
ಔರಾದ್ : ಮೇ.1:ಕ್ಷೇತ್ರದ ಜನರು 3 ಬಾರಿ ಗೆಲ್ಲಿಸಿದ ಕಾರಣ ಪ್ರಭು ಚವ್ಹಾಣಗೆ ಅಹಂಕಾರ, ದರ್ಪ ಹೆಚ್ಚಾಗಿದ್ದು, ಭ್ರಷ್ಟಚಾರ ಕ್ಷೇತ್ರ ಹಾಳು ಮಾಡಿದ್ದಾರೆ. ಪ್ರಭು ಚವ್ಹಾಣ ಮುಕ್ತ ಔರಾದ್ ಮಾಡುವುದೇ ನಮ್ಮ ಸಂಕಲ್ಪವಾಗಿದೆ ಎಂದು ಏಕತಾ ಫೌಂಡೇಶನ್ ನಿಕಟಪೂರ್ವ ಅಧ್ಯಕ್ಷ ರವಿಂದ್ರ ಸ್ವಾಮಿ ಹೇಳಿದರು. ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಸೇನ್ರಾವ ಶಿಂಧೆ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಮಾತನಾಡಿದರು.
ಪ್ರಭು ಚವ್ಹಾಣಗೆ ದುಡ್ಡಿನ ಮದ, ಅಧಿಕಾರದ ಮದ ಏರಿದೆ. ಆದ್ದರಿಂದ ಕ್ಷೇತ್ರದ ಎಲ್ಲ ಜನರಿಗೂ ಏಕವಚನದಲ್ಲಿ ಮಾತನಾಡುವ, ನಿಂದಿಸುವ ಪ್ರವೃತಿ ಮುಂದುವರಿಸಿದ್ದಾರೆ. ಎಚ್ಚತ್ತುಕೊಂಡು ಎಲ್ಲ ಜನರು ಈ ಬಾರಿ ಚವ್ಹಾಣಗೆ ಹೀನಾಯವಾಗಿ ಸೋಲಿಸಲು ಸಿದ್ದರಾಗಿದ್ದಾರೆ. ನನ್ನ ಜಾತಿ ಪ್ರಮಾಣಪತ್ರವನ್ನು ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ರದ್ದು ಮಾಡಿಸಿದ್ದಾರೆ ಎಂದು ಚವ್ಹಾಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಭು ಚವ್ಹಾಣ ಕಾಂಗ್ರೆಸ್ ಅಭ್ಯರ್ಥಿ ಡಾ. ಶಿಂಧೆ ಬಳಿಯಲ್ಲಿ ಹಣವಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹಣ ಅಗತ್ಯವಿಲ್ಲ. ಒಂದು ವೇಳೆ ಬೇಕಾದರೇ ನಾವುಗಳು ಜೋಳಿಗೆ ಹಿಡಿದು ಹಣ ಸಂಗ್ರಹಿಸಿ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಮಾತನಾಡಿ, ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ಗೆದ್ದರೆ ಜಾತಿನಿಂದನೆ ಪ್ರಕರಣ ಹೆಚ್ಚಳವಾಗುತ್ತವೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ನನಗೆ ಜಾತಿ-ಜಾತಿಗಳಲ್ಲಿ ವಿಷ ಬೀಜ ಬಿತ್ತುವುದು ಗೊತ್ತಿಲ್ಲ. ನನ್ನ ಅವಧಿಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಲು ಬಿಡುವುದಿಲ್ಲ. ಪ್ರಭು ಚವ್ಹಾಣ ಅವಧಿಯಲ್ಲಿ ನಡೆದ ಭ್ರಷ್ಟಚಾರ ತನಿಖೆ ನಡೆಸಲಾಗುತ್ತದೆ. ಲಿಂಗಾಯತ, ಮರಾಠ ಜನರ ಸೇವಕನಾಗಿ ಕೆಲಸ ಮಾಡುತ್ತೇನೆ. ಮಾದಿಗ ಜನಾಂಗದ ಜನರಿಗೆ ಯಾವುದೇ ರೀತಿ ತಾರತಮ್ಯ ಮಾಡುವುದಿಲ್ಲ. ತಾಪಂ, ಜಿಪಂ ಚುನಾವಣೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುವದಾಗಿ ಭರವಸೆ ನೀಡಿದರು. ಇನ್ನೂ ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಕ್ಷೇತ್ರದ ಎಲ್ಲ ಜನಾಂಗದ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದರು.
ಮಾಜಿ ಪಪಂ ಅಧ್ಯಕ್ಷ ಸುನಿಲಕುಮಾರ ದೇಶಮುಖ ಮಾತನಾಡಿ, ಪ್ರಭು ಚವ್ಹಾಣ ಬಳಿ ಅನೇಕ ವರ್ಷದಿಂದ ಕೆಲಸ ಮಾಡಿದ್ದೇನೆ. ಪಕ್ಷದ ಸಂಘಟನೆ, ಅವರ ಗೆಲುವಿಗೆ ಶ್ರಮಿಸಿದ್ದೇನೆ. ಜನರ ಕೆಲಸ ತೆಗೆದುಕೊಂಡು ಹೋದಾಗ ಸ್ಪಂದಿಸಿಲ್ಲ. ಧೋತಿವಾಲ, ಟಕ್ಲೂ ಎಂದು ಅಧಿಕಾರಿಗಳಿಗೆ ಮೇಲ್ವರ್ಗದ ಜನರಿಗೆ ನಿಂದಿಸಿರುವ ಉದಾರಣೆಗಳಿವೆ ಎಂದರು.
ಮಾಜಿ ಜಿಪಂ ಸದಸ್ಯ ಕಾಶಿನಾಥ ಜಾಧವ ಮಾತನಾಡಿ, ಸಂಸದ ಭಗವಂತ ಖೂಬಾ ಕೇಂದ್ರ ಸಚಿವರಾದಾಗ ಸತ್ಕರಿಸಿದರಿಂದ ನನಗೆ ಕಡೆಗಣಿಸಿದ್ದಾರೆ. ಇನ್ನೂ ಲಂಬಾಣಿ ಜನಾಂಗಕ್ಕೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮೀಸಲಾತಿ ಕಡಿತಗೊಳಿಸಿದರೂ ಸರಕಾರದ ವಿರುದ್ಧ ಚವ್ಹಾಣ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಾಜಿ ಬ್ರಿಗೇಡ್ ಅಧ್ಯಕ್ಷ ಸತೀಶ ವಾಸರೆ ಮಾತನಾಡಿ, ಪ್ರಭು ಚವ್ಹಾಣ ಮರಾಠ ಜನರ ನಡುವೆ ಜಗಳ ಹಚ್ಚಿದ್ದಾರೆ. ಈ ಚುನಾವಣೆಯಲ್ಲಿ ಮರಾಠ ಶಕ್ತಿ ತೋರಿಸುತ್ತೇವೆ. ಮಾಹಾತ್ಮರ ಜಯಂತಿ ಮಾಡುವಾಗ 144 ಕಲಂ ಜಾರಿ ಮಾಡಿಸಿದ ಪ್ರಭು ಚವ್ಹಾಣ ನಡೆಯನ್ನು ಮರಾಠ ಸಮಾಜ ಚುನಾವಣೆಯಲ್ಲಿ ಪಾಠ ಕಲಿಸಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ರಮೇಶ ದೇವಕತ್ತೆ, ನೇಹರು ಪಾಟೀಲ್, ಧನಾಜಿ ಜಾಧವ, ಸಿದಾರ್ಥ ರಾಠೋಡ್ ಸೇರಿದಂತೆ ಅನೇಕರಿದ್ದರು. ಈ ವೇಳೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.