
ಕಲಬುರಗಿ:ಜು 05: ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ ಅವರದು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಠ ಸಾಧನೆ. ಇಂಗ್ಲೀಷ್ನ ಆರ್.ಕೆ.ನಾರಾಯಣ ಅವರ ‘ಮಾಲ್ಗುಡಿ’ ಕೃತಿಗಿಂತ ಮೊದಲೇ ಅಯ್ಯಂಗಾರ ಅವರು ಗ್ರಾಮಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದ್ದ ಅವರು, ಹರಿಜನ ಮತ್ತು ಗ್ರಾಮಗಳ ಉದ್ದಾರಕ್ಕಾಗಿ ಶ್ರಮಿಸಿದ ಅಪ್ಪಟ ಗಾಂಧಿವಾದಿಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಬಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ, ಶಿವಾ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಗೊರೂರು ಅವರದು ವಿಶಿಷ್ಟ ಸಾಹಿತ್ಯ ಕೃಷಿ ಸಮೃದ್ಧವಾದದ್ದು. ಪ್ರಬಂಧ, ಕಥೆ, ಲೇಖನ, ಪ್ರವಾಸ ಕಥನ, ಕಾದಂಬರಿ, ಜೀವನ ಚಿತ್ರ್ರ, ಪ್ರವಾಸ ಕಥನ, ಭಾಷಾಂತರ ಹೀಗೆ ವಿವಿಧ ಮುಖಗಳಲ್ಲಿ ಸಾಹಿತ್ಯವನ್ನು ರಚಿಸಿದ್ದಾರೆ. ಜಾನಪದ ಸಂಸ್ಕøತಿ, ಗ್ರಾಮೀಣ ಸೊಗಡಿನ ಬಗ್ಗೆ ವಿಶೇಷ ಉಲ್ಲೇಖಿಸಿದ್ದು ಕಂಡುಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಸೇವಕಿ ಸುನೀತಾ ಸೇರಿದಂತೆ ಇನ್ನಿತರರಿದ್ದರು.