಾ ಮತ್ತು ಸಂಪಾದಿತ ಕೃತಿಗಳು ಅತ್ಯಮೂಲ್ಯಗಳಾಗಿವೆ ಎಂದರು.
ಮುಖ್ಯ ಅತಿಥಿಗಳಾಗಿ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಗೋವಿಂದರಾವ ತಾಂದಳೆ ಭಾಗವಹಿಸಿ, ಜೀವನಕ್ಕೆ ಸಂಸ್ಕಾರ ನೀಡುವ ಸಾಹಿತ್ಯ ಪ್ರಚಾರ ನಿರಂತರವಾಗಿ ಜರುಗಲಿ ಎಂದು ಆಶೀಸಿದ್ದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷರಾದ ಡಾ. ರವೀಂದ್ರ ಲಂಜವಾಡಕರ ರವರು ಅಧ್ಯಕ್ಷತೆ ವಹಿಸಿ, ಕರ್ನಾಟಕ ಭಕ್ತಿ ಪಂಥದ ಸಾಹಿತ್ಯವು ಬದುಕಿಗೆ ಇಂಬನ್ನು ನೀಡುತ್ತದೆ. ಇಂತಹ ವಿಶ್ವಮಾನ್ಯ ಸಾಹಿತ್ಯವು ನಿರಂತರ ಪ್ರಚಾರ ಮಾಡಲಾಗುವುದು ಎಂದರು. ಶ್ರೀ ಮಹೇಶ ಮೈಲೂರಕರ್, ಕು.ಭಾಗ್ಯಶ್ರೀ ಝಡ್, ಕು. ಇವಾಂಗಲಿ, ಕು.ಸೌಮ್ಯ ಕೆ, ಕು.ಜೆಸ್ಸಿಕಾ ರಾಣಿ, ಕು.ಸಾಕ್ಷಿ ವಿ, ಕೀರ್ತನೆಗಳು ಮತ್ತು ಕುಷ್ಟಗಿರವರ ರಚಿತ ಕವಿತೆ ಹಾಡಿದ್ದರು.
ನಿರೂಪಣೆ -ಶ್ರೀ ಮಹೇಬೂಬ್ ಉಸ್ತಾದ , ಸ್ವಾಗತ-ಕು. ಕಾವೇರಿ ಸೂರ್ವವಂಶಿ, ವಂದನಾರ್ಪಣೆ – ಕು. ದುರ್ಗಾಂಜಲಿ ಮಾಡಿದರು.