ಕಲಬುರಗಿ:ಸೆ.28: ಜಿಲ್ಲೆಯ ಪ್ರತಿ ವಿಧಾನಸಭಾ ಮತಕ್ಷೇತ್ರದಲ್ಲಿ ಆರು ಕನ್ನಡ ಮಾಧ್ಯಮ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವಲ್ಲಿ ಜಿಲ್ಲಾಡಳಿತದಿಮದ ಯೋಜನೆ ರೂಪಿಸಲಾಗುತ್ತಿದೆ ಎಂದು ಐಎಎಸ್ ಅಧಿಕಾರಿ ಗಜಾನನ್ ಬಾಲೆ ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದೊಂದಿಗೆ ಆದರ್ಶ ಶಿಕ್ಷಕಿಯಾಗಿದ್ದ ಲಿಂ. ಸಿದ್ದಮ್ಮಾ ಶಿವಾನಂದ್ ಮಠಪತಿ ವೇದಿಕೆಯಡಿಯಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಗುರುವಾರ ಏರ್ಪಡಿಸಿದ ಒಂದು ದಿನದ ಶಿಕ್ಷಕ ಸಾಹಿತಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಪರಿವರ್ತನೆ ಆಗಬೇಕಾದರೆ ಶಿಕ್ಷಕ ಸಾಹಿತಿಗಳಿಂದ ಮಾತ್ರ ಸಾಧ್ಯ. ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳಿಗೂ ದೊಡ್ಡ ಪ್ರಮಾಣದ ಪ್ರಾಶಸ್ತ್ಯ ದೊರಕುವಂತಾಗಲಿ. ಆ ದಿಸೆಯಲ್ಲಿ ಈ ಭಾಗದ ಸಾಹಿತಿಗಳು ತಮ್ಮಲ್ಲಿನ ಜ್ಞಾನ ಹೊರ ಹಾಕಲಿ ಎಂದರು.
ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಸಮಾಜದ ಸಮಸ್ಯೆ ಪರಿಹರಿಸಿ ಸಂಸ್ಕಾರಯುತ ಬದುಕನ್ನು ಕಟ್ಟಿ ಬೆಳೆಸುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಕನ್ನಡ ಉಳಿಸಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅವಶ್ಯವಾಗಿದೆ. ಕನ್ನಡದ ಉಳಿವಿಗೆ ಮಾತೃಭಾಷೆಯ ಶಾಲೆಗಳು ಬೆಳೆಸಬೇಕಾಗಿದೆ. ಜಿಲ್ಲೆಯ ಶಿಕ್ಷಕರನ್ನು ಒಂದೆಡೆ ಸೇರಿಸುವಂಥ ಹೊಸ ಆಲೋಚನೆ ಈ ಕಾರ್ಯಕ್ರಮದ ಮೂಲಕ ನೆರವೇರಿಸಲಾಗಿದೆ. ಜನಮಾನಸದ ಪರಿಷತ್ತನ್ನಾಗಿ ರೂಪಿಸಬೇಕೆಂಬ ಉದ್ದೇಶದಿಂದ ಈ ರೀತಿಯ ಜನಮುಖಿ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದೆ ಎಂದರು.
ವಿಜಯಕುಮಾರ್ ತೇಗಲತಿಪ್ಪಿ ಹಾಗೂ ಮಹೇಶ್ ಹೂಗಾರ್ ಸಂಪಾದಕತ್ವದ ಜಿಲ್ಲೆಯ ಶಿಕ್ಷಕರು ರಚಿಸಿರುವ ಕವನಗಳನ್ನೊಳಗೊಂಡಿರುವ `ಅರಿವೇ ಗುರು’ ಪ್ರಾತಿನಿಧಿಕ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಸುರೇಶ್ ಆರ್. ಸಜ್ಜನ್ ಅವರು ಮಾತನಾಡಿ, ಶಿಕ್ಷಕ ವೃತ್ತಿಯ ಜತೆಗೆ ಸಾಹಿತ್ಯ, ಸಂಗೀತ ಮತ್ತು ಕಲೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ. ಇಂದು ಗುರುಗಳ ಸೇವೆ ಸದಾ ಸ್ಮರಿಸುವಂಥದು. ಮಕ್ಕಳಿಗೆ ಪ್ರೀತಿಯ ಜೊತೆ ಜ್ಞಾನದ ಬೋಧನೆ ಮುಖ್ಯ ಎಂದರು.
ಗುರೂಜಿ ಪದವಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ್ ಶೀಲವಂತ್ ಅವರು ಮಾತನಾಡಿ, ಶಿಕ್ಷರು ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಾಹಿತಿಗಳಾಗಿ ಹೊರ ಹೊಮ್ಮಬೇಕು. ಆ ಮೂಲಕ ಸಮಾಜ ಸೇವೆ ಮಾಡುವಲ್ಲಿ ಹೆಚ್ಚು ಶಕ್ತಿ ಬರಲು ಸಾಧ್ಯ ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಹೂಗಾರ್ ಅವರು ಮಾತನಾಡಿದರು.
ಪರಿಷತ್ನ ಶಿವರಾಜ್ ಅಂಡಗಿ, ಯಶ್ವಂತರಾಯ್ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ರಾಜೇಂದ್ರ ಮಾಡಬೂಳ್, ಸೋಮಶೇಖರ್ ಮಠ್, ಧರ್ಮಣ್ಣ ಹೆಚ್. ಧನ್ನಿ, ರವೀಂದ್ರಕುಮಾರ್ ಭಂಟನಳ್ಳಿ, ಸಿದ್ಧಲಿಂಗ್ ಬಾಳಿ, ರೇಣುಕಾ ಡಾಂಗೆ, ಡಾ. ನಾಗೇಂದ್ರ ಮಸೂತಿ, ಪ್ರೊ. ಎಸ್.ಎಲ್. ಪಾಟೀಲ್, ವಿಶ್ವನಾಥ್ ತೋಟ್ನಳ್ಳಿ, ಡಾ. ಬಾಬುರಾªವ್ ಶೇರಿಕಾರ್ ಮುಂತಾದವರು ಉಪಸ್ಥಿತರಿದ್ದರು.
ನಂತರ ಗೋಷ್ಠಿಯಲ್ಲಿ ಶಿಕ್ಷಕರ ಕರ್ತವ್ಯಗಳು: ಪ್ರಸ್ತುತ ಸವಾಲುಗಳು ವಿಷಯದ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ್ ವಿಸಾಜಿ ಅವರು ಮಾತನಾಡಿ, ಕೌಶಲ್ಯ ಜ್ಞಾನ ಮತ್ತು ಮೌಲ್ಯಗಳನ್ನು ಕಾಲ ಕಾಲಕ್ಕೆ ಮಕ್ಕಳಿಗೆ ತಲುಪಿಸುವ ಕೆಲಸ ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಹಿಂಜರಿಕೆ, ಕೀಳರಿಮೆ ಅಳಸಿ ಲೋಕ ದೃಷ್ಟಿ ವಿಸ್ತರಿಸುವ ಜವಾಬ್ದಾರಿ ಶಿಕ್ಷಕರಾಗಿದೆ ಎಂದರು.
ಗಾಂಧೀಜಿ, ಬುದ್ಧ, ಬಸವ, ಡಾ. ಅಂಬೇಡ್ಕರ್ ರವರ ವ್ಯಕ್ತಿತ್ವದ ಪರಿಚಯ ಮಕ್ಕಳಿಗೆ ಪರಿಚಯಿಸಿದಾಗ ಅವರಲ್ಲಿ ಹೊಸ ಆಲೋಚನೆ ಮೂಡಲು ಸಾಧ್ಯ. ಸಮಸ್ಯೆ ಮತ್ತು ಸವಾಲುಗಳು ಮಧ್ಯೆ ನಮ್ಮ ಶಿಕ್ಷಕರು ಕಲಿಕೆ ಕ್ರಮ ಎದುರಿಸಬೇಕಾಯಿತು. ಶಿಕ್ಷಕರು ಹೊಸ ಪ್ರಯೋಗಗಳನ್ನು ಅನುಸರಿಸಿ ಪಾಠ ಬೋಧನೆ ಮಾಡಬೆಕು. ಆ ಮೂಲಕ ಕಲಿಕಾ ಸಾಮಥ್ರ್ಯ ವೃದ್ಧಿಸಿಕೊಳ್ಳುತ್ತಾ ಹೋಗಬೇಕು ಎಂದು ಅವರು ತಿಳಿಸಿದರು.
ಶಿಕ್ಷಣದಲ್ಲಿ ಮೌಲ್ಯಗಳು ಕುರಿತು ರಾಯಚೂರಿನ ತಹಸಿಲ್ದಾರ್ ಸುರೇಶ್ ವರ್ಮಾ ಅವರು ಮಾತನಾಡಿ, ಇಂದಿನ ತಾಂತ್ರಿಕ ಜೀವನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮ್ವಲ್ಯಗಳು ಕುಸಿಯುತ್ತಿವೆ. ಆದರೂ ಕೂಡ ಶಿಕ್ಷಕರಾದವರು ಮಕ್ಕಳಲ್ಲಿ ಮಾನವೀಯ ಮ್ವಲ್ಯಗಳನ್ನು ತುಂಬಬೇಕಾಗಿದೆ. ಮತ್ತೇ ನಾವೆಲ್ಲರೂ ಸಮಾಜದೊಳಗೆ ಜೀವನ ಮೌಲ್ಯಗಳು ಬಿತ್ತ ಬೇಕಾದರೆ ಶಿಕ್ಷಕರು ಮುಂದಾಗಬೇಕು ಎಂದರು. ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಸಹ ನಿರ್ದೇಶಕ ಎನ್.ಬಿ. ಪಾಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಜಮಖಂಡಿ, ಬಾಬು ಮೌರ್ಯ, ಮುಡುಬಿ ಗುಂಡೇರಾವ್, ದತ್ತಾತ್ರೇಯ್ ವಿಶ್ವಕರ್ಮ, ಸುಜಾತಾ ಪಾಟೀಲ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಗಮನ ಸೆಳೆದ ಕವಿಗೋಷ್ಠಿ: ಶಿಕ್ಷಕರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್ ಅವರು ಮಾತನಾಡಿ, ಕಾವ್ಯ ಜನಮಿಡಿತವಾಗಬೇಕು. ನಾಲ್ಕು ಗೋಡೆಯೊಳಗೆ ಕಾಗದದಲ್ಲಿ ಉಳಿಯಬಾರದು. ಕಾವ್ಯದ ಸಲುಗಳು ಸಂಗೀತದಲ್ಲಿ ಮಿಂದೆದ್ದಾಗ ಹೊಸ ಚೈತನ್ಯ ಮುಡುತ್ತದೆ. ವಾಸ್ತವ ಸಮಾಜ ಕಟ್ಟುವಲ್ಲಿ ಸಾಹಿತ್ಯ ಪ್ರೇರಣೆ ನಿಡುತ್ತದೆ. ಹೀಗಾಗಿ ವಾಸ್ತವ ಘಟನೆಗಳು ಕಾವ್ಯದ ವಿಷಯಗಳಾಗಬೆಕು ಎಂದು ಸಲಹೆ ನೀಡಿದರು.
ಕವಿಗಳಾದ ಧರ್ಮಣ್ಣ ಹೆಚ್. ಧನ್ನಿ, ರಾಜಶೇಖರ್ ಮಾಂಗ್, ಡಾ. ಕೆ. ಗಿರಿಮಲ್ಲ, ರೇಣುಕಾ ಡಾಂಗೆ, ಪರ್ವಿನ್ ಸುಲ್ತಾನಾ, ಅರ್.ಹೆಚ್. ಪಾಟೀಲ್, ಸುನಂದಾ ಕಲ್ಲಾ, ವೀರಸಂಗಪ್ಪ ಸುಲೇಗಾಂವ್, ರಾಜೇಂದ್ರ ಝಳಕಿ, ಪ್ರಭುಲಿಂಗ್ ಮೂಲಗೆ, ಗಂಗಮ್ಮ ನಾಲವಾರ್, ಉಷಾ ಗೊಬ್ಬೂರ್, ಬಾಬು ಜಾಧವ್, ಬಿ.ಎಂ. ರಾವ್, ಸಿದ್ದಲಿಂಗ್ ಬಾಳಿ, ರಾಜೇಶ್ ನಾಗೂರೆ, ಕವಿತಾ ಮಾಲಿಪಾಟೀಲ್ ಸೇರಿದಂತೆ ಅನೇಕÀ ಕವಿಗಳು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲವ ಪ್ರಯತ್ನ ಮಾಡಿ ಪ್ರೇಕ್ಷಕರ ಗಮನ ಸೆಳೆದರು. ಜಿಲ್ಲೆಯ ಅನೇಕ ಶಿಕ್ಷಕ ಸಾಹಿತಿಗಳನ್ನೂ ಸಹ ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.