ಸಂಜೆವಾಣಿ ವಾರ್ತೆ
ಸಂಡೂರು: ಜು: 13: ಸಂಡೂರು ತಾಲೂಕಿನ 25 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 8 ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ, ಶಿಕ್ಷಕರ ಹುದ್ದೆಗಳು ಹಲವಾರು ದಶಕಗಳಿಂದ ಖಾಲಿ ಇದ್ದು ಕ್ರೀಡಾ ಚಟುವಟಿಕೆ, ಯೋಗ ಸೇರಿ ದೈಹಿಕ ಕಸರತ್ತಿನಿಂದ ಸಾವಿರಾರು ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. 109 ಶಾಲೆಗಳಿಗೆ ಆಟದ ಮೈದಾನವೂ ಇಲ್ಲ, ಇದೀಗ ಡಿ.ಎಂ.ಎಫ್. ನಿಧಿಯ ಅಡಿ ವಿಷಯವಾರು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಂತೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಪರಿಗಣಿಸಿ ನೇಮಿಸಿಕೊಳ್ಳಬೇಕು ಎನ್ನುವ ವಾದ ಮುನ್ನಲೆಗೆ ಬಂದಿದೆ. ಮತ್ತೊಂದು ವಿಪರ್ಯಾಸ ಸಂಗತಿ ಎಂದರೆ ಕೆಲ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿದ್ದರೂ ಸರ್ಕಾರಿ ಪ್ರೌಢಶಾಲೆಗಳಿಗೆ ಆಟದ ಮೈದಾನವಿಲ್ಲ, ವಿದ್ಯಾರ್ಥಿಗಳ ಪಾಲಿಗೆ ಕ್ರೀಡಾ ಚಟುವಟಿಕೆಗಳು ಲೆಕ್ಕಕುಂಟು ಆಟಕ್ಕೆ ಇಲ್ಲ ಎನ್ನವಂತಾಗಿದೆ. ಬಹುತೇಕ ವಿದ್ಯಾರ್ಥಿಗಳಲ್ಲಿ ಕ್ರೀಡೆಗಳ ಕುರಿತು ಆಸಕ್ತಿ ಸಾಮಾಥ್ರ್ಯವಿದ್ದರೂ ಮೈದಾನದ ಕೊರತೆ, ದೈಹಿಕ ಶಿಕ್ಷಣದ ಶಿಕ್ಷಕರು ಇಲ್ಲದಿರುವುದರಿಂದ ತಾಲೂಕು ಮಟ್ಟದ ಅಥವಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಾತ್ರ ಭಾಗಿಯಾಗುವುದು ಅಪರೂಪದ ಸಂಗತಿ, ವಿಭಾಗ ಮತ್ತು ರಾಜ್ಯ ಮಟ್ಟಕ್ಕೆ ತೀರಾ ವಿರಳವಾದ ರೀತಿಯಲ್ಲಿ ಆಯ್ಕೆಯಾಗುವುದು ಸಹಜ.
ಶಾಸಕರ ಪ್ರತಿಕ್ರಿಯೆ: ಡಿ.ಎಂ.ಎಫ್. ನಿಧಿಯಲ್ಲಿ 120 ಶಿಕ್ಷಕರನ್ನು ಹೆಚ್ಚುವರಿಯಾಗಿ ನೇಮಕಾತಿ ವಿಚಾರ ಕೆಲದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು ಇದು ವಿಶೇಷವಾಗಿ ಸಂಡೂರು ತಾಲೂಕಿಗೆ ಅನ್ವಯವಾಗಲಿದೆ.
ಐ.ಅರ್. ಅಕ್ಕಿ ಪ್ರಸ್ತಾವನೆ: ತಾಲೂಕಿನಲ್ಲಿ ಈಗಾಗಲೇ 250 ಜನ ವಿಷಯವಾರು ಅತಿಥಿ ಶಿಕ್ಷಕರನ್ನು ಕೊರತೆಯಿಂದ ಸರ್ಕಾರಿ ಶಾಲೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ಅತಿಥಿ ದೈಹಿಕ ಶಿಕ್ಷಣ, ಶಿಕ್ಷಕ, ಕ್ರಾಫ್ಟ್ ಶಿಕ್ಷಕರ ನೇಮಿಕಾತಿಗಾಗಿ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್. ಅಕ್ಕಿಯವರು ತಿಳಿಸಿದರು.
ಪಿ.ಜಿ.ಕೇಂದ್ರದಲ್ಲಿ ಪರದಾಟ: ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕ್ರೀಡಾ ದೈಹಿಕ ಸಹಾಯಕ ನಿರ್ದೇಶಕರ ನೇಮಕವಾಗಿಲ್ಲ, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಈ ಬಾರಿ ಕ್ರೀಡಾ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುತ್ತಿತ್ತು ಈ ಬಾರಿ ನೇಮಕ ಮಾಡಿಕೊಳ್ಳದೇ ಇರುವುದು ವಿಷಾದನೀಯ. ಪಿ.ಜಿ. ಕೇಂದ್ರದ ವಿದ್ಯಾರ್ಥಿಗಳು ಕ್ರೀಡೆಗಳ ಕುರಿತು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಪಿ.ಜಿ. ಕೇಂದ್ರದ ಬೃಹತ್ ಕ್ರೀಡಾಂಗಣ ಕ್ರೀಡಾ ಸಲಕರಣೆ ನಿರುಪಯುಕ್ತವಾಗಿವೆ.
ನೇಮಕಾರಿ ಮಾಡಿಕೊಂಡಲ್ಲಿ ಅನುಕೂಲ: ತಾಲೂಕಿನಲ್ಲಿ 32ಕ್ಕೂ ಹೆಚ್ಚು ಸಿ.ಪಿ.ಇ.ಡಿ. , ಬಿ.ಪಿ.ಇ.ಡಿ ಸೇರಿ ದೈಹಿಕ ಶಿಕ್ಷಣದ ತರಬೇತಿ ಹೊಂದಿ ನಿರುದ್ಯೋಗಿಗಳಾಗಿದ್ದೇವೆ ಅತಿಥಿ ಶಿಕ್ಷಕರನ್ನು ಡಿ.ಎಂ.ಎಫ್. ನಿಧಿಯಡಿ ನೇಮಕ ಮಾಡಿಕೊಂಡ ಮಾನದಂಡದಡಿ ನೇಮಕಾತಿ ಮಾಡಿಕೊಂಡಲ್ಲಿ ಅನುಕೂಳವಾಗುತ್ತದೆ ಎಂದು ತಾಲೂಕು ನಿರುದ್ಯೋಗಿ ದೈಹಿಕ ಶಿಕ್ಷಕ ಸಮಘದ ಕಾರ್ಯದರ್ಶಿ ಎ.ಪಿ. ಅಂಜಿನಪ್ಪ, ಎಸ್, ಒಬಳಾಪುರ ಪ್ರತಿಕ್ರಿಯಿಸಿದ್ದಾರೆ.
ಬೆದರಿಕೆ ಬಾವು ಕಟ್ಟುತ್ತಾರೆ: ಪ್ರಾಥಮಿಕ , ಪ್ರೌಢಶಾಲೆಯ ಶಿಕ್ಷಣದ ಹಂತದಲ್ಲಿ ದೈಹಿಕ ಶಿಕ್ಷಕರಿಲ್ಲದ ಶಾಲೆಗಳಲ್ಲಿ ಗಣರಾಜ್ಯೋತ್ಸವದ, ಸ್ವಾತಂತ್ರ್ಯ ದಿನಾಚರಣೆ ದಿನzಂದು ಬಾವುಟವನ್ನು ಅಚ್ಚುಕಟ್ಟಾಗಿ ವೈಜ್ಞಾನಿಕವಾಗಿ ಕಟ್ಟುವವರೇ ಇಲ್ಲದಾಗಿದೆ. ವಿಷಯವಾರು ಶಿಕ್ಷಕರು ರಾಷ್ಟ್ರಧ್ವಜವನ್ನು ಹೊಂದಾಣಿಕೆ ಮಾಡಿ ಕಟ್ಟುವ ಪರಿಪಾಠವಿದೆ. ಧ್ವಜಾ ಹಾರಿದ ಮೇಲೆ ತಲೆ ಕೆಳಗಾದರೆ ಕಾನೂನು ಪ್ರಕಾರ ಶಿಕ್ಷಕೆಯಾಗುವ ಭಯ ಶಿಕ್ಷಕರಲ್ಲಿ ಕಾಡುತ್ತಿದೆ. ಹೀಗಾಗಿ ಡಿ.ಎಂ.ಎಫ್. ನಿಧಿಯಡಿ ಅತಿಥಿ ದೈಹಿಕ ಶಿಕ್ಷಕರ ನೇಮಕ ಯಾವಾಗ ಎನ್ನುವ ಪ್ರಶ್ನೆ ಕಾಡುವುದು ಸಹಜವಾಗಿದೆ.