ಪ್ರತಿ ವಿಶ್ವ ವಿದ್ಯಾಲಯದ ಘನತೆ ಇಮ್ಮಡಿಗೊಳಿಸುವುದು ಪ್ರಸಾರಾಂಗದ ಕಾರ್ಯ: ಪ್ರೊ.ಪರಮಶಿವಮೂರ್ತಿ


ಬಳ್ಳಾರಿ,ಅ,1- ಸಾಹಿತ್ಯ, ಚರಿತ್ರೆ, ಸೊಬಗು ಮತ್ತು ಸ್ಥಳೀಯ ಸಾಧಕರ ಸಾಧನೆಯನ್ನು ಗುರುತಿಸಿ ಪ್ರಕಟಣೆಗೊಳಿಸಿ ವಿಶ್ವವಿದ್ಯಾಲಯದ ಘನತೆಯನ್ನು ಉನ್ನತೀಕರಣಗೊಳಿಸುವುದು ಪ್ರತಿ ವಿಶ್ವವಿದ್ಯಾಲಯದ ಪ್ರಸಾರಾಂಗದ ಮುಖ್ಯ ಉದ್ದೇಶವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ವಿಶ್ವವಿದ್ಯಾಲಯದ ಜೀವವಿಜ್ಞಾನ ಕಟ್ಟಡದ ಪ್ರೊ.ಸಿದ್ದು ಪಿ.ಆಲಗೂರ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪ್ರಸಾರಾಂಗ ಪುಸ್ತಕಗಳ ಲೋಕಾರ್ಪಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಸಂಸ್ಕೃತಿಗಳನ್ನು ಒಳಗೊಂಡ ಭಾರತೀಯ ಸಂಸ್ಕೃತಿಯೂ ವಿಶ್ವಾಸದ ಪ್ರತೀಕವಾಗಿದೆ. ಆದರೆ ಬ್ರಿಟೀಷರದ್ದು ದಾಖಲಾತಿಯ ಸಂಸ್ಕೃತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಬಳ್ಳಾರಿ ಜಿಲ್ಲೆಯೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಹರಪ್ಪ, ಮೆಹೆಂಜೋದಾರೊ ನಾಗರೀಕತೆಯ ಸಮಕಾಲೀನ ವಸತಿ ಪುರಾವೆಗಳನ್ನು ಇಲ್ಲಿನ ಸಂಗನಕಲ್ಲು, ತೆಕ್ಕಲಕೋಟೆ, ಕುರುಗೋಡು ಮುಂತಾದ ಕಡೆಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಯದ ನಿವೃತ್ತ ಕುಲಸಚಿವರಾದ ಪ್ರೊ.ಶಾಂತಿನಾಥ ದಿಬ್ಬದ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಕಡಿಮೆಯಾಗುತ್ತಿದೆ. ಲೇಖಕರು ಹಲವಾರು ಪೂರಕ ಅಂಶಗಳಿಂದ ಮಾಹಿತಿ ಸಂಗ್ರಹಿಸಿ ಪುಸ್ತಕಗಳನ್ನು ರಚಿಸಿರುತ್ತಾರೆ. ಪುಸ್ತಕಗಳನ್ನು ಖರೀದಿಸಿ ಓದುವ ಪರಿಪಾಠವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಮಾತನಾಡಿ, ಪ್ರಸಾರಂಗವು 2016ರಲ್ಲಿ ಪ್ರಾರಂಭವಾಗಿ ಸೀಮಿತ ಅವಧಿಯಲ್ಲಿ ಹೆಚ್ಚು ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೆ 140 ಲೇಖಕರನ್ನು ಸಂಪರ್ಕಿಸಿ 24 ಲೇಖನಗಳನ್ನು ಸಂಪೂರ್ಣಗೊಳಿಸಲಾಗಿದೆ. ಪ್ರಸಕ್ತವಾಗಿ 7 ಪುಸ್ತಕಗಳಲ್ಲಿ ಒಂದು ಪುಸಕ್ತವನ್ನು ರಾಜ್ಯಪಾಲರು 11 ನೇ ಘಟಿಕೋತ್ಸದಲ್ಲಿ ಬಿಡುಗಡೆಗೊಳಿಸಿದ್ದರು. ಉಳಿದ ಆರು ಪುಸ್ತಕಗಳು ಇಂದು ಲೋಕಾರ್ಪಣೆಯಾಗಿವೆ ಎಂದು ಹೇಳಿದರು.
ಪ್ರಸಾರಾಂಗದ ಕೊಡುಗೆ ವಿಶ್ವವಿದ್ಯಾಲಯಕ್ಕೆ ಅಪಾರವಾಗಿದ್ದು, ಘಟಿಕೋತ್ಸವದ ಭಾಷಣಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಅಲ್ಪ ಅವಧಿಯಲ್ಲಿ ಹೆಚ್ಚು ಮಹತ್ವಪೂರ್ಣ ಕೆಲಸ ಮಾಡಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎಸ್.ಸಿ.ಪಾಟೀ¯, ಪ್ರಸಾರಾಂಗದ ಪ್ರಭಾರಿ ನಿರ್ದೇಶಕರಾದ ಡಾ.ಬಿ.ಜಿ.ಕನಕೇಶಮೂರ್ತಿ, ಡಾ.ಹೊನ್ನೂರಲಿ, ಡಾ.ಶ್ರೀದೇವಿ ಆಲೂರ, ಡಾ.ಅರುಣಕುಮಾರ ಲಗಶೆಟ್ಟಿ ಸೇರಿದಂತೆ ಮಾಜಿ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.